ಹುಬ್ಬಳ್ಳಿ: ಕೇಂದ್ರದ ಸೇವಾನಿರತ ಹಾಗೂ ಪಿಂಚಣಿದಾರರಿಗೆ ಆರೋಗ್ಯ ಯೋಜನೆಯಡಿ ಸೌಲಭ್ಯಗಳನ್ನು ಒದಗಿಸಲು ನಗರದಲ್ಲಿ ಇತ್ತೀಚೆಗೆ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ ಕಲ್ಯಾಣ ಸಂಘ ಉತ್ತರ ಕರ್ನಾಟಕ ಘಟಕ ಅಸ್ತಿತ್ವಕ್ಕೆ ಬಂದಿದೆ.
ನಿವೃತ್ತ ಐಎಸ್ಎಫ್ ಅಧಿಕಾರಿ ಯು.ಜಿ. ಮೊಕಾಶಿ ಘಟಕದ ಅಧ್ಯಕ್ಷರಾಗಿದ್ದಾರೆ. ಕೇಂದ್ರದ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ರಮೇಶ ಜೋಶಿ (ಪ್ರಧಾನ ಕಾರ್ಯದರ್ಶಿ) ಆರ್.ವಿ. ಯಾದವ್ (ಆಡಳಿತ ಕಾರ್ಯದರ್ಶಿ), ರಮೇಶ ಚಿಲ್ಲಾಳ (ನಿರ್ದೇಶಕ), ಚೇತನ ಕುಮಾರ (ನಿರ್ದೇಶಕ), ಕೆ.ಎ. ಜಮಾದಾರ (ಪದಾಧಿಕಾರಿ) ಮತ್ತು ಜಿ.ಎನ್. ಸೊರಟೂರ (ಉಪಾಧ್ಯಕ್ಷ) ಆಯ್ಕೆಯಾಗಿದ್ದಾರೆ.
‘ಕೇಂದ್ರದ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಆರೋಗ್ಯ ಸೌಲಭ್ಯ ಒದಗಿಸಲು ರಾಜ್ಯದಲ್ಲಿ ಬೆಂಗಳೂರಿನಲ್ಲಿ ಮಾತ್ರ ಸರ್ಕಾರದ ಚಿಕಿತ್ಸಾಲಯವಿದ್ದು, ಹುಬ್ಬಳ್ಳಿಯಲ್ಲಿ ಘಟಕ ಆರಂಭಿಸಬೇಕು ಎನ್ನುವ ಬೇಡಿಕೆ ನಮ್ಮದು. ಅದಕ್ಕಾಗಿ ಸಂಘಟನೆ ರೂಪಿಸಿಕೊಂಡಿದ್ದೇವೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಈ ಕುರಿತು ಮನವಿ ಸಲ್ಲಿಸಿದ್ದು, ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಚಿಕಿತ್ಸಾಲಯ ಕೇಂದ್ರ ಹುಬ್ಬಳ್ಳಿಯಲ್ಲಿ ಆರಂಭವಾದರೆ ಉತ್ತರ ಕರ್ನಾಟಕದ 50 ಸಾವಿರ ಕೇಂದ್ರದ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಅನುಕೂಲ ಸಿಗಲಿದೆ’ ಎಂದು ರಮೇಶ ಜೋಶಿ ತಿಳಿಸಿದ್ದಾರೆ.
ಆದ್ದರಿಂದ ಈ ಭಾಗದ ಫಲಾನುಭವಿಗಳು ಸಂಘದ ಸದಸ್ಯತ್ವ ಪಡೆದುಕೊಳ್ಳಬೇಕು. ಕೇಂದ್ರಕ್ಕೆ ಸಂಬಂಧಿಸಿದ ಸಂಘಟನೆಗಳು ಕೂಡ ಇದಕ್ಕೆ ಕೈ ಜೋಡಿಸಬೇಕು ಎಂದು ಅವರು ಕೋರಿದ್ದಾರೆ. ಇನ್ನಷ್ಟು ಮಾಹಿತಿಗೆ ರಮೇಶ ಜೋಶಿ ಅವರ ಮೊಬೈಲ್ ಸಂಖ್ಯೆ 9449482860 ಸಂಪರ್ಕಿಸಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.