ADVERTISEMENT

ಶಾಸಕ ರವಿಕುಮಾರ್ ವಿರುದ್ಧ ಮಾನನಷ್ಟ ಮೊಕದ್ದಮೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2024, 15:56 IST
Last Updated 26 ಆಗಸ್ಟ್ 2024, 15:56 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: ‌‌‌‘ರಾಜ್ಯ ಸರ್ಕಾರ ಉರುಳಿಸಲು ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರಿಗೆ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಿರುವ ಮಂಡ್ಯ ಶಾಸಕ ಪಿ.ರವಿಕುಮಾರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

‘ಮುಡಾ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಗಳನ್ನು ಮರೆ ಮಾಚಲು ಶಾಸಕರ ಖರೀದಿ ಕುರಿತು ಅಪಪ್ರಚಾರ ಮಾಡಲಾಗುತ್ತಿದೆ’ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

‘ಕಾಂಗ್ರೆಸ್ ಶಾಸಕರಿಗೆ ₹50 ರಿಂದ ₹100 ಕೋಟಿ ಆಮಿಷವೊಡ್ಡುತ್ತಿದ್ದಾರೆ ಎಂದು ರವಿಕುಮಾರ್ ಆರೋಪಿಸಿದ್ಧಾರೆ.
ಬಿಜೆಪಿಯ 66 ಶಾಸಕರಿದ್ದು, ಅದರಲ್ಲಿ ಇಬ್ಬರು ಪಕ್ಷದ್ರೋಹ ಎಸಗಿದ್ದಾರೆ. ಸರ್ಕಾರ ರಚನೆಗೆ ನಮಗೆ ಇನ್ನೂ 64 ಶಾಸಕರ ಅಗತ್ಯವಿದೆ. ಅವರ ಆರೋಪದ ಪ್ರಕಾರ ಶಾಸಕರಿಗೆ ₹6,600 ಕೋಟಿ ಕೊಡಬೇಕು. ಅಷ್ಟು ಹಣ ಎಲ್ಲಿಂದ ಬರುತ್ತದೆ? ಅವರ ಆರೋಪ ಬಾಲಿಶತನದ್ದು’ ಎಂದರು.

ADVERTISEMENT

‘ನಮ್ಮ ಯಾವ ಮುಖಂಡರೂ ಕಾಂಗ್ರೆಸ್‌ ಶಾಸಕರಿಗೆ ಆಮಿಷವೊಡ್ಡಿಲ್ಲ. ಆಮಿಷವೊಡ್ಡಿದವರು ಯಾರು ಎಂಬುದನ್ನು ಅವರು ಬಹಿರಂಗಪಡಿಸಬೇಕು. ಕಾಂಗ್ರೆಸ್‌ ಅಸಹಾಯಕ ಸ್ಥಿತಿಯಲ್ಲಿದ್ದು, ಹೀಗಾಗಿ ತಮ್ಮ ಶಾಸಕರ ಮೂಲಕ ಸುಳ್ಳು ಆರೋಪ ಮಾಡಿಸಲಾಗುತ್ತಿದೆ’ ಎಂದು ಹೇಳಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.