ADVERTISEMENT

ಕೋವಿಡ್‌-19: ಧಾರವಾಡ ಜಿಲ್ಲೆಯಲ್ಲಿ ಇಂದಿನಿಂದ ಸಂಪೂರ್ಣ ಲಾಕ್‌ಡೌನ್‌

​ಪ್ರಜಾವಾಣಿ ವಾರ್ತೆ
Published 22 ಮೇ 2021, 3:15 IST
Last Updated 22 ಮೇ 2021, 3:15 IST
ಹುಬ್ಬಳ್ಳಿಯ ದುರ್ಗದ ಬೈಲ್‌ ಮಾರುಕಟ್ಟೆ ಪ್ರದೇಶದಲ್ಲಿ ಶನಿವಾರ ಪೊಲೀಸರು ವಾಹನ ಸವಾರರನ್ನು ವಿಚಾರಿಸಿದರು
ಹುಬ್ಬಳ್ಳಿಯ ದುರ್ಗದ ಬೈಲ್‌ ಮಾರುಕಟ್ಟೆ ಪ್ರದೇಶದಲ್ಲಿ ಶನಿವಾರ ಪೊಲೀಸರು ವಾಹನ ಸವಾರರನ್ನು ವಿಚಾರಿಸಿದರು   

ಹುಬ್ಬಳ್ಳಿ: ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿನ ಸರಪಳಿ ಕಳಚಲು ಜಿಲ್ಲಾಡಳಿತ ಶನಿವಾರ ಹಾಗೂ ಭಾನುವಾರ ಸಂಪೂರ್ಣ ಲಾಕ್‌ಡೌನ್‌ ಘೋಷಿಸಿದೆ. ಹಾಲು ಹಾಗೂ ಹಣ್ಣುಗಳ ಖರೀದಿಗೆ ಬೆಳಿಗ್ಗೆ ಎರಡು ತಾಸು ಮಾತ್ರ ಅವಕಾಶ ಕೊಟ್ಟಿದ್ದರೂ, ಬಹಳಷ್ಟು ಕಡೆ ಜನರೇ ಕಾಣಲಿಲ್ಲ.

ಅಲ್ಲಲ್ಲಿ ಆಯಾ ಬಡಾವಣೆಗಳ ಸಮೀಪದ ಅಂಗಡಿಗಳಲ್ಲಿ ಜನ ಹಾಲು ಖರೀದಿಸಿ ವಾಪಸ್‌ ಹೋಗುತ್ತಿದ್ದರು. ಬೆಳಿಗ್ಗೆ 6ಗಂಟೆಯಿಂದ 8ರ ತನಕ ಅಂಗಡಿ ತೆರೆದಿದ್ದವು. ಈ ಸಮಯಕ್ಕೂ ಮೊದಲೇ ಪೊಲೀಸರು ಜನರನ್ನು ವಾಪಸ್‌ ಕಳುಹಿಸುತ್ತಿದ್ದ ಚಿತ್ರಣ ಕಂಡುಬಂತು.

ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಹೊಸೂರು ವೃತ್ತ, ರೈಲು ನಿಲ್ದಾಣ, ಕೇಶ್ವಾಪುರ ವೃತ್ತ ಹೀಗೆ ಪ್ರಮುಖ ಪ್ರದೇಶಗಳಲ್ಲಿ ಪೊಲೀಸರು ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು. ದುರ್ಗದ ಬೈಲ್‌ನಲ್ಲಿ ಹೊರಗಡೆ ಬರಲು ಜನರಿಗೆ ಪೊಲೀಸರು ಅವಕಾಶ ನೀಡಲಿಲ್ಲ. ಲಾಕ್‌ಡೌನ್‌ ಅವಧಿಯಲ್ಲಿ ಹೋಟೆಲ್‌ಗಳಲ್ಲಿ ಪಾರ್ಸಲ್‌ ಸೇವೆಗೆ ಅವಕಾಶ ಕೊಡಲಾಗಿತ್ತು. ಈಗ ಇದಕ್ಕೂ ಅವಕಾಶವಿಲ್ಲ.

ADVERTISEMENT

ಕಾರ್ಮಿಕರಷ್ಟೇ ಕಂಡರು: ನಗರದಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಸಂಜೆ ಅಬ್ಬರದ ಮಳೆ ಸುರಿದು ರಾತ್ರಿಯೂ ಮುಂದುವರಿದಿತ್ತು. ಹೀಗಾಗಿ ಶನಿವಾರ ಬೆಳಿಗ್ಗೆಯಿಂದಲೇ ಮೋಡಕವಿದ ಹಾಗೂ ತಂಪಾದ ವಾತಾವರಣವಿದೆ.

ಈ ಮಳೆಯಿಂದಾಗಿ ಚರಂಡಿಯ ಕಸವೆಲ್ಲ ರಸ್ತೆಯ ಮೇಲೆ ಬಿದ್ದಿತ್ತು. ಇದನ್ನು ಸ್ವಚ್ಛಗೊಳಿಸಲು ಬಹಳಷ್ಟು ಕಡೆ ಪೌರಕಾರ್ಮಿಕ ಸಿಬ್ಬಂದಿ ಕೆಲಸ ಮಾಡುತ್ತಿದ್ದ ಚಿತ್ರಣ ಕಂಡುಬಂತು. ನಗರದ ಗೌಳಿ ಗಲ್ಲಿ, ದಾಜೀಬಾನ್‌ ಪೇಟೆಯಲ್ಲಿ ಚರಂಡಿಯ ನೀರು ರಸ್ತೆ ಮೇಲೆ ಹರಿದಾಡಿದ್ದರಿಂದ ಜನ ತಮ್ಮ ಮನೆಯ ಮುಂದೆ ಸೇರಿದ್ದ ಕಸವನ್ನು ಹೊರಹಾಕುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.