ADVERTISEMENT

ಹುಬ್ಬಳ್ಳಿ: ವೇತನ ಪರಿಷ್ಕರಣೆ ಬಾಕಿ ಹಣ ಮಂಜೂರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2023, 7:27 IST
Last Updated 6 ಅಕ್ಟೋಬರ್ 2023, 7:27 IST
ಹುಬ್ಬಳ್ಳಿಯಲ್ಲಿ ವಾ.ಕ.ರ.ಸಾ ಸಂಸ್ಥೆ ನೌಕರರ ಮತ್ತು ನಿವೃತ್ತ ನೌಕರರ ಸಂಘದ ವತಿಯಿಂದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್‌.ಭರತ್‌ ಅವರಿಗೆ ಮನವಿ ಸಲ್ಲಿಸಲಾಯಿತು
ಹುಬ್ಬಳ್ಳಿಯಲ್ಲಿ ವಾ.ಕ.ರ.ಸಾ ಸಂಸ್ಥೆ ನೌಕರರ ಮತ್ತು ನಿವೃತ್ತ ನೌಕರರ ಸಂಘದ ವತಿಯಿಂದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್‌.ಭರತ್‌ ಅವರಿಗೆ ಮನವಿ ಸಲ್ಲಿಸಲಾಯಿತು   

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿವೃತ್ತ ನೌಕರರಿಗೆ ಬರಬೇಕಾದ 2020ರ ವೇತನ ಪರಿಷ್ಕರಣೆ ಬಾಕಿ ಮತ್ತು ರಜೆ ನಗದೀಕರಣದ ವ್ಯತ್ಯಾಸದ ಬಾಕಿ ಹಣವನ್ನು ಮಂಜೂರು ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ವಾ.ಕ.ರ.ಸಾ ಸಂಸ್ಥೆ ನೌಕರರ ಮತ್ತು ನಿವೃತ್ತ ನೌಕರರ ಸಂಘದ ವತಿಯಿಂದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್‌.ಭರತ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ನಿವೃತ್ತ ನೌಕರರಿಗೆ ಸಂಬಂಧಿಸಿದ 2016–17ರಿಂದ 2019–20 ರವರೆಗಿನ ನಗದೀಕರಣ ಬಾಕಿ ಹಣವನ್ನು ಇನ್ನೂ ಪಾವತಿಸಿಲ್ಲ. ಕೂಡಲೇ ಮಂಜೂರು ಮಾಡಬೇಕು. ಪ್ರತಿ ವರ್ಷ ಬಸ್‌ಪಾಸ್‌ಗೆ ಪಡೆಯುತ್ತಿರುವ ₹ 500 ಸಂಸ್ಕರಣಾ ಶುಲ್ಕವನ್ನು ರದ್ದು ಮಾಡಬೇಕು. ನಿವೃತ್ತ ನೌಕರರಿಗೆ ಸಾರಿಗೆ ಬಸ್‌ಗಳಲ್ಲಿ ಮುಂಗಡವಾಗಿ ಆಸನ ಕಾಯ್ದಿರಿಸಲು ಕ್ರಮಕೈಗೊಳ್ಳಬೇಕು. ವೈದ್ಯಕೀಯ ವೆಚ್ಚದ ಪುನರ್‌ ಪಾವತಿ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಸಂಘದ ಪ್ರಮುಖರು ಆಗ್ರಹಿಸಿದರು.

ಫೆಬ್ರುವರಿ 2023ರ ನಂತರ ನಿವೃತ್ತಿಯಾದ ನೌಕರರಿಗೆ ಉಪದಾನ ಮತ್ತು ರಜೆ ನಗದೀಕರಣ ಹಣವನ್ನು ಮಂಜೂರು ಮಾಡಬೇಕು. ಸಕಾಲದಲ್ಲಿ ನಿವೃತ್ತಿ ಹಣ ಸಂದಾಯಕ್ಕೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

ಶಕ್ತಿ ಯೋಜನೆಯಡಿ ಸಾರಿಗೆ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರು ಟಿಕೆಟ್‌ ಪಡೆದ ಸ್ಥಳದವರಿಗೆ ಪ್ರಯಾಣ ಮಾಡದೇ ಮಾರ್ಗ ಮಧ್ಯದಲ್ಲಿಯೇ ಇಳಿದು ಹೋದರೆ, ದೂರದ ಪ್ರಯಣದ ಟಿಕೆಟ್‌ ವಿತರಿಸಿದ ಆರೋಪದ ಮೇಲೆ ನಿರ್ವಹಕರನ್ನು ಅಮಾನತು ಮಾಡುವ ಕ್ರಮ ಅವೈಜ್ಞಾನಿಕ. ಇದನ್ನು ತೆಗೆದುಹಾಕಬೇಕು. ಹಾಲಿ ನೌಕರರ ಬೇಡಿಕೆಗಳ ಈಡೇರಿಕೆಗೂ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಎಚ್‌.ಜಿ.ಕೊಪ್ಪದ, ಪ್ರಧಾನ ಕಾರ್ಯದರ್ಶಿ ಎಂ.ಬಿ.ತಹಶೀಲ್ದಾರ, ಪ್ರಮುಖರಾದ ಎ.ಎಚ್‌.ಜವಳಿ, ಎಸ್‌.ಎಸ್.ಪಾಟೀಲ, ಎಂ.ಎಂ.ಹಿರೇಮಠ, ಬಿ.ಎಸ್‌. ದೋತ್ರದ, ಐ.ಸಿ.ವಾಲಿಶೆಟ್ಟಿ, ಗುಡಗೇರಿ, ವಿ.ಐ.ಭದ್ರಾಪೂರ, ಹುಗ್ಗಣ್ಣವರ, ಹುಸೇನಪ್ಪಾ ವೀರೇಶ ಸೊರಬದ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.