ಧಾರವಾಡ: ‘ಜಗತ್ತಿನ ಅತಿ ದೊಡ್ಡ ಸಂವಿಧಾನ ಹೊಂದಿರುವ ಭಾರತದಲ್ಲಿ ಇದ್ದ ಸಂಸದೀಯ ಆಡಳಿತ ಪದ್ಧತಿಗೆ ತಿಲಾಂಜಲಿ ಇಟ್ಟು, ಏಕವ್ಯಕ್ತಿ ಆಡಳಿತ ಪದ್ಧತಿ ಜಾರಿಗೆ ಕಸರತ್ತು ನಡೆಸಿರುವ ಬಿಜೆಪಿಯನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಬೆಂಬಲಿಸುವುದಿಲ್ಲ’ ಎಂದು ಬೆಳಗಾವಿ ವಿಭಾಗದ ಸಂಚಾಲಕ ಶ್ರೀಮಂತ ನಡುವಿನಕೇರಿ ಹೇಳಿದರು.
‘ದೊಡ್ಡ ಪ್ರಜಾಪ್ರಭುತ್ವ, ಜಾತ್ಯಾತೀತ ನಾಡಾಗಿದ್ದ ಭಾರತದಲ್ಲಿ ಕಳೆದ ಐದು ವರ್ಷಗಳಲ್ಲಿ ಬಹುಸಂಸ್ಕೃತಿ ಸಮಾಜವನ್ನು ಛಿದ್ರಗೊಳಿಸುವ ಪ್ರಯತ್ನ ನಡೆದಿದೆ. ಸಂವಿಧಾನದತ್ತವಾಗಿ ದೊರಕುವ ಅಧಿಕಾರಗಳನ್ನು ಮೊಟಕುಗೊಳಿಸಲಿದ್ದಾರೆ. ದೇಶದಲ್ಲಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಬಿಜೆಪಿ ಮುಖಂಡರು, ಶಾಸಕರು ಮತ್ತು ಸಂಸದರು ಅಲ್ಲಿರುವ ದಲಿತರು ಮತ್ತು ಅಲ್ಪಸಂಖ್ಯಾತರಲ್ಲಿ ಭೀತಿ ಮೂಡಿಸಿದ್ದಾರೆ. ಅವರ ಬದುಕುವ ಹಕ್ಕನ್ನೇ ಕಸಿಯುವ ಪ್ರಯತ್ನ ನಡೆಸಿದ್ದಾರೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪ ಮಾಡಿದರು.
‘ನಾವು ಅಧಿಕಾರ ಬಂದಿರುವುದೇ ಸಂವಿಧಾನ ಬದಲಿಸಲು, ನೀವು ಮೋದಿ ಪರ ಇದ್ದರೆ ಭಾರತದ ಪರ ಇದ್ದಂತೆ, ಇಲ್ಲವಾದರೆ ಭಾರತ ವಿರೋಧಿ ಇದ್ದಂತೆ ಎಂಬಿತ್ಯಾದಿ ಬಹಿರಂಗ ಬೆದರಿಕೆ ಮೂಲಕ ದೇಶದಲ್ಲಿ ಭಯದ ವಾತಾವರಣವನ್ನು ಬಿಜೆಪಿ ನಾಯಕರು ಸೃಷ್ಟಿಸಿದ್ದಾರೆ. ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆಗೆ ಕಾರಣವಾಗಿದ್ದು ಇದೇ ಸರ್ಕಾರ. ಚಿಂತಕರಾದ ಡಾ. ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ, ನರೇಂದ್ರ ದಾಬೋಲ್ಕರ್, ಗೋವಿಂದ ಪಾನ್ಸರೆ ಅವರ ಹತ್ಯೆಗಳೂ ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ನಡೆದಿವೆ. ಇವೆಲ್ಲವೂ ಅಸಹಿಷ್ಣುತೆಯನ್ನು ಮೂಡಿಸಿವೆ’ ಎಂದರು.
ಈ ನಿಟ್ಟಿನಲ್ಲಿ ಸಂವಿಧಾನ ರಕ್ಷಣೆಗೆ, ಪ್ರಜಾಪ್ರಭುತ್ವದ ಉಳಿವಿಗೆ ಈ ಬಾರಿ ಕಾಂಗ್ರೆಸ್ ಬೆಂಬಲಿಸುತ್ತಿರುವುದಾಗಿ ಶ್ರೀಮಂತ ನಡುವಿನಕೇರಿ ಹೇಳಿದರು.
ಜಿಲ್ಲಾ ಸಂಚಾಲಕ ಎನ್.ಕೆ. ಕೇರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.