ADVERTISEMENT

Eid-ul-Fitr | ಹುಬ್ಬಳ್ಳಿ: 2025 ಸಾಮೂಹಿಕ ಪ್ರಾರ್ಥನೆಗೆ ತಯಾರಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2025, 7:00 IST
Last Updated 30 ಮಾರ್ಚ್ 2025, 7:00 IST
<div class="paragraphs"><p>ಹಳೇ ಹುಬ್ಬಳ್ಳಿಯ ಶಾ ಬಜಾರ್‌ನಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯರು ಟೋಪಿ ಖರೀದಿಸಿದರು</p><p></p></div>

ಹಳೇ ಹುಬ್ಬಳ್ಳಿಯ ಶಾ ಬಜಾರ್‌ನಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯರು ಟೋಪಿ ಖರೀದಿಸಿದರು

   

ಪ್ರಜಾವಾಣಿ ಚಿತ್ರ: ಗುರು ಹಬೀಬ

ADVERTISEMENT

ಹುಬ್ಬಳ್ಳಿ: ‘ರಂಜಾನ್’ ಮಾಸವಿಡೀ ಶ್ರದ್ಧೆಯಿಂದ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದ ಮುಸ್ಲಿಮರು ಹುಬ್ಬಳ್ಳಿಯಲ್ಲಿ ಈದ್‌–ಉಲ್‌ ಫಿತ್ರ್‌ ಹಬ್ಬ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ  ಎಲ್ಲಾ ಮಸೀದಿ ಹಾಗೂ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ವ್ಯವಸ್ಥೆ ನಡೆದಿದೆ. 

ನಗರದ ಚನ್ನಮ್ಮ ವೃತ್ತದಲ್ಲಿರುವ ಈದ್ಗಾ ಮೈದಾನದಲ್ಲಿ ಹಾಗೂ ಹಳೇ ಹುಬ್ಬಳ್ಳಿಯ ಕಾರವಾರ ರಸ್ತೆಯ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಮುಸ್ಲಿಮರು ಹೊಸ ಬಟ್ಟೆ ಧರಿಸಿ ಈದ್ಗಾ ಮೈದಾನಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವರು. ನಂತರ ತಮ್ಮ ಬಂಧು–ಮಿತ್ರರನ್ನು ಪರಸ್ಪರ ಆಲಂಗಿಸಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುವರು. 

ನಗರದ ಎಂ.ಜಿ.ಮಾರ್ಕೆಟ್‌, ದುರ್ಗದಬೈಲ್‌ ಮತ್ತು ಶಾ ಬಜಾರ್‌ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ರಾತ್ರಿ ತನಕವೂ ಹಬ್ಬಕ್ಕೆ ಸಂಬಂಧಿಸಿದ ಹೊಸ ಬಟ್ಟೆ, ಮಸಾಲೆ ಪದಾರ್ಥ, ಸಿಹಿ ತಿನಿಸು ತಯಾರಿಗೆ ಬೇಕಾದ ಅಗತ್ಯ ವಸ್ತು ಹಾಗೂ ಒಣಹಣ್ಣುಗಳ ಖರೀದಿ ಜೋರಾಗಿಯೇ ನಡೆಯಿತು. ಇಲ್ಲಿನ ಹೋಟೆಲ್‌ಗಳಲ್ಲಿ ವಿವಿಧ ಬಗೆಯ ಮಾಂಸಾಹಾರಿ ಖಾದ್ಯಗಳು ಹಾಗೂ ಸಸ್ಯಹಾರಿ ತಿನಿಸುಗಳ ಮಾರಾಟವೂ ನಡೆಯಿತು. 

ಶಿರ್‌ಕುರ್ಮಾಕ್ಕೆ ಆದ್ಯತೆ: 
ಈದ್‌–ಉಲ್‌ ಫಿತ್ರ್‌ ಹಬ್ಬದ ಸಿಹಿ ತಿನಿಸುಗಳಲ್ಲಿ ‘ಶಿರ್‌ಕುರ್ಮಾ’ ಸಿಹಿಖಾದ್ಯಕ್ಕೆ ಆದ್ಯತೆ. ಸಮುದಾಯದ ಜನರು ತಾವು ಸೇವಿಸುವುದರೊಂದಿಗೆ ತಮ್ಮ ಆಪ್ತರಿಗೆ ಹಾಗೂ ಮನೆಗೆ ಬರುವವರಿಗೂ ಉಣಬಡಿಸಿ, ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. 

ಶಿರ್‌ಕುರ್ಮಾ ತಯಾರಿಸಲು ಬೇಕಾಗುವ ಗೋಡಂಬಿ, ಬಾದಾಮ್‌, ಪಿಸ್ತಾ ಸೇರಿದಂತೆ ಒಣಹಣ್ಣುಗಳಿಗೆ ಇಲ್ಲಿನ ಶಾ ಬಜಾರ್‌ನಲ್ಲಿ ಬೇಡಿಕೆಯೂ ಹೆಚ್ಚಿತ್ತು. ದುಬಾರಿಯಿದ್ದರೂ ಸಮುದಾಯದ ಜನರು ಅವುಗಳನ್ನು ಮುಗಿಬಿದ್ದು ಖರೀದಿಸಿದರು.

‘ದೇಶದಲ್ಲಿನ ಎಲ್ಲಾ ಧರ್ಮ, ಜಾತಿ, ಸಮುದಾಯದವರೂ ಒಗ್ಗಟ್ಟಿನಿಂದ ಖುಷಿಯಿಂದ ಇರಬೇಕು. ದೇಶವೂ ಅಭಿವೃದ್ಧಿ ಹೊಂದಬೇಕು ಎಂದು ನಾವು ಮಸೀದಿ ಹಾಗೂ ಈದ್ಗಾ ಮೈದಾನಗಳಲ್ಲಿ ಪ್ರಾರ್ಥಿಸುತ್ತೇವೆ. ಹಬ್ಬದ ವೇಳೆ ಎಲ್ಲಾ ಸಮುದಾಯದ ಬಡವರಿಗೆ ಉಚಿತವಾಗಿ ದಿನಸಿ ಸೇರಿ ಅಗತ್ಯ ವಸ್ತುಗಳನ್ನು ದಾನ ಮಾಡುತ್ತೇವೆ’ ಎಂದು ಮುಸ್ಲಿಂ ಧರ್ಮಗುರು ಮೌಲನಾ ನಯಾಜ್‌ ಆಲಂ ಶೇಖ್‌ ಹೇಳಿದರು. 

ಚಂದ್ರ ದರ್ಶನ ಆಧರಿಸಿ ಹಬ್ಬ ನಿಗದಿ
‘ಇಸ್ಲಾಂ ಧರ್ಮದಲ್ಲೇ ದೊಡ್ಡ ಹಬ್ಬ ಇದು. ರಂಜಾನ್ ಮಾಸದ ವೇಳೆ ಎಲ್ಲಾ ಸಮುದಾಯದ ಜನರ ಒಳಿತಿಗಾಗಿ ಅಲ್ಲಾಹು ದೇವರಲ್ಲಿ ಪ್ರಾರ್ಥಿಸುತ್ತೇವೆ. ನಮ್ಮ ಧರ್ಮದಲ್ಲಿ ತಿಳಿಸಿದಂತೆ‌ ನಮ್ಮ ದುಡಿಮೆಯ ಅಲ್ಪ ಭಾಗವನ್ನು ಬಡವರಿಗೆ ದಿನಸಿ, ಬಟ್ಟೆ, ಹಣವನ್ನು ದಾನ (ಜಕಾತ್‌) ಮಾಡುತ್ತೇವೆ‘ ಎಂದು ಹುಬ್ಬಳ್ಳಿಯ ಅಂಜುಮನ್‌–ಇ–ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಎ.ಎಂ.ಹಿಂಡಸಗೇರಿ ತಿಳಿಸಿದರು. ‘ಹಬ್ಬದ ಆಚರಣೆಯು ಚಂದ್ರ ದರ್ಶನದ ಮೇಲೆ ಅವಲಂಬಿಸಿದೆ. ಭಾನುವಾರ ಸಂಜೆ ನಮ್ಮ ಸಂಸ್ಥೆಯ ಸಮಿತಿಯ ಸದಸ್ಯರು ಹಬ್ಬದ ಆಚರಣೆ ದಿನದ ಬಗ್ಗೆ ತೆಗೆದುಕೊಳ್ಳುವ ನಿರ್ಣಯವನ್ನು ಆಧರಿಸಿ ಹಬ್ಬದ ದಿನವನ್ನು ನಿಗದಿ ಮಾಡುತ್ತೇವೆ’ ಎಂದರು. ‘ಯುಗಾದಿ ಹಾಗೂ ಈದ್‌–ಉಲ್‌ ಫಿತ್ರ್‌ ಹಬ್ಬಗಳು ಜೊತೆಯಲ್ಲಿಯೇ ಬಂದಿರುವುದರಿಂದ ಎಲ್ಲಾ ಸಮುದಾಯದವರು ಸಂಭ್ರಮದಿಂದ ಹಬ್ಬ ಆಚರಿಸಬೇಕು‘ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.