ಹುಬ್ಬಳ್ಳಿ: ‘ರಾಜ್ಯದಲ್ಲಿ ಜಾರಿಯಾಗಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದಾಗಿ ಬಹುತೇಕ ಕಡೆ ಕೃಷಿ ಉತ್ಪನ್ನಗಳ ಆವಕ ಕಡಿಮೆಯಾಗುತ್ತಿದೆ. ಬಹುತೇಕ ಎಪಿಎಂಸಿಗಳುಆದಾಯವಿಲ್ಲದೆ ಸಂಕಷ್ಟದಲ್ಲಿದ್ದು, ಬಂದ್ ಆಗುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ, ಕಾಯ್ದೆಯನ್ನು ವಾಪಸ್ ಪಡೆಯಬೇಕು’ ಎಂದುರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಆಗ್ರಹಿಸಿದರು.
ಅಮರಗೋಳ ಎಪಿಎಂಸಿಯಲ್ಲಿರುವ ಶ್ರಮಿಕ ಭವನದಲ್ಲಿ ಮಂಗಳವಾರ ನಡೆದ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ಧಾರವಾಡ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ‘ವ್ಯಾಪಾರ ವಹಿವಾಟಿನಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ಶ್ರಮಜೀವಿಗಳಾದ ಹಮಾಲಿ ಕಾರ್ಮಿಕರಿಗೆ ಸರ್ಕಾರ ಸಾಮಾಜಿಕ ಭದ್ರತೆ ಮತ್ತು ವಸತಿ ಯೋಜನೆ ಜಾರಿ ಮಾಡಬೇಕು’ ಎಂದರು.
‘ಕೃಷಿ ಉತ್ಪನ್ನಗಳನ್ನು ಹಾಗೂ ಎಪಿಎಂಸಿ ಆವರಣದಲ್ಲಿ ವಿವಿಧ ಕೂಲಿ ಕೆಲಸಗಳನ್ನೇ ನಂಬಿರುವ ಒಂದು ಲಕ್ಷದಷ್ಟು ಹಮಾಲಿ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಕೇಂದ್ರ ಸರ್ಕಾರ ರೈತರ ಐತಿಹಾಸಿಕ ಹೋರಾಟದಿಂದಾಗಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿದೆ. ಆದರೆ, ರಾಜ್ಯ ಸರ್ಕಾರ ಮೊಂಡುತನ ಪ್ರದರ್ಶಿಸುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿಐಟಿಯು ಜಿಲ್ಲಾ ಗೌರವಾಧ್ಯಕ್ಷ ಬಿ.ಎನ್. ಪೂಜಾರಿ ಮಾತನಾಡಿ, ‘ದೇಶದಲ್ಲಿ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ಗಗನಕ್ಕೇರುತ್ತಿರುವುದರಿಂದ ಅಸಂಘಟಿತ ಕಾರ್ಮಿಕರು ಬದುಕು ಸಂಕಷ್ಟದಲ್ಲಿದೆ. ಬೆಲೆ ಏರಿಕೆಗೆ ಸರ್ಕಾರದ ಜನವಿರೋಧಿ ನೀತಿಗಳೇ ಕಾರಣ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ಬಸವಣ್ಣೆಪ್ಪ ನೀರಲಗಿ ವಹಿಸಿದ್ದರು. ಗುರುಸಿದ್ದಪ್ಪ ಅಂಬಿಗೇರ ಕಾರ್ಯಕ್ರಮ ನಿರ್ವಹಿಸಿದರು. ಮಂಜುನಾಥ ಹುಜರಾತಿ ವಂದಿಸಿದರು. ಎ.ಎಂ. ಖಾನ್, ಕರಿಯಪ್ಪ ದಳವಾಯಿ, ಮಲ್ಲಪ್ಪ ನಲವಡಿ, ಹನಮಂತ ಅಂಬಿಗೇರ, ಮೊಹ್ಮದರಫೀಕ ಮುಳಗುಂದ, ಕತಾಲಸಾಬ ಮಲ್ಲಾ, ಲಕ್ಷ್ಮವ್ವ ಹೊಸೂರಿ, ಪ್ರೇಮಾ ಅಣ್ಣಿಗೇರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.