ADVERTISEMENT

ಧಾರವಾಡ | ಐದು ವರ್ಷದಲ್ಲಿ 5,002 ಅಪಘಾತ ಪ್ರಕರಣ: 1,743 ಮಂದಿ ಸಾವು!

ನಾಗರಾಜ್ ಬಿ.ಎನ್‌.
Published 28 ಸೆಪ್ಟೆಂಬರ್ 2025, 4:53 IST
Last Updated 28 ಸೆಪ್ಟೆಂಬರ್ 2025, 4:53 IST
   

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಸೇರಿ ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ಐದೂವರೆ ವರ್ಷದಲ್ಲಿ ನಡೆದ 5,002 ವಾಹನ ಅಪಘಾತಗಳಲ್ಲಿ ಬರೋಬ್ಬರಿ 1,743 ಮಂದಿ ಪ್ರಾಣ ತೆತ್ತಿದ್ದಾರೆ. ಐದು ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡು, ಎರಡು ಸಾವಿರದಷ್ಟು ಮಂದಿ ಶಾಶ್ವತ ಅಂಗಲವಿಕಲರಾಗಿದ್ದಾರೆ.

ವರ್ಷದಿಂದ ವರ್ಷಕ್ಕೆ ಅಪಘಾತಗಳ ಸಂಖ್ಯೆ ಏರುತ್ತಿದೆ. ಹುಬ್ಬಳ್ಳಿ–ಧಾರವಾಡ ಬೈಪಾಸ್‌ ಹೆದ್ದಾರಿ, ಗದಗ ರಸ್ತೆ, ಒಂಟಿ ಹನುಮಪ್ಪ ದೇವಸ್ಥಾನ ರಸ್ತೆ, ರಾಯಾಪುರ ರಸ್ತೆ, ಗಬ್ಬೂರ ವೃತ್ತ, ಕಾರವಾರ ರಸ್ತೆ ಅಂಡರ್ ಬ್ರಿಡ್ಜ್‌, ನೇಕಾರ ನಗರ ಬ್ರಿಡ್ಜ್‌, ಇಂಡಿಪಂಪ್ ವೃತ್ತ, ಧಾರವಾಡದ ಕಲಗೇರಿ ಬ್ರಿಡ್ಜ್‌, ಕೃಷಿ ವಿಶ್ವವಿದ್ಯಾಲಯ ರಸ್ತೆ ಸೇರಿ ನಗರ ಪ್ರದೇಶದಲ್ಲಿ 16ಕ್ಕೂ ಹೆಚ್ಚು ಅಪಘಾತ ವಲಯಗಳನ್ನು ಪೊಲೀಸ್‌ ಮತ್ತು ಲೋಕೋಪಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗುರುತಿಸಿವೆ.

2020 ರಿಂದ 2025ರ ಜುಲೈ ಅಂತ್ಯದವರೆಗೆ ಧಾರವಾಡ ಜಿಲ್ಲೆಯಲ್ಲಿ ನಡೆದ 2,584 ಅಪಘಾತ ಪ್ರಕರಣದಲ್ಲಿ 1,172 ಮಂದಿ ಮೃತಪಟ್ಟಿದ್ದರೆ, ಹುಬ್ಬಳ್ಳಿ ಧಾರವಾಡದಲ್ಲಿ ನಡೆದ 2,418 ಅಪಘಾತ ಪ್ರಕರಣದಲ್ಲಿ 571 ಮಂದಿ ಅಸುನೀಗಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ 2,654 ಮಂದಿ ಗಾಯಗೊಂಡಿದ್ದರೆ, ಹುಬ್ಬಳ್ಳಿ ಧಾರವಾಡ ವ್ಯಾಪ್ತಿಯಲ್ಲಿ 2,348 ಮಂದಿ ಗಾಯಗೊಂಡಿದ್ದಾರೆ.

ADVERTISEMENT

ಹುಬ್ಬಳ್ಳಿ–ಧಾರವಾಡ ಬೈಪಾಸ್‌ ರಸ್ತೆಯಲ್ಲಿ ಈ ಅವಧಿಯಲ್ಲಿಯೇ ನಡೆದ 1,200ಕ್ಕೂ ಹೆಚ್ಚು ಅಪಘಾತದಲ್ಲಿ, 400ಕ್ಕೂ ಹೆಚ್ಚು ಮಂದಿ ಪ್ರಾಣಬಿಟ್ಟಿದ್ದಾರೆ. 2021ರಲ್ಲಿ ಬೈಪಾಸ್‌ನ ಇಟಿಗಟ್ಟಿಯಲ್ಲಿ ನಡೆದ ಟೆಂಪೋ ಟ್ರಾವೆಲರ್‌ ಮತ್ತು ಟ್ರಕ್‌ ಮಧ್ಯದ ಅಪಘಾತದಲ್ಲಿ ದಾವಣಗೆರೆಯ 13 ಮಂದಿ ಮೃತಪಟ್ಟಿದ್ದರು. ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿ ನಡೆದ 400ಕ್ಕೂ ಹೆಚ್ಚು ಅಪಘಾತದಲ್ಲಿ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

‘ಅತಿಯಾದ ವೇಗ, ಅಸುರಕ್ಷಿತ ಚಾಲನೆ ಮತ್ತು ಸಂಚಾರ ನಿಯಮಗಳನ್ನು ಪಾಲಿಸದಿರುವುದು, ಮದ್ಯಪಾನ, ಮಾದಕ ವಸ್ತುಗಳ ಸೇವಿಸಿ ವಾಹನ ಚಲಾಯಿಸುವುದು ಅಪಘಾತಗಳಿಗೆ ಕಾರಣವಾಗಿದೆ. ಜೊತೆಗೆ ಕಿರಿದಾದ ರಸ್ತೆ, ಅವೈಜ್ಞಾನಿಕ ಹಂಪ್ಸ್‌ ಮತ್ತು ತಿರುವು, ಗುಂಡಿಬಿದ್ದ ರಸ್ತೆ, ಜಾಹೀರಾತು ಪ್ರದರ್ಶನ, ಎಚ್ಚರಿಕೆ ನಾಮಫಲಕ ಇಲ್ಲದಿರುವುದು, ಕಾಮಗಾರಿಗಾಗಿ ಅಲ್ಲಲ್ಲಿ ತೆಗ್ಗು ತೋಡಿರುವುದರಿಂದ ಅಪಘಾತಗಳು ನಡೆಯುತ್ತಿವೆ. ನಿಯಮ ಉಲ್ಲಂಘಿಸಿ ವಾಹನ ಚಾಲನೆ ಮಾಡುವವರಿಂದ ಅಮಾಯಕರು ಬಲಿಯಾಗುತ್ತಿರುವುದು ವಿಷಾದನೀಯ’ ಎಂದು ಪೊಲೀಸರು ಹೇಳುತ್ತಾರೆ.

ಹುಬ್ಬಳ್ಳಿ–ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಕೆಲವು ಪ್ರದೇಶಗಳನ್ನು ಅಪಘಾತ ವಲಯ ಎಂದು ಗುರುತಿಸಲಾಗಿದೆ. ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲಿಸಬೇಕು
ರವೀಶ ಸಿ.ಆರ್‌ ಡಿಸಿಪಿ ಅಪರಾಧ ಮತ್ತು ಸಂಚಾರ ವಿಭಾಗ
ಮನೆಯ ಮುಖ್ಯಸ್ಥರನ್ನು ಮಕ್ಕಳನ್ನು ಕಳೆದುಕೊಂಡ ಕುಟುಂಬಗಳು ಅತಂತ್ರವಾಗುತ್ತಿವೆ. ವಾಹನಗಳ ಕಾಗದ ಪತ್ರಗಳು ಸರಿಯಾಗಿಲ್ಲದ ಕಾರಣ ಪರಿಹಾರಕ್ಕೆ ತೊಡಕು ಎದುರಾಗುತ್ತಿವೆ
ಶ್ರೀಧರ ಕಂದಗಲ್‌ ಸಾಮಾಜಿಕ ಕಾರ್ಯಕರ್ತ

‘ಮುನ್ನೆಚ್ಚರಿಕೆ ಕ್ರಮ ಅಗತ್ಯ’

ಗುರುತಿಸಲಾಗಿರುವ ಅಪಘಾತ ವಲಯಗಳಲ್ಲಿ ಮುನ್ನೆೆಚ್ಚರಿಕೆ ಫಲಕ ಅಳವಡಿಸಬೇಕು. ಆಕಸ್ಮಿಕ ರಸ್ತೆ ತಿರುವು ಎದುರಾಗುವ ಪೂರ್ವವೇ ರಿಫ್ಲೆೆಕ್ಟರ್‌ ಸ್ಟಿಕ್ಕರ್‌ ಅಂಟಿಸಿ ಮಾಹಿತಿ ನೀಡುವಂತಾಗಬೇಕು’ ಎಂದು ಹೈಕೋರ್ಟ್‌ ವಕೀಲ ವಿಶ್ವನಾಥ ಬಿಚಗತ್ತಿ ತಿಳಿಸಿದರು. ‘ನಿಧಾನವಾಗಿ ಸಾಗಿ’ ಎಚ್ಚರಿಕೆ ಫಲಕವನ್ನು ಅಪಘಾತ ವಲಯ ಆರಂಭವಾಗುವ 200 ಮೀಟರ್ ಮೊದಲೇ ಅಳವಡಿಸಿದರೆ ಸಂಭವನೀಯ ಅಪಘಾತ ತಪ್ಪಿಸಬಹುದು. ಹಂಪ್‌ಗಳನ್ನು ತೆರವು ಮಾಡಿ ಸರತಿ ಸಾಲಿನಂತೆ ವೈಜ್ಞಾನಿಕವಾಗಿ ಚಿಕ್ಕ ಹಂಪ್ಸ್‌ ನಿರ್ಮಿಸಬೇಕು. ಹೆದ್ದಾರಿ ಹಾಗೂ ಪ್ರಮುಖ ವೃತ್ತಗಳಲ್ಲಿ ಅಳವಡಿಸಿರುವ ಬ್ಯಾನರ್ ಹೋರ್ಡಿಂಗ್‌ಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆೆ ಅನುವು ಮಾಡಿಕೊಟ್ಟರೆ ಸಾಕಷ್ಟು ಅಪಘಾತಗಳನ್ನು ತಪ್ಪಿಸಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.