ಹುಬ್ಬಳ್ಳಿ: ನಗರದಲ್ಲಿ ಬುಧವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು–ವರ ಮದುವೆ ಮಂಟಪದ ವೇದಿಕೆಯಲ್ಲಿಯೇ ನೇತ್ರದಾನದ ಶಪಥ ಮಾಡಿದರು.
ಲಿಂಗರಾಜ ನಗರದ ಸುಮಂಗಲಾ ಹಾಗೂ ಲಿಂಗರಾಜ ಅಂಗಡಿ ದಂಪತಿ ಪುತ್ರ ಸುಚಿತ್ ಅಂಗಡಿ ಅವರ ವಿವಾಹ ಸವದತ್ತಿ ತಾಲ್ಲೂಕಿನ ಚಚಡಿ ಗ್ರಾಮದ ಸುಜಾತಾ–ವೀರಪ್ಪ ಹಲ್ಯಾಳ ದಂಪತಿಯ ಎರಡನೇ ಪುತ್ರಿ ರಜನಿ ಜೊತೆ ಇಲ್ಲಿನ ಚವ್ಹಾಣ ಗ್ರೀನ್ ಗಾರ್ಡನ್ನಲ್ಲಿ ನೆರವೇರಿತು.
ಮರಣದ ಬಳಿಕ ನೇತ್ರದಾನ ಮಾಡುವುದಾಗಿ ನವದಂಪತಿ ಶಪಥ ಮಾಡಿದರು. ಈ ಜೋಡಿಗೆ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ನಿರ್ದೇಶಕ ಶ್ರೀನಿವಾಸ ಜೋಶಿ ಹಾಗೂ ನೇತ್ರ ತಜ್ಞ ಅನಿಕೇತ್ ಶಾಸ್ತ್ರಿ ಅವರು ತಮ್ಮ ಸಂಸ್ಥೆಯ ಪತ್ರ ನೀಡಿದರು.
ವಿವಾಹ ಮಾಡಿಕೊಂಡ ಕುಟುಂಬಸ್ಥರ ಕೋರಿಕೆ ಮೇರೆಗೆ ಜೋಶಿ ಆಸ್ಪತ್ರೆ ವತಿಯಿಂದ ಕಲ್ಯಾಣ ಮಂಟಪದಲ್ಲಿ ನೇತ್ರದಾನಕ್ಕೆ ಹೆಸರು ನೋಂದಾಯಿಸಲು ಕೌಂಟರ್ ತೆರೆಯಲಾಗಿತ್ತು. 71 ಜನ ನೇತ್ರದಾನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದರು. ನಟ ಪುನೀತ್ ರಾಜ್ಕುಮಾರ್ ನಿಧನದ ನಂತರ ಎಲ್ಲೆಡೆ ನೇತ್ರದಾನದ ಜಾಗೃತಿ ಹೆಚ್ಚಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.