ಹುಬ್ಬಳ್ಳಿ: ಮಾರಕ ಕೊರೊನಾ ಲೆಕ್ಕಿಸದೆ ಕೆಲಸ ಮಾಡುತ್ತಿರುವವರ ಪೈಕಿ ಪೌರ ಕಾರ್ಮಿಕರ ವರ್ಗವೂ ಒಂದು. ನಿತ್ಯ ಬೆಳಿಗ್ಗೆ ಬೀದಿಗಳಲ್ಲಿ ಸ್ವಚ್ಛಗೊಳಿಸಿ ನಗರದ ಸೌಂದರ್ಯವನ್ನು ಕಾಪಾಡುವ ಅವರ ಸುರಕ್ಷತೆಗೆ ಮುಂದಾಗಿರುವ ಮಹಾನಗರ ಪಾಲಿಕೆ, ಕಾರ್ಮಿಕರಿಗೆ ಕೊರೊನಾ ಸುರಕ್ಷಾ ಸಾಧನಗಳನ್ನೊಳಗೊಂಡ ಕಿಟ್ ಅನ್ನು ಎಲ್ಲರಿಗೂ ವಿತರಿಸಿದೆ.
10 ಮಾಸ್ಕ್, 3 ಸೆಟ್ ಹ್ಯಾಂಡ್ ಗ್ಲೌಸ್, 100 ಎಂ.ಎಲ್ ಸ್ಯಾನಿಟೈಜರ್ ಹಾಗೂ 1 ಕಾರ್ಬೊಲಿಕ್ ಸೋಪ್ ಅನ್ನು ಕಿಟ್ ಒಳಗೊಂಡಿದೆ.
‘ಪಾಲಿಕೆ ಆಯುಕ್ತರ ನಿರ್ದೇಶನದ ಮೇರೆಗೆ, ಸ್ವಚ್ಛತಾ ಕಾರ್ಯ ನಿರ್ವಹಿಸುವ ಕಾಯಂ ಹಾಗೂ ಹೊರಗುತ್ತಿಗೆ ಪೌಕಾರ್ಮಿಕರು, ವಿವಿಧ ವಾಹನಗಳ ಚಾಲಕರು, ಸಹಾಯಕರು, ಲೋಡರ್ಸ್ಗಳು, ಕಸ ಗುಡಿಸುವವರು ಹಾಗೂ ಜೆಟ್ಟಿಂಗ್ ವಾಹನ ಸಿಬ್ಬಂದಿ ಸೇರಿದಂತೆ ಒಟ್ಟು 2,850 ಮಂದಿಗೆ ಕೋವಿಡ್–19 ಕಿಟ್ಗಳನ್ನು ವಿತರಿಸಲಾಗಿದೆ’ ಎಂದು ಪಾಲಿಕೆಯ ಘನತ್ಯಾಜ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಆರ್. ವಿಜಯಕುಮಾರ್ ತಿಳಿಸಿದರು.
ಉಪಾಹಾರ ವ್ಯವಸ್ಥೆ:
‘ಲಾಕ್ಡೌನ್ ಹಿನ್ನೆಲೆಯಲ್ಲಿ ಅವಳಿನಗರದ ತ್ಯಾಜ್ಯದ ಪ್ರಮಾಣವೂ ಗಣನೀಯವಾಗಿ ತಗ್ಗಿದೆ. ಹಾಗಾಗಿ, ಪೌರ ಕಾರ್ಮಿಕರ ಕೆಲಸದ ಅವಧಿಯನ್ನು ಬೆಳಿಗ್ಗೆ 7ರಿಂದ 11ರವರೆಗೆ ನಿಗದಿಪಡಿಸಲಾಗಿದೆ’ ಎಂದು ಪಾಲಿಕೆಯ ಪರಿಸರ ಎಂಜಿನಿಯರ್ ಟಿ.ಎನ್. ಶ್ರೀಧರ್ ಹೇಳಿದರು.
‘ಪೌರ ಕಾರ್ಮಿಕರಿಗೆ ಮಾತ್ರ ಇಂದಿರಾ ಕ್ಯಾಂಟಿನ್ನಲ್ಲಿ ಬೆಳಗ್ಗಿನ ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ಕೆಲಸ ಮುಗಿಸಿದ ಬಳಿಕ, ಕಿಮ್ಸ್ ಮತ್ತು ಉಣಕಲ್ ಬಳಿ ಇರುವ ಇಂದಿರಾ ಕ್ಯಾಂಟಿನ್ನಲ್ಲಿ ಉಪಾಹಾರ ವಿತರಿಸಲಾಗುತ್ತಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.