ಹುಬ್ಬಳ್ಳಿ: ‘ಕೋವಿಡ್–19 ನಿರ್ವಹಣೆಯ ವಿಷಯದಲ್ಲಿ ಸರ್ಕಾರದೊಂದಿಗೆ ಹಲವು ಸಂಘ–ಸಂಸ್ಥೆಗಳು ಕೈ ಜೋಡಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಇಲ್ಲಿನ ವಿದ್ಯಾನಗರದ ಕೆಎಲ್ಇ ಸಂಸ್ಥೆಯ ಆವರಣದಲ್ಲಿ ಸೇವಾ ಭಾರತಿ ಮತ್ತು ಕೆಎಲ್ಇ ಸಂಸ್ಥೆಯ ಕೋವಿಡ್ ಆರೈಕೆ ಕೇಂದ್ರಗಳಿಗೆ ಎಸ್.ಎಸ್. ಶೆಟ್ಟರ ಫೌಂಡೇಷನ್ ವತಿಯಿಂದ ಗುರುವಾರ ಮೂರು ಆಮ್ಲಜನಕ ಕಾನ್ಸನ್ಟ್ರೇಟರ್ಗಳನ್ನು ಹಸ್ತಾಂತರಿಸಿ ಅವರು ಮಾತನಾಡಿದರು.
‘ಸರ್ಕಾರ ತನ್ನ ಶಕ್ತಿ ಮೀರಿ ಕೋವಿಡ್ ನಿರ್ವಹಣೆಯಲ್ಲಿ ತೊಡಗಿದೆ. ಈ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಲು ಸಂಘ– ಸಂಸ್ಥೆಗಳು ಸಹಕಾರ ನೀಡಿ, ಸರ್ಕಾರದ ಬೆನ್ನಿಗೆ ನಿಲ್ಲಬೇಕಿದೆ. ಆಗ ಮಾತ್ರ ಕೊರೊನಾ ಸೋಂಕನ್ನು ಆದಷ್ಟು ಬೇಗ ನಿಯಂತ್ರಣಕ್ಕೆ ತರಬಹುದಾಗಿದೆ’ ಎಂದರು.
ವೈದ್ಯ ಡಾ. ಕಿರಣ ಗುಡ್ಡದಕೇರಿ ಮಾತನಾಡಿ, ‘ಕೋವಿಡ್ ಕೇಂದ್ರದಲ್ಲಿ ಇದುವರೆಗೆ 300ಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ. ರೋಗಿಗಳ ಜೊತೆ ಬಂದಿದ್ದ ಎರಡು ಸಾವಿರಕ್ಕೂ ಹೆಚ್ಚು ಸಂಬಂಧಿಕರಿಗೆ ಆಹಾರ ಪೊಟ್ಟಣ ನೀಡಿ ಹಸಿವು ನೀಗಿಸಿದ್ದೇವೆ’ ಎಂದು ಹೇಳಿದರು.
ಆರ್ಎಸ್ಎಸ್ ಕರ್ನಾಟಕ ಉತ್ತರ ಪ್ರಾಂತದ ಪ್ರಚಾರಕ ನರೇಂದ್ರ, ಹಿಂದೂ ಸೇವಾ ಪ್ರತಿಷ್ಠಾನದ ಪ್ರಚಾರಕ ಸುಧಾಕರ, ಸೇವಾ ಭಾರತಿ ಅಧ್ಯಕ್ಷ ರಘು ಅಕಮಂಚಿ, ಎಸ್.ಎಸ್. ಶೆಟ್ಟರ ಫೌಂಡೇಷನ್ ನಿರ್ದೇಶಕ ಸಂಕಲ್ಪ ಶೆಟ್ಟರ, ವೀರೇಶ ಅಂಗಡಿ, ಎಂ.ಆರ್. ಪಾಟೀಲ, ಸಂದೀಪ ಬೂದಿಹಾಳ, ಮಧುಸೂದನ ಕುಲಕರ್ಣಿ, ಡಾ. ಸಂಜಯ್ಯ ಪಿರಾಪೂರ, ಉಮೇಶ ದೂಶಿ ಹಾಗೂ ದತ್ತಮೂರ್ತಿ ಕುಲಕರ್ಣಿ ಇದ್ದರು.
‘ವಿದ್ಯುತ್ ಶುಲ್ಕ ವಿನಾಯಿತಿ: ಬೊಕ್ಕಸಕ್ಕೆ ಹೊರೆ’
ಹುಬ್ಬಳ್ಳಿ: ‘ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು,ಮೇ ಹಾಗೂ ಜೂನ್ ತಿಂಗಳ ವಿದ್ಯುತ್ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಿರುವುದು ಸ್ವಾಗತಾರ್ಹ. ಇದರಿಂದ ಬೊಕ್ಕಸಕ್ಕೆ ₹114.70 ಕೋಟಿ ಹೊರೆಯಾಗಲಿದೆ’ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
‘ಇತರ ಕೈಗಾರಿಕೆಗಳಿಗೆ ವಿದ್ಯುತ್ ಶುಲ್ಕ ಪಾವತಿಯ ಗಡುವು ವಿಸ್ತರಿಸಿರುವುದರಿಂದಲೂ ₹5.56 ಕೋಟಿ ಆರ್ಥಿಕ ನಷ್ಟವಾಗಲಿದೆ. ಸರ್ಕಾರ ನೀಡಿರುವ ಕೋವಿಡ್ ಪರಿಹಾರ ಪ್ಯಾಕೇಜ್ನಿಂದ ಮೂರು ಲಕ್ಷ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.