ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಕೃಷಿಕರೊಬ್ಬರನ್ನು ಗೌರವ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಹಾಗೂ ಸಲಹಾ ಸಮಿತಿಯಲ್ಲಿ ಹೊಸಬರಿಗೂ ಅವಕಾಶ ನೀಡಬೇಕು ಎಂದು ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಭಾನುವಾರ ನಡೆದ ಕರ್ನಾಟಕ ವಿದ್ಯಾವರ್ಧಕ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಹಲವು ಸಲಹೆಗಳು ವ್ಯಕ್ತವಾದವು.
ಸಂಘಕ್ಕೆ ಐವರನ್ನು ಗೌರವ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಶ್ಲಾಘನೀಯ. ಕೃಷಿ ಕ್ಷೇತ್ರದಿಂದ ಒಬ್ಬರಿಗೆ ಅವಕಾಶ ನೀಡಬೇಕು ಎಂದು ಕೆಲವು ಸದಸ್ಯರೊಬ್ಬರು ಆಕ್ಷೇಪ ವ್ಯಕ್ತಪಡಿಸಿದರು. ಸಂಘದ ಸದಸ್ಯತ್ವ ಹೊಂದಿದ ಅರ್ಹರಿರುವ ವ್ಯಕ್ತಿಗಳನ್ನು ಗೌರವ ಉಪಾಧ್ಯಕ್ಷ ಸ್ಥಾನಕ್ಕೆ ನೇಮಿಸಲಾಗಿದೆ ಎಂದು ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಉತ್ತರಿಸಿದರು.
ಸಲಹಾ ಸಮಿತಿಗೆ ಹಿಂದಿನ ಸದಸ್ಯರನ್ನೆ ಮರು ನೇಮಕ ಮಾಡಲಾಗಿದೆ. ಬೇರೆ ಸದ್ಯರಿಗೂ ಅವಕಾಶ ನೀಡಬೇಕು ಎಂದು ಸದಸ್ಯರೊಬ್ಬರು ಕೋರಿದರು. ಸಲಹಾ ಸಮಿತಿ ಸದಸ್ಯರ ಅವಧಿ ಒಂದು ವರ್ಷ ಇದ್ದು, ಮುಂದಿನ ಬಾರಿ ಹೊಸಬರಿಗೆ ಅವಕಾಶ ನೀಡುವುದಾಗಿ ಹೊಸಕೇರಿ ಪ್ರತಿಕ್ರಿಯಿಸಿದರು.
ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪ್ರೋತ್ಸಾಹಕ್ಕೆ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಹೆಸರಲ್ಲಿ ಚಿನ್ನದ ಪದಕ ಸ್ಥಾಪಿಸುವ ಸದಸ್ಯ ಸಂಜು ಕುಂಬಾರ ಸಲಹೆ ನೀಡಿದರು.
ಚಿನ್ನದ ಪದಕ ಸ್ಥಾಪಿಸಲು ಬೇಕಾದ ಹಣ ಭರಿಸಲು ಸಂಘ ಶಕ್ತಿಯುತವಾಗಿಲ್ಲ. ಆದರೂ, ಈ ವಿಷಯ ಕಾರ್ಯಕಾರಣಿ ಸಭೆಯಲ್ಲಿ ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗುವುದು ಎಂದು ಬಸವಪ್ರಭು ಹೊಸಕೇರಿ ತಿಳಿಸಿದರು.
ಸಂಘದಲ್ಲಿ ಜಾನಪದ, ಕಾನೂನು ಮತ್ತು ನ್ಯಾಯ, ಶಿಕ್ಷಣ, ವಿಜ್ಞಾನ ಸ್ಥಾಪಿಸಿರುವಂತೆ ಮಂಟಪ ಸ್ಥಾಪಿಸುವ ಉದ್ಯಮ ಮಂಟಪ ಸ್ಥಾಪಿಸಬೇಕು ಎಂದು ಸದಸ್ಯರೊಬ್ಬರೂ ಸಲಹೆ ನೀಡಿದರು. ಸಲಹೆ ಸ್ವೀಕರಿಸಿದ ಆಡಳಿತ ಮಂಡಳಿ, ಸದ್ಯದ ವಾಣಿಜ್ಯ-ಆಡಳಿತ ಮಂಟಪದಲ್ಲಿಯೇ ಉದ್ಯಮ ಸೇರ್ಪಡಿಸುವುದಾಗಿ ಭರವಸೆ ನೀಡಿದರು.
ಸಂಘದಲ್ಲಿ ದತ್ತಿ ಪುನಃ ಆರಂಭಿಸುವ ನಾಗೇಂದ್ರ ಕುಪ್ಪಣ್ಣವರ, ಹಲವು ಸದಸ್ಯರ ಆಗ್ರಹಕ್ಕೆ ಉತ್ತರಿಸಿದ ಹೊಸಕೇರಿ, ಸಂಘದಲ್ಲಿ 147 ದತ್ತಿಗಳಿವೆ. ದತ್ತಿ ಸ್ಥಾಪನೆ ನಿಲ್ಲಿಸಿಲ್ಲ. ದತ್ತಿ ಕಡಿಮೆ ಮಾಡಲು ಮೊತ್ತ ₹2.50 ಲಕ್ಷಕ್ಕೆ ಏರಿಸಲಾಗಿದೆ ಎಂದು ಸ್ಪಷ್ಟಡಿಸಿದರು.
ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಉಪಾಧ್ಯಕ್ಷ ಸಂಜೀವ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಸಹ ಕಾರ್ಯದರ್ಶಿ ಶಂಕರ ಕುಂಬಿ, ಕೋಶಾಧ್ಯಕ್ಷ ಸತೀಶ ತುರುಮರಿ, ಆಡಳಿತ ಮಂಡಳಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.