ಹುಬ್ಬಳ್ಳಿ: ‘ಕಲಾವಿದರಲ್ಲಿ ಹವ್ಯಾಸಿ ಮತ್ತು ವೃತ್ತಿಪರ ಕಲಾವಿದರೆಂಬ ಭೇದಭಾವ ಮಾಡಬಾರದು. ಕಲಾವಿದರೊಳಗೆ ಇರುವ ಈ ಭಿನ್ನತೆ ಹೋಗಿ, ಎಲ್ಲರೂ ಕಲಾವಿದರು ಎಂಬ ಭಾವನೆ ಮೂಡಬೇಕು’ ಎಂದು ಕೇಂದ್ರ ಲಲಿತಕಲಾ ಅಕಾಡೆಮಿಯ ಪ್ರಾದೇಶಿಕ ಕಚೇರಿ ಸಂಯೋಜಕ ಶ್ರೀನಿವಾಸ ಶಾಸ್ತ್ರಿ ಹೇಳಿದರು.
ನಗರದ ಕೇಶ್ವಾಪುರದಲ್ಲಿರುವ ಕೌಶಲ್ ಆರ್ಟ್ ಗ್ಯಾಲರಿಯಲ್ಲಿ ಇಂದ್ರ ಧನುಷ್ಯ ಕಲಾಸಂಸ್ಥೆ ಬುಧವಾರ ಆಯೋಜಿಸಿದ್ದ ಹರ್ಷವರ್ಧನ ಎನ್. ಹಾಲಕೇರಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ‘ಕಲಾವಿದರು ವಿವಿಧ ರೀತಿಯ ಕಲಾ ಶೈಲಿಯನ್ನು ಅಳವಡಿಸಿಕೊಳ್ಳಬೇಕು. ಸಾಂಪ್ರದಾಯಿಕ ಕಲೆಗೆ ಇಂದಿಗೂ ಮಹತ್ವವಿದೆ. ಯುವ ಕಲಾವಿದರು ಅದರತ್ತಲೂ ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.
‘ಧಾರವಾಡದಲ್ಲಿ ಮುಂದಿನ ದಿನಗಳಲ್ಲಿ ಕೇಂದ್ರ ಲಲಿತಕಲಾ ಅಕಾಡೆಮಿ ಪ್ರಾದೇಶಿಕ ಅಕಾಡೆಮಿಯ ಕಚೇರಿ ಮತ್ತು ಸಾಂಸ್ಕೃತಿಕ ವಲಯ ಕಚೇರಿ ಸ್ಥಾಪನೆಯಾಗಲಿದೆ. ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಹಂತಹಂತವಾಗಿ ನಡೆಯುತ್ತಿವೆ. ಇದರಿಂದಾಗಿ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಕಲಾವಿದರಿಗೆ ಅನುಕೂಲವಾಗಲಿದೆ’ ಎಂದರು.
ಗದುಗಿನ ವಿಜಯ ಫೈನ್ ಆರ್ಟ್ಸ್ ಕಾಲೇಜಿನ ಪ್ರಾಚಾರ್ಯ ಡಾ. ಸಿ.ವಿ. ಬಡಿಗೇರ ಅವರ ‘ಕಲಾ ಇತಿಹಾಸ’ ಪುಸ್ತಕವನ್ನು ಗಣ್ಯರು ಬಿಡುಗಡೆ ಮಾಡಿದರು. ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ವೈ. ನಾಗನಗೌಡರ ಮತ್ತು ಹಿರಿಯ ಕಲಾವಿದ ಎಂ.ಜೆ. ಬಂಗ್ಲೆವಾಲೆ ಮಾತನಾಡಿದರು.
ನಿವೃತ್ತ ಉಪನ್ಯಾಸಕಿ ಎಸ್.ಎಸ್. ಕಮ್ಮಾರ, ಕೃಷ್ಣಾ ಕೆ.ಎಂ, ಡಬ್ಲ್ಯೂ.ಎಸ್. ಸೋನಾಘರ್, ವಿಜಯಾನಂದ ಕಾಲವಾಡ, ವಿ.ಜಿ. ಅರ್ಕಸಾಲಿ, ಪ್ರಕಾಶ ಟಿ. ಅಕ್ಕಿ, ಆರ್.ಡಿ. ಕಡ್ಲಿಕೊಪ್ಪ, ಶರಣ್ಣಪ್ಪ ಟಿ.ಎಚ್, ಗ್ಯಾಲರಿ ಭರತ ಪಟಾಡಿಯಾ, ಕೌಶಲ್ ಪಟಾಡಿಯಾ ಇದ್ದರು. ಶ್ರೇಯಾ ಆಚಾರಿ ಪ್ರಾರ್ಥನೆ ಹಾಡಿದರು. ಪ್ರದರ್ಶನವು ಮಾರ್ಚ್ 24ರವರೆಗೆ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.