ADVERTISEMENT

ಅಕ್ರಮ ಸಕ್ರಮದಡಿ ಹಕ್ಕುಪತ್ರ ವಿತರಣೆ ಶೀಘ್ರ: ಶಾಸಕ ಜಗದೀಶ ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 9 ಮೇ 2022, 12:57 IST
Last Updated 9 ಮೇ 2022, 12:57 IST
   

ಹುಬ್ಬಳ್ಳಿ: ‘ಅಕ್ರಮ ಸಕ್ರಮದಡಿ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿ, ನೋಂದಣಿ ಮಾಡಿಕೊಡುವುದಕ್ಕೆ ಸಂಬಂಧಿಸಿದ ಕಾರ್ಯಗಳು ಪ್ರಗತಿಯಲ್ಲಿವೆ. ರಾಜ್ಯದಾದ್ಯಂತ ಇರುವ ಅಕ್ರಮ ಸಕ್ರಮ ಸಮಸ್ಯೆ ಬಗೆಹರಿಸಲು ಸರ್ಕಾರ ಕಾಯ್ದೆ ಕೂಡ ಜಾರಿಗೆ ತಂದಿದೆ’ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.

ವಾರ್ಡ್ 39ರ ಬಾಪೂಜಿ ನಗರದಲ್ಲಿ ₹2 ಕೋಟಿ ಅನುದಾನದಲ್ಲಿ ಕೈಗೊಂಡಿರುವ ತೆರೆದ ಚರಂಡಿ ಕಾಮಗಾರಿಗೆ ಇತ್ತೀಚೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಕಾಯ್ದೆ ವಿರುದ್ಧ ಕೆಲವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಅಲ್ಲಿಯೂ ಸರ್ಕಾರದ ಪರವಾಗಿ ತೀರ್ಪು ಬರುವ ವಿಶ್ವಾಸವಿದ್ದು, ಆದಷ್ಟು ಬೇಗ ಹಕ್ಕುಪತ್ರ ವಿತರಿಸಲಾಗುವುದು’ ಎಂದರು.

‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ, ಗುಡಿಸಲು ಇರುವ ಜಾಗದಲ್ಲಿ ಆರ್‌ಸಿಸಿ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು. ಈ ಭಾಗದ ಮೂರು ವಾರ್ಡ್‌ಗಳ ಬಸ್ ಮಾರ್ಗಗಳಲ್ಲಿ ಕಾಂಕ್ರೀಟ್ ರಸ್ತೆ, ಗಟಾರ ಹಾಗೂ ಪೇವರ್ ಅಳವಡಿಕೆಯೊಂದಿಗೆ ಉತ್ತಮ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ADVERTISEMENT

ಬಿಜೆಪಿ ಮುಖಂಡ ಸಿದ್ದು ಮೊಗಲಿಶೆಟ್ಟರ ಮಾತನಾಡಿ, ‘ವಾರ್ಡ್ 39 ಸೇರಿದಂತೆ ಅಕ್ಕಪಕ್ಕದ ಇನ್ನೆರಡು ವಾರ್ಡ್‌ಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸುಮಾರು ₹40 ಕೋಟಿ ಬಿಡುಗಡೆಯಾಗಲಿದೆ. ಇದೀಗ ಸಮಾಜ ಕಲ್ಯಾಣ ಇಲಾಖೆಯ ₹2 ಕೋಟಿ ವೆಚ್ಚದಲ್ಲಿ ತೆರೆದ ಚರಂಡಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ’ ಎಂದರು.

‌ಬಾಪೂಜಿನಗರದಲ್ಲಿರುವ ಮನೆಗಳನ್ನು ಅಕ್ರಮ ಸಕ್ರಮದಡಿ, ಆದಷ್ಟು ಬೇಗ ಮಂಜೂರು ಮಾಡಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದರು. ಫಾರೆಸ್ಟ್ ಕಾಲೊನಿ ಮತ್ತು ಗುರುದೇವನಗರದ ಉದ್ಯಾನದಲ್ಲಿ ತೆರೆದ ಜಿಮ್‌ ಉಪಕರಣಗಳನ್ನು ಅಳವಡಿಸುವ ತಲಾ ₹10 ಲಕ್ಷದ ಕಾಮಗಾರಿಗೆ ಶೆಟ್ಟರ್ ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು.

ಮಹಾನಗರ ಪಾಲಿಕೆ ಸದಸ್ಯೆಯರಾದ ಸೀಮಾ ಸಿದ್ದು ಮೊಗಲಿಶೆಟ್ಟರ, ರೂಪಾ ಶೆಟ್ಟಿ, ನಿರ್ಮಿತಿ ಕೇಂದ್ರದ ಅಧಿಕಾರಿ ಶಿವಕುಮಾರ, ಬಿಜೆಪಿ ಮುಖಂಡರಾದ ದೊಡ್ಡಯ್ಯ ಹಿರೇಮಠ, ಎಚ್.ಎಸ್. ಕಿರಣ, ಯಲ್ಲಪ್ಪ ಹಟ್ಟಿ, ಕೃಷ್ಣಾ ಪಾಸ್ತೆ, ದೇವೆಂದ್ರ ಹಡಗಲಿ, ಪ್ರಕಾಶ ತಿಗಡಿ, ದೇವೇಂದ್ರ ಹಡಗಲಿ, ಹೈದರಸಾಬ ವಾಲಿಕಾರ, ಪರಶಪ್ಪ ವಾಲಿಕಾರ, ಪರಶುರಾಮ ಪಾಸ್ತೆ, ಯಲ್ಲಪ್ಪ ಬಿಜಾಪೂರ, ಹನಮಂತ ಜೊಗಿನ, ಮೋಹನ ಬಡಿಗೇರ, ಕಿರಣ ಪವಾರ, ನಬಿ ತಾಲೆವಾಡ, ಪರಶುರಾಮ ಮಲ್ಲಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.