ಹುಬ್ಬಳ್ಳಿ: ಇಲ್ಲಿನ ಗದಗ ರಸ್ತೆಯಲ್ಲಿರುವ ರೈಲ್ ಸೌಧದ ಕಚೇರಿಯಲ್ಲಿ ಮಂಗಳವಾರ ನಡೆದ ನೈರುತ್ಯ ರೈಲ್ವೆಯ ವಲಯದ ಅಧಿಕಾರಿಗಳ ಸಭೆಯಲ್ಲಿ ವಿವಿಧ ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.
ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯ ಕುಮಾರ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇಲಾಖೆಯ ಅಧಿಕಾರಿಗಳು ಮತ್ತು ವಿವಿಧ ಟ್ರೇಡ್ ಯೂನಿಯನ್ ಹಾಗೂ ಸಂಘಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ರೈಲ್ವೆ ಸೌಲಭ್ಯದ ಬಗ್ಗೆ ಜನ ಹೊಂದಿರುವ ದೃಷ್ಟಿಕೋನವನ್ನು ಉತ್ತಮಪಡಿಸುವುದು, ಪ್ರಯಾಣಿಕ ಸ್ನೇಹಿ ಮತ್ತು ಸುರಕ್ಷತಾ ವಾತಾವರಣ ರೂಪಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆಯಾಯಿತು. ವಿದ್ಯುತ್ ಉಳಿತಾಯ, ಕಾಗದ ರಹಿತ ಕಚೇರಿಗೆ ಒತ್ತು, ರೈಲ್ವೆ ಕಾಲೊನಿಗಳ ಅಭಿವೃದ್ಧಿ, ರೈಲ್ವೆ ಆಸ್ಪತ್ರೆಯಲ್ಲಿ ಇನ್ನಷ್ಟು ಸೌಲಭ್ಯಗಳನ್ನು ಕಲ್ಪಿಸುವುದು ಮತ್ತು ಕಚೇರಿಗಳಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಬಗ್ಗೆ ಚರ್ಚೆಯಾಯಿತು.
ನೈರುತ್ಯ ರೈಲ್ವೆಯ ಆಡಳಿತ ವಿಭಾಗದ ಪ್ರಧಾನ ಮುಖ್ಯಸ್ಥ ಪಿ.ಕೆ. ಮಿಶ್ರಾ, ಇಲಾಖೆಯ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಆರ್.ಕೆ. ಗುಪ್ತಾ, ಪ್ರವರ್ತಕ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಹರ್ಲೆ, ಮಜ್ದೂರ್ ಯೂನಿಯನ್ನ ಪ್ರಧಾನ ಕಾರ್ಯದರ್ಶಿ ಎ.ಎಂ. ಡಿಕ್ರೂಸ್, ಅಧ್ಯಕ್ಷ ಆರ್.ಆರ್. ನಾಯ್ಕ, ವಲಯದ ಅಧ್ಯಕ್ಷ ಕೆ.ಎಸ್. ದ್ಯಾಮನಣ್ಣನವರ, ಕಾರ್ಯದರ್ಶಿ ಎಂ. ಮೋಹನ, ಅಖಿಲ ಭಾರತ ಒಬಿಸಿ ಉದ್ಯೋಗಿಗಳ ಸಂಘದ ವಲಯದ ಅಧ್ಯಕ್ಷ ರಾಜೇಶ ಪೆಮ್ಮಾಡಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.