ADVERTISEMENT

ಹುಬ್ಬಳ್ಳಿ | ಬಹುಪಾಲು ಜನರಿಗಿಲ್ಲ ವಿಶೇಷ ಪ್ಯಾಕೇಜ್ ನೆರವು

ನಿಯಮ ಸಡಿಲಿಕೆಗೆ ಅಗಸ, ಸವಿತಾ ಸಮಾಜ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 20:20 IST
Last Updated 1 ಆಗಸ್ಟ್ 2020, 20:20 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹುಬ್ಬಳ್ಳಿ: ಲಾಕ್‌ಡೌನ್ ಕಾರಣದಿಂದಾಗಿ ಸಂಕಷ್ಟಕ್ಕೀಡಾಗಿದ್ದ ಸವಿತಾ ಸಮಾಜದವರಿಗೆ ಹಾಗೂ ಅಗಸರಿಗೆ ರಾಜ್ಯ ಸರ್ಕಾರ ಘೋಷಿಸಿದ್ದ ₹5,000 ಪ್ಯಾಕೇಜ್‌ ನೆರವು ಬಹಳಷ್ಟು ಫಲಾನುಭವಿಗಳಿಗೆ ಇನ್ನೂ ತಲುಪಿಲ್ಲ. ಒಟ್ಟು 2.90 ಲಕ್ಷ ಜನರಿಗೆ ದೊರೆಯಬೇಕಿತ್ತು. ಜುಲೈ 29ರವರೆಗೆ ಕೇವಲ 40,174 ಮಂದಿಗೆ ಮಾತ್ರ ವಿತರಣೆಯಾಗಿದೆ.

ಅಗಸ ವೃತ್ತಿಯ 60 ಸಾವಿರ ಜನರಿಗೆ, ಸವಿತಾ ಸಮಾಜದ ವೃತ್ತಿನಿರತ 2.30 ಲಕ್ಷ ಮಂದಿಗೆ ಒಂದು ಬಾರಿ ಪರಿಹಾರ
ವಾಗಿ ರಾಜ್ಯ ಸರ್ಕಾರ ತಲಾ ₹5,000 ಪರಿಹಾರ ಘೋಷಿಸಿತ್ತು. ಅದರಂತೆ, ಎರಡೂ ವರ್ಗದವರಿಂದ 1,31,241 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ 20,287 ಸವಿತ ಸಮಾಜದ ವೃತ್ತಿನಿರತರಿಗೆ, 19,887 ಅಗಸರಿಗೆ ಪರಿಹಾರ ದೊರೆತಿದೆ. ಸದ್ಯ 33,732 ಜನರಿಗೆ ಪರಿಹಾರ ನೀಡುವ ಕಾರ್ಯ ಪ್ರಗತಿಯಲ್ಲಿದೆ. ಉಳಿದವರ ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ಕಾರ್ಮಿಕ ಇಲಾಖೆ ತಿಳಿಸಿದೆ.

ನಿಯಮದಿಂದ ವಂಚಿತ: ‘ರಾಜ್ಯದಲ್ಲಿ ಸವಿತಾ ಸಮಾಜದ 6 ಲಕ್ಷ ಮಂದಿ ವೃತ್ತಿನಿರತರಿದ್ದಾರೆ. ಲಾಕ್‌ಡೌನ್‌ನಿಂದ ಅವ
ರೆಲ್ಲಾ ಸಂಕಷ್ಟಕ್ಕೀಡಾಗಿದ್ದು, ಪರಿಹಾರ ಸಿಗಬೇಕಿತ್ತು. ಆದರೆ ಸಿಗುತ್ತಿಲ್ಲ. ಬಿಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬದ ಒಬ್ಬರಿಗೆ ಮಾತ್ರ ಪರಿಹಾರ ಎಂಬ ನಿಯಮದಿಂದ ಬಹುಪಾಲು ಕ್ಷೌರಿಕರು ಸೌಲಭ್ಯ ವಂಚಿತರಾಗಿದ್ದಾರೆ. ಎಲ್ಲರಿಗೂ ಪರಿಹಾರ ನೀಡುವಂತೆ ಶೀಘ್ರದಲ್ಲೇ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಿದ್ದೇವೆ’ ಎಂದು ಕರ್ನಾಟಕ ರಾಜ್ಯ ಸವಿತಾ ಸಮಾಜದ ಕಾರ್ಯಾಧ್ಯಕ್ಷ ಎಸ್‌.ಕಿರಣ್ ಕುಮಾರ್‌ ತಿಳಿಸಿದರು.

ADVERTISEMENT

‘ಅಗಸ ವೃತ್ತಿಯನ್ನೇ ಅವಲಂಬಿಸಿರುವ 12 ಲಕ್ಷ ಜನರು ರಾಜ್ಯದಲ್ಲಿದ್ದಾರೆ. ಬ್ಯಾಂಕ್‌ ಖಾತೆಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡಿಸದ ಹಾಗೂ ದಾಖಲೆ ಸಮರ್ಪಕವಾಗಿಲ್ಲದ ಅರ್ಜಿಗಳು ತಿರಸ್ಕೃತಗೊಂಡಿವೆ. ಇದರಿಂದ ಕೆಲವರಿಗೆ ಮಾತ್ರ ಪರಿಹಾರ ದೊರೆತಿದೆ. ಬಹುತೇಕರ ಬಳಿ ಸಮರ್ಪಕ ದಾಖಲೆಗಳಿಲ್ಲ. ಸಂಕಷ್ಟದಲ್ಲಿರುವ ಜನರಿಗೆ ಪರಿಹಾರ ಸಿಗಬೇಕಾದರೆ ಸರ್ಕಾರ ನಿಯಮಗಳಲ್ಲಿ ಕೆಲವು ಸಡಿಲಿಕೆ ಮಾಡಬೇಕಿದೆ’ ಎಂದು ಅಖಿಲ ಭಾರತ ಮಡಿವಾಳ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎ.ಪಂಪಣ್ಣ ಒತ್ತಾಯಿಸಿದರು.

ದಾಖಲೆ ಸಮರ್ಪಕವಾಗಿದ್ದವರಿಗೆ ಪರಿಹಾರ ವಿತರಣೆಯಾಗಿದೆ. ಪೂರಕ ದಾಖಲೆ ಇಲ್ಲದ ಅರ್ಜಿಗಳಷ್ಟೇ ತಿರಸ್ಕೃತಗೊಂಡಿವೆ. ಆಗಸ್ಟ್‌ 10ರವರೆಗೆ ಕಾಲಾವಕಾಶವಿದೆ.
-ಎಂ.ಎಸ್‌. ಚಿದಾನಂದ, ಜಂಟಿ ಆಯುಕ್ತ, ಕಾರ್ಮಿಕ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.