ಹುಬ್ಬಳ್ಳಿ: ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಮಂಟೂರು ಕ್ರಾಸ್ ಬಳಿಯ ಅರಳಿಕಟ್ಟಿ ಓಣಿಯ ಜನರ ಭೇಟಿಗೆ ತೆರಳಿದಾಗಕಾಂಗ್ರೆಸ್ ಶಾಸಕ ಪ್ರಸಾದ ಅಬ್ಬಯ್ಯ ತಮ್ಮ ಗನ್ ಮ್ಯಾನ್ ಕೈಯಲ್ಲಿ ಶೂ ಕೊಟ್ಟಿದ್ದರು ಎನ್ನುವ ಆರೋಪ ಕೇಳಿ ಬಂದಿದೆ.
ಲೆದರ್ ಶೂ ಹಾಕಿಕೊಂಡಿದ್ದ ಅಬ್ಬಯ್ಯ ಸಾಕಷ್ಟು ನೀರು ನಿಂತಿದ್ದರಿಂದ ಕಾರಿನಿಂದ ಕೆಳಗಿಳಿಯಲು ಹಿಂದೇಟು ಹಾಕಿದ್ದರು ಎನ್ನಲಾಗಿದೆ. ಆಗ ಸ್ಥಳೀಯರು ‘ನಾವೇ ಚಪ್ಪಲಿ ಕೊಡುತ್ತೇವೆ ಬನ್ನಿ’ ಎಂದ ಬಳಿಕ ಅವರು ಕೆಳಗಿಳಿದರು. ಆ ಶೂಗಳನ್ನು ಗನ್ ಮ್ಯಾನ್ ಕೈಯಲ್ಲಿ ಹಿಡಿದುಕೊಂಡು ಹೋದರು ಎನ್ನುವ ದೂರು ಕೇಳಿ ಬಂದಿದೆ.
ಇದರ ಬಗ್ಗೆ ಪ್ರತಿಕ್ರಿಯಿಸಿದ ಅಬ್ಬಯ್ಯ ‘ಅರಳಿಕಟ್ಟಿ ಓಣಿಯಲ್ಲಿ ಮೊಣಕಾಲಿಗಿಂತಲೂ ಹೆಚ್ಚು ನೀರು ನಿಂತಿದ್ದರಿಂದ ಬೂಟು ಹಾಕಿಕೊಂಡು ಹೋಗಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಪಕ್ಕದಲ್ಲಿದ್ದವರ ಚಪ್ಪಲಿ ಇಸಿದುಕೊಂಡು ಹೋದೆ. ನಂತರ ಏನಾಯಿತು ಎಂಬುದು ಗೊತ್ತಿಲ್ಲ. ಆ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಜನರನ್ನು ರಕ್ಷಿಸುವುದಷ್ಟೇ ನನ್ನ ಗುರಿಯಾಗಿತ್ತು. ಈ ರೀತಿಯ ಕೀಳು ಮಟ್ಟದ ರಾಜಕಾರಣ ಮಾಡುವುದು ಸರಿಯಲ್ಲ. ಗನ್ ಮ್ಯಾನ್ ಕೈಯಲ್ಲಿ ಶೂ ಕೊಟ್ಟಿಲ್ಲ’ ಎಂದು ಸ್ಪಷ್ಟಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.