ADVERTISEMENT

ಸುಪ್ರೀಂ ಮೊರೆ ಹಿಂದೆ ಕಾಂಗ್ರೆಸ್ ಕುಮ್ಮಕ್ಕು: ಜೋಶಿ

ಈದ್ಗಾದಲ್ಲಿ ಗಣೇಶೋತ್ಸವ ಪ್ರಶ್ನಿಸಿ ಅಂಜುಮನ್‌ ಸಂಸ್ಥೆಯಿಂದ ಸುಪ್ರೀಂಗೆ ಮೊರೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2022, 15:35 IST
Last Updated 31 ಆಗಸ್ಟ್ 2022, 15:35 IST
   

ಹುಬ್ಬಳ್ಳಿ: ನಗರದ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಅಂಜುಮನ್–ಎ–ಇಸ್ಲಾಂ ಸಂಸ್ಥೆಯವರು ಸುಪ್ರೀಂ ಕೋರ್ಟ್‌ ಮೋರೆ ಹೋಗಿರುವುದರ ಹಿಂದೆ ಕಾಂಗ್ರೆಸ್ ಕುಮ್ಮಕ್ಕಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿ ನೀತಿಯನ್ನು ಬಿಡಬೇಕು. ಎಲ್ಲದಕ್ಕೂ ಕಲ್ಲು ಹಾಕುತ್ತಿರುವ ಆ ಪಕ್ಷದ ಸ್ಥಿತಿ ದೇಶದಾದ್ಯಂತ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಕರ್ನಾಟಕದಲ್ಲಿಯೂ ಅದೇ ಸ್ಥಿತಿ ಬರಲಿದೆ ಎಂದು ವಾಗ್ದಾಳಿ ನಡೆಸಿದರು.

ಈ ವಿಷಯದಲ್ಲಿ ಕೆಲವು ರಾಜಕೀಯ ಪಕ್ಷಗಳು ದಾರಿ ತಪ್ಪಿಸೋ ಕೆಲಸ ಮಾಡುತ್ತಿವೆ. ಪಕ್ಷಗಳು ಇದನ್ನು ವಿರೋಧಿಸಿದ್ದೇ ತಪ್ಪು. ಇದು ಪಾಲಿಕೆಗೆ ಸೇರಿದ ಮೈದಾನವೆಂದು ಈಗಾಗಲೇ ತೀರ್ಮಾನವಾಗಿದೆ. ಪಾಲಿಕೆ ಅನುಮತಿಯೊಂದಿಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆಯೂ ಆಗಿದೆ ಎಂದರು.

ADVERTISEMENT

ಆದೇಶಕ್ಕೆ ಬದ್ಧ: ಶೆಟ್ಟರ್

ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ, ಅಂಜುಮನ್‌–ಎ–ಇಸ್ಲಾಂ ಸಂಸ್ಥೆಯವರು ಸುಪ್ರೀಂ ಕೋರ್ಟ್‌ಗೆ ಹೋಗಿದ್ದಾರೆ. ಮುಂದೆ ಕೋರ್ಟ್ ನೀಡುವ ಆದೇಶಕ್ಕೆ ಬದ್ಧವಾಗಿರುತ್ತೇವೆ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.

ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣೇಶೋತ್ಸವಕ್ಕಾಗಿ ಹಿಂದೂ ಸಂಘಟನೆಗಳು ಹಾಗೂ ಗಜಾನನ ಮಂಡಳಿಗಳು ಹಿಂದಿನಿಂದಲೂ ಅನುಮತಿ ಕೇಳುತ್ತಲೇ ಇದ್ದವು. ಅವರ ಮನವಿಯನ್ನು ಪರಿಗಣಿಸಿ ಮಹಾನಗರ ಪಾಲಿಕೆ ಈ ಬಾರಿ ಅನುಮತಿ ಕೊಟ್ಟಿದೆ. ಹೈಕೋರ್ಟ್ ಕೂಡ ಗ್ರೀನ್ ಸಿಗ್ನಲ್ ನೀಡಿದೆ. ಅದರಂತೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.