ಹುಬ್ಬಳ್ಳಿ: ‘ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಜಾತಿಗಣತಿ ಕೈಗೊಂಡಿದ್ದು ಕಾಂಗ್ರೆಸ್ ಸರ್ಕಾರವೇ ಹೊರತು ಬಿಜೆಪಿ ಅಲ್ಲ. 2011ರಲ್ಲಿ ದೇಶದ ಸಾಮಾಜಿಕ, ಆರ್ಥಿಕ ಜಾತಿ ಗಣತಿ ನಡೆಸಲಾಗಿದೆ’ ಎಂದು ಕೆಪಿಸಿಸಿ ವಕ್ತಾರ ವಸಂತ ಲದವಾ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ತ್ರಿಪುರಾ ಜಿಲ್ಲೆಯ ಹಜೆಮೂರಾ ಬ್ಲಾಕ್ನ ಸಂಖೋಲಾ ಗ್ರಾಮದಿಂದ 2011ರ ಜೂನ್ 29ರಂದು ಜಾತಿಗಣತಿ ಆರಂಭಿಸಲಾಗಿತ್ತು. ದೇಶದ 640 ಜಿಲ್ಲೆಗಳಲ್ಲಿ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಿ ನಡೆಸಿದ ಭಾರತದ ಮೊದಲ ಕಾಗದ ರಹಿತ ಜಾತಿಗಣತಿ ಇದಾಗಿತ್ತು. ಕಾಂಗ್ರೆಸ್ ಸರ್ಕಾರದ ಈ ಬೃಹತ್ ಸಾಧನೆ ಮರೆಮಾಚಲು ಇತಿಹಾಸದ ಪುಟಗಳನ್ನು ನೋಡದೆ ಬಿಜೆಪಿ ಸತ್ಯಕ್ಕೆ ದೂರವಾದ ಹೇಳಿಕೆ ಕೊಡುತ್ತಿದೆ’ ಎಂದು ಅವರು ಕಿಡಿ ಕಾರಿದ್ದಾರೆ.
‘ಸಾಮಾಜಿಕ ನ್ಯಾಯ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಸುಧಾರಿಸಲು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಹಾಗೂ ಇತರ ಸೌಲಭ್ಯ ನಿಗದಿಪಡಿಸಲು, ಅಸಮಾನತೆ ನಿವಾರಿಸಲು ಸಂವಿಧಾನ ಮತ್ತು ಕಾನೂನುಗಳ ಮೂಲಕ ಕಾಂಗ್ರೆಸ್ ನಿರಂತರವಾಗಿ ಶ್ರಮಿಸುತ್ತಿದೆ. ರಾಜ್ಯದಲ್ಲಿಯೂ ಆಯೋಗಗಳ ಸ್ಥಾಪನೆಯಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.