ADVERTISEMENT

ಮೈತ್ರಿ ಸರ್ಕಾರ ಪತನ: ಬಿಜೆಪಿ ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2019, 20:05 IST
Last Updated 23 ಜುಲೈ 2019, 20:05 IST
ಮೈತ್ರಿ ಸರ್ಕಾರ ಅಧಿಕಾರ ಕಳೆದುಕೊಂಡ ಹಿನ್ನೆಲೆಯಲ್ಲಿ ಹುಬ್ಬಳ್ಳಿ ದುರ್ಗದಬೈಲ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮ ಆಚರಿಸಿದರು –ಪ್ರಜಾವಾಣಿ ಚಿತ್ರ
ಮೈತ್ರಿ ಸರ್ಕಾರ ಅಧಿಕಾರ ಕಳೆದುಕೊಂಡ ಹಿನ್ನೆಲೆಯಲ್ಲಿ ಹುಬ್ಬಳ್ಳಿ ದುರ್ಗದಬೈಲ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮ ಆಚರಿಸಿದರು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ವಿಶ್ವಾಸಮತಯಾಚನೆಯಲ್ಲಿ ಮೈತ್ರಿ ಸರ್ಕಾರ ವಿಫಲವಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಮಂಗಳವಾರ ರಾತ್ರಿ ನಗರದ ದುರ್ಗದಬೈಲ್‌ನಲ್ಲಿ ಸಂಭ್ರಮಾಚರಿಸಿದರು.

ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದ ಕಾರ್ಯಕರ್ತರು, ಬಿಜೆಪಿಗೆ ಜೈಕಾರ ಹಾಕಿದರು.

ಈ ವೇಳೆ ಮಾತನಾಡಿದ ಮಹಾನಗರ ಜಿಲ್ಲಾ ಘಟಕದ ಬಿಜೆಪಿ ಅಧ್ಯಕ್ಷ ನಾಗೇಶ ಕಲಬುರ್ಗಿ, ‘ಹದಿನಾಲ್ಕು ತಿಂಗಳಿನಿಂದ ರಾಜ್ಯದಲ್ಲಿ ಮೈತ್ರಿ ಆಡಳಿತ ನಡೆಸಿದ್ದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸರ್ಕಾರ ಪತನವಾಗಿದೆ. ಅಧಿಕಾರದ ಲಾಲಸೆಗಾಗಿ ಎರಡೂ ಪಕ್ಷದ ಮುಖಂಡರು ನಾಡಿನ ಜನತೆಯ ವಿರೋಧದ ನಡುವೆಯೇ ಸರ್ಕಾರ ನಡೆಸಿದರು. ಜನಾದೇಶ ಇಲ್ಲದಿದ್ದರೂ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು. ಇದೀಗ ಮೈತ್ರಿ ಪಕ್ಷದ ಶಾಸಕರೇ ಅವರಿಗೆ ಕೈಕೊಟ್ಟು ಸರ್ಕಾರ ಪತನ ಆಗುವ ಹಾಗೆ ಮಾಡಿದ್ದಾರೆ’ ಎಂದು ಟೀಕಿಸಿದರು.

ADVERTISEMENT

ಪೂರ್ವ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಶಿವು ಮೆಣಸಿನಕಾಯಿ ಮಾತನಾಡಿ, ‘ಪರಸ್ಪರ ಕಚ್ಚಾಟ, ಅಧಿಕಾರಕ್ಕಾಗಿ ಪೈಪೋಟಿ ಮಾಡುತ್ತಲೇ ಹದಿನಾಲ್ಕು ತಿಂಗಳು ದೋಸ್ತಿ ಸರ್ಕಾರ ಆಡಳಿತ ನಡೆಸಿತು. ವರ್ಗಾವಣೆಯನ್ನು ದಂಧೆಯನ್ನಾಗಿ ಮಾಡಿಕೊಂಡ ಸಚಿವರು ಬೇಕಾಬಿಟ್ಟಿಯಾಗಿ ಆಡಳಿತ ನಡೆಸಿದರು. ಈಗ ಸರ್ಕಾರ ಪತನವಾಗಿದ್ದು, ಯಡಿಯೂರಪ್ಪ ನೇತೃತ್ವದ ಸರ್ಕಾರ ಶೀಘ್ರವೇ ರಚನೆಯಾಗಲಿದೆ. ಮೋದಿ ಮಾದರಿಯಲ್ಲಿಯೇ ರಾಜ್ಯದಲ್ಲಿ ಆಡಳಿತ ನಡೆಸಲಿದೆ’ ಎಂದರು.

ಮುಖಂಡರಾದ ಮಹೇಶ ಟೆಂಗಿನಕಾಯಿ, ಚಂದ್ರಶೇಖರ ಗೋಕಾಕ, ನಾರಾಯಣ ಜರತಾರಘರ, ಪ್ರಭು ನವಲಗುಂದಮಠ, ಹನುಮಂತಪ್ಪ ದೊಡ್ಡಮನಿ, ಸಂತೋಷ ಹೊರಕೇರಿ, ಪವನ ಪವಾರ್‌, ರಾಜೀವ್ ಕೋರಿನಮಠ, ಅನೂಪ ಬಿಜವಾಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.