ಹುಬ್ಬಳ್ಳಿ: ರಾಜಕಾರಣ ಮಾಡುವುದಷ್ಟೇ ಪಕ್ಷದ ಗುರಿಯಲ್ಲ, ದೇಶದ ಆರಾಧನೆ ಕೂಡ ನಮ್ಮ ಕಾಯಕ. ಆದ್ದರಿಂದ ಮಂಡಲ ಮಟ್ಟದಿಂದ ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಬೇಕು. ವಿಸಿಟಿಂಗ್ ಕಾರ್ಡ್ ಮೇಲೆ ಹೆಸರು ಬರೆಯಿಸಿಕೊಳ್ಳಲು ಮಾತ್ರ ಸೀಮಿತರಾಗಬಾರದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ರಾಜ್ಯ ಪ್ರವಾಸ ಕೈಗೊಂಡಿರುವ ಕಟೀಲ್ ಮಂಗಳವಾರ ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲೆಯ ನೂತನ ಪದಾಧಿಕಾರಿಗಳ ಜೊತೆ ಸಭೆ ನಡೆಸಿದರು. ಬುಧವಾರ ಗ್ರಾಮೀಣ ವಿಭಾಗದ ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಿದರು. ಈ ಎರಡೂ ಸಭೆಗಳಲ್ಲಿ ಅವರು ಪಕ್ಷದ ಮೇಲೆ ನಿಷ್ಠೆ ಹೊಂದಿ ಸಂಘಟನೆಯಲ್ಲಿ ತೊಡಗಿಕೊಂಡರೆ ಎಂಥ ಅವಕಾಶ ಬೇಕಾದರೆ ಹುಡುಕಿಕೊಂಡು ಬರಬಹುದು. ಜನಪರವಾಗಿ ಕೆಲಸ ಮಾಡುವವರ ಮೇಲೆ ಜಿಲ್ಲಾ ಕೋರ್ ಕಮಿಟಿ ಸದಸ್ಯರು ಸದಾ ನಿಗಾ ಇಟ್ಟಿರುತ್ತಾರೆ ಎಂದು ಕಾರ್ಯಕರ್ತರಿಗೆ ಒತ್ತಿ ಹೇಳಿದರು.
’ಸಾಮಾನ್ಯ ಕಾರ್ಯಕರ್ತರಾಗಿದ್ದ ಈರಣ್ಣ ಕಡಾಡಿ, ಅಶೋಕ ಕುಮಾರ ಗಸ್ತಿ ರಾಜ್ಯಸಭಾ ಸದಸ್ಯರಾದರು. ಶಾಂತಾರಾಮ ಸಿದ್ದಿ ವಿಧಾನ ಪರಿಷತ್ ಸದಸ್ಯರಾದರು. ಬೇರೆ ಪಕ್ಷಗಳು ಹಣ ಪಡೆದುಕೊಂಡು ಸ್ಥಾನಮಾನ ನೀಡುತ್ತವೆ. ಆದರೆ, ನಮ್ಮಲ್ಲಿ ಶಿಸ್ತು, ಅರ್ಪಣಾ ಮನೋಭಾವ ಮತ್ತು ಜನಪರರಾಗಿರುವ ಕಾರ್ಯಕರ್ತರನ್ನು ಪಕ್ಷ ಗುರುತಿಸುತ್ತದೆ. ಭವಿಷ್ಯದಲ್ಲಿ ಉತ್ತಮ ಗೌರವವೂ ಲಭಿಸುತ್ತದೆ’ ಎಂದರು.
ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣಕುಮಾರ ಮಾತನಾಡಿ ‘ಕೋವಿಡ್ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಸಂಕಷ್ಟದಲ್ಲಿದ್ದ ಜನರಿಗೆ ನೆರವಾಗಿದ್ದಾರೆ’ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಬೆಲ್ಲದ, ರಾಜ್ಯ ಘಟಕದ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೆದಾರ, ವಿಧಾನ ಪರಿಷತ್ ಸದಸ್ಯರಾದ ಪ್ರದೀಪ ಶೆಟ್ಟರ್, ಪ್ರೊ. ಎಸ್.ವಿ. ಸಂಕನೂರ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಮಾಜಿ ಶಾಸಕಿ ಸೀಮಾ ಮಸೂತಿ, ವಿಭಾಗ ಪ್ರಭಾರಿ ಲಿಂಗರಾಜ ಪಾಟೀಲ, ಜಯತೀರ್ಥ ಕಟ್ಟಿ, ನಾರಾಯಣ ಜರತಾರಘರ, ಹೂಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ತಿಪ್ಪಣ್ಣ ಮಜ್ಜಗಿ, ವಿಜಯಾನಂದ ಶೆಟ್ಟಿ, ಜಿಲ್ಲಾ ಮಾಧ್ಯಮ ವಕ್ತಾರ ರವಿ ನಾಯ್ಕ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.