ಅಳ್ನಾವರ: 14 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ದೊರೆಯಬೇಕು. ಬಡತನ ಮತ್ತು ಇತರೆ ಕಾರಣಗಳಿಂದ ಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳನ್ನೂ ಶಾಲೆಗೆ ಸೇರಿಸಬೇಕು. ಬಾಲ ಕಾರ್ಮಿಕ ಪದ್ಧತಿ ಸಂಪೂರ್ಣ ನಿರ್ಮೂಲನೆಗೆ ಎಲ್ಲರೂ ಕೂಡಿ ಶ್ರಮಿಸೋಣ ಎಂದು ತಾಲ್ಲೂಕು ಪಂಚಾಯ್ತಿ ಇಓ ಸಂತೋಷಕುಮಾರ ತಳಕಲ್ ಹೇಳಿದರು.
ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾ ಭವನದಲ್ಲಿ ನಡೆದ ಬಾಲ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಬಸ್ ನಿಲ್ದಾಣ ಸೇರಿದಂತೆ ಹೆಚ್ಚು ಜನರು ಸೇರುವ ಸ್ಥಳದಲ್ಲಿ ಧ್ವನಿ ವರ್ಧಕ ಸಂದೇಶ ಮೂಲಕ ಜಾಗೃತಿ ಮೂಡಿಸಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಭೂಮಕ್ಕನವರ ಮಾತನಾಡಿ, ‘ಈ ಭಾಗದಲ್ಲಿ ಹೊರ ಜಿಲ್ಲೆಯಿಂದ ಕಬ್ಬು ಕಡೆಯಲು ಬರುವ ತಂಡದಲ್ಲಿ ಬಾಲಕರು ಕಂಡು ಬಂದಲ್ಲಿ ತಕ್ಷಣ ಸಹಾಯವಾಣಿ ಗೆ ಮಾಹಿತಿ ನೀಡಬೇಕು. ಬಾಲ ಕಾರ್ಮಿಕರು ಇದ್ದಲ್ಲಿ ಅವರ ಕುಟುಂಬಕ್ಕೆ ಬುದ್ದಿ ಹೇಳಿ ಕಲಿಕೆಯ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ , ಮಕ್ಕಳ ಸಹಾಯವಾಣಿ, ಧಾರವಾಡದ ಜಿಲ್ಲಾ ಕಾರ್ಮಿಕ ಯೋಜನಾ ಸಂಘ, ತಾಲ್ಲೂಕು ಪಂಚಾಯ್ತಿ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು.
ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ ಹಾಲಮತ್, ಬಿಡಿಎಸ್ಎಸ್ ಸಂಸ್ಥೆಯ ನಿರ್ದೇಶಕ್ ಫೀಟರ್ ಆಶೀರ್ವಾದ, ಶಿರಸ್ತೇದಾರ್ ಎಂ.ಜಿ. ಪತ್ತಾರ, ಶಿಶು ಅಭಿವೃದ್ಧಿ ಅಧಿಕಾರಿ ರೇಣುಕಾ ಕರಮಡಿ, ಕಾರ್ಮಿಕ ಇಲಾಖೆಯ ಬಸವರಾಜ ಪಂಚಾಕ್ಷರಿಮಠ, ಶ್ವೇತಾ ಕಿಲ್ಲೆದಾರ, ಕಡಬಗಟ್ಟಿ ಗ್ರಾಮ ಪಂಚಾಯ್ತಿ ಪಿಡಿಓ ಮಹಾಂತೇಶ ಕರಾಡೆ, ಬೆಣಚಿ ಗ್ರಾಮ ಪಂಚಾಯಿತಿ ಪಿಡಿಒ ಆನಂದ ಕೆಂಚನ್ನವರ, ಅರವಟಗಿ ಗ್ರಾಮ ಪಂಚಾಯಿತಿ ಪಿಡಿಒ ಅಪ್ಪಯ್ಯ ಬಿಡಿಮಠ, ಸಂಯೋಜಕ ರವಿ ಬಂಡಾರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.