ADVERTISEMENT

ಹನುಮಾನ್‌ ಚಾಲೀಸಾ ಕೇಂದ್ರ ಸ್ಥಾಪಿಸಿ: ಪ್ರವೀಣ ತೊಗಾಡಿಯಾ

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 15:59 IST
Last Updated 16 ಜೂನ್ 2025, 15:59 IST
ಹುಬ್ಬಳ್ಳಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಹಿಂದೂ ಪರಿಷತ್‌ ಸಂಸ್ಥಾಪಕ ಅಧ್ಯಕ್ಷ ಪ್ರವೀಣ ತೊಗಾಡಿಯಾ ಮಾತನಾಡಿದರು. ಪರಮಾನಂದ ಸ್ವಾಮೀಜಿ ಹಾಜರಿದ್ದರು
ಹುಬ್ಬಳ್ಳಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಹಿಂದೂ ಪರಿಷತ್‌ ಸಂಸ್ಥಾಪಕ ಅಧ್ಯಕ್ಷ ಪ್ರವೀಣ ತೊಗಾಡಿಯಾ ಮಾತನಾಡಿದರು. ಪರಮಾನಂದ ಸ್ವಾಮೀಜಿ ಹಾಜರಿದ್ದರು   

ಹುಬ್ಬಳ್ಳಿ: ‘ಮಸೀದಿಗಳು ಮುಸ್ಲಿಮರನ್ನು ಒಗ್ಗೂಡಿಸುವ ಕೇಂದ್ರಗಳಾಗಿವೆ. ಅದೇ ರೀತಿ ಹಿಂದೂಗಳನ್ನು ಒಗ್ಗೂಡಿಸಲು ಹನುಮಾನ್‌ ಚಾಲೀಸಾ ಕೇಂದ್ರಗಳನ್ನು ತೆರೆಯಬೇಕು’ ಎಂದು ಅಂತರರಾಷ್ಟ್ರೀಯ ಹಿಂದೂ ಪರಿಷತ್‌ ಸಂಸ್ಥಾಪಕ ಅಧ್ಯಕ್ಷ  ಪ್ರವೀಣ ತೊಗಾಡಿಯಾ ಹೇಳಿದರು.

ನಗರದ ಗೋಕುಲ ರಸ್ತೆಯ ನಾನಕಿ ಕನ್ವೆನ್ಷನ್‌ ಸಭಾ ಭವನದಲ್ಲಿ ಅಂತರರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗ ದಳ ಸೋಮವಾರ ಹಮ್ಮಿಕೊಂಡಿದ್ದ ‘ಹಿಂದೂ ಚಿಂತನಾ ಸಭೆ’ಯಲ್ಲಿ ಅವರು ಮಾತನಾಡಿದರು.

‘ಹಿಂದೂಗಳ ರಕ್ಷಣೆ, ಸಮೃದ್ಧಿಗಾಗಿ ದೇಶದ ಪ್ರತಿ ಹಳ್ಳಿ, ನಗರದಲ್ಲಿ ಹನುಮಾನ್‌ ಚಾಲೀಸಾ ಕೇಂದ್ರ ಸ್ಥಾಪಿಸಿ, ಪ್ರತಿ ಶನಿವಾರ ಆ ಕೇಂದ್ರಗಳಲ್ಲಿ ಪಠಣ ಮಾಡಬೇಕು. ಆ ಮೂಲಕ ದೇಶದ ಹಿಂದೂಗಳನ್ನು ಒಗ್ಗೂಡಿಸುವ ಅಭಿಯಾನ ಹಮ್ಮಿಕೊಳ್ಳಬೇಕು.  ಈ ಕೇಂದ್ರಗಳಿಂದ ಬಡ ಹಿಂದೂಗಳಿಗೆ ಆಹಾರ, ಶಿಕ್ಷಣ,  ಆರೋಗ್ಯ ಹಾಗೂ ಉದ್ಯೋಗ ದೊರೆಯುವಂತಾಗಬೇಕು’ ಎಂದು ಹೇಳಿದರು.

ADVERTISEMENT

‘ದೇಶದಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಶೇ 86ರಷ್ಟು ಹಿಂದೂಗಳಿದ್ದರು. ಈಗ ಅದು ಶೇ 78ಕ್ಕೆ ಇಳಿಕೆಯಾಗಿದೆ. ಆದರೆ, ಮುಸ್ಲಿಮರ ಜನಸಂಖ್ಯೆ ಹೆಚ್ಚಾಗಿದೆ. ಹಿಂದೂಗಳ ಬಹುತ್ವಕ್ಕಾಗಿ ಜನಸಂಖ್ಯೆ ಹೆಚ್ಚಳದ ಕಾನೂನು ಜಾರಿಯಾಗಬೇಕು. ಬಾಂಗ್ಲಾದ ನುಸುಳುಕೋರರನ್ನು ಓಡಿಸಬೇಕು, ಹಿಂದೂಗಳಿಗೆ ಹೆಚ್ಚು ಉದ್ಯೋಗ ಸಿಗಬೇಕು. ಕಾನೂನು ಹಾಗೂ ವಿಸ್ತೃತ ಯೋಜನೆಯಿಂದ ಬಹುತ್ವ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಸಾನ್ನಿಧ್ಯ ವಹಿಸಿ ಮಾತನಾಡಿದ ಪರಮಾನಂದ ಸ್ವಾಮೀಜಿ, ‘ಹಿಂದೂಗಳನ್ನು ಒಗ್ಗೂಡಿಸುವ ಜಾಗೃತಿ ಕಾರ್ಯಕ್ರಮಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ನಮ್ಮನ್ನು ವಿರೋಧಿಸುವವರ ಶಕ್ತಿ ಕೇಂದ್ರಗಳು ಹೆಚ್ಚಾಗಿ, ಅಲ್ಲಿ ಜಾಗೃತಿ ಅಭಿಯಾನಗಳು ನಡೆಯುತ್ತಿವೆ. ಹಿಂದೂಗಳನ್ನು ಒಗ್ಗೂಡಿಸುವಲ್ಲಿ ಸ್ವಾಮೀಜಿಗಳು ಸಹ ಎಡವಿದ್ದಾರೆ. ಹಿಂದೂ ಸಮಾಜ ಒಡೆದು ಹೋಗಿದ್ದು, ಒಗ್ಗೂಡಿಸುವ ಕೆಲಸ ಆಗಬೇಕಿದೆ’ ಎಂದು ಹೇಳಿದರು.

ಉದ್ಯಮಿ ವಿಜಯ ಸಂಕೇಶ್ವರ, ಪ್ರದೀಪ ಗೌಡರ, ರಮೇಶ ಕುಲಕರ್ಣಿ, ನರೇಶ ಷಾ, ಸುರೇಶ ಜೈನ ಇದ್ದರು.

2025ರ ಡಿಸೆಂಬರ್‌ ಅಂತ್ಯದೊಳಗೆ ಕರ್ನಾಟಕದಲ್ಲಿ 1 ಲಕ್ಷ ಹುಬ್ಬಳ್ಳಿ ನಗರದಲ್ಲಿ 500 ಹನುಮಾನ್‌ ಚಾಲೀಸಾ ಕೇಂದ್ರಗಳನ್ನು ಸ್ಥಾಪಿಸಬೇಕು
ಪ್ರವೀಣ ತೊಗಾಡಿಯಾ ಸಂಸ್ಥಾಪಕ ಅಧ್ಯಕ್ಷ ಅಂತರರಾಷ್ಟ್ರೀಯ ಹಿಂದೂ ಪರಿಷತ್‌
ಕಾರ್ಯಕರ್ತರ ಜೊತೆ ಸಂವಾದ
ಹಿಂದೂ ಕಾರ್ಯಕರ್ತರ ಜತೆ ಸಂವಾದ ನಡೆಸಿದ ತೊಗಾಡಿಯಾ ‘ಧರ್ಮದಲ್ಲಿ ಶ್ರದ್ಧೆಯಿದ್ದಾಗ ನನ್ನದು ಎನ್ನುವ ಪ್ರೀತಿ ಇರುತ್ತದೆ. ಮತಾಂತರ ತಡೆಗೆ ಹಿಂದೂಗಳಲ್ಲಿ ಧರ್ಮಶ್ರದ್ಧೆ ಹೆಚ್ಚಿಸಬೇಕಿದೆ’ ಎಂದರು. ‘ಮತಾಂತರಕ್ಕೆ ಬಡತನ ಕಾರಣ ಎನ್ನುತ್ತಾರೆ. ಮುಸ್ಲಿಮರಲ್ಲಿ ಬಡವರಿಲ್ಲವೆ? ಅವರ‍್ಯಾಕೆ ಮತಾಂತರವಾಗುವುದಿಲ್ಲ? ಬಡ ವರ್ಗದ ಹಿಂದೂಗಳಿಗೆ ಶಿಕ್ಷಣ ಉದ್ಯೋಗ ಸಿಗಬೇಕು. ಹಿಂದೂ ಸಮಾಜ ಊಹೆಗೂ ನಿಲುಕದಷ್ಟು ದೊಡ್ಡದಿದೆ. ಒಂದು ಸಂಘಟನೆಯಿಂದ ಜಾಗೃತಿ ಅಸಾಧ್ಯ. ಬಹುಸಂಸ್ಕೃತಿಯ ದೇಶದಲ್ಲಿ ಸಂಘಟನೆಗಳು ಹುಟ್ಟಿಕೊಳ್ಳುತ್ತ ನದಿಯಂತೆ ಹರಿಯಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.