ಕಲಘಟಗಿ: ರೈತರಿಂದ ಹೆಚ್ಚಿನ ಯೂರಿಯಾ ಬೇಡಿಕೆ ಇರುವುದರಿಂದ ಮಾರಾಟ ಪ್ರಕ್ರಿಯೆ ಮೇಲೆ ಹೆಚ್ಚಿನ ನಿಗಾ ವಹಿಸಲು ವಿಶೇಷ ಜಾರಿದಳದ ಅಧ್ಯಕ್ಷರಾದ ಧಾರವಾಡ ಉಪ ವಿಭಾಗಾಧಿಕಾರಿ ಶಾಲಂ ಹುಸೇನ್ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ತಾಲ್ಲೂಕಿನ ವಿವಿಧೆಡೆ ಸಂಚರಿಸಿ ಕೃಷಿ ಪರಿಕರಗಳ ಮಾರಾಟ ಪರಿಶೀಲಿಸಿತು.
ಮಾರಾಟ ಮಳಿಗೆ ಮತ್ತು ದಾಸ್ತಾನು ಕೇಂದ್ರಗಳಿಗೆ ಭೇಟಿ ನೀಡಿ, ಸಮರ್ಪಕ ಯೂರಿಯಾ ಮತ್ತು ಇತರೆ ಪರಿಕರಗಳ ವಿತರಣೆಗೆ ನಿರ್ದೇಶನ ನೀಡಿತು.
ರೈತರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು, ಬೇಡವಾದ ಸಾಮಗ್ರಿಗಳ ಜೋಡಣೆ ಮಾಡುವುದು, ಪಿಒಎಸ್ ಯಂತ್ರದಲ್ಲಿ ಗೊಬ್ಬರದ ಪ್ರಮಾಣವನ್ನು ದಾಖಲಿಸದೇ ಮಾರಾಟ ಮಾಡುವುದು, ಅಧಿಕೃತ ಬಿಲ್ಲುಗಳನ್ನು ನೀಡದಿರುವುದು ಮುಂತಾದ ಕಾಯ್ದೆಯ ಉಲ್ಲಂಘನೆ ಕಂಡುಬಂದಲ್ಲಿ ಅಂತಹ ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದರು.
ಕೃಷಿ ಪರಿಕರ ಖರೀದಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ರೈತರು ಕೃಷಿ ಇಲಾಖೆಯ ಕಚೇರಿಗೆ ದೂರು ಸಲ್ಲಿಸಬಹುದು. ಕೃಷಿ ಪರಿಕರಗಳನ್ನು ಅಧಿಕೃತ ಮಾರಾಟಗಾರರಿಂದ ಮಾತ್ರ ಖರೀದಿಸಬೇಕು. ರಶೀದಿ ಪಡೆಯಬೇಕು ಎಂದು ಸೂಚಿಸಿದರು.
ಪಿ.ಎಸ್.ಐ ಗಿರೀಶ ಎಂ., ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕಿ ಶ್ರೀದೇವಿ ಎ.ಎಸ್., ಪಶು ಇಲಾಖೆಯ ಸಹಾಯಕ ನಿರ್ದೇಶಕ ದೇವೇಂದ್ರಪ್ಪ ಲಮಾಣಿ, ಆಹಾರ ನಿರೀಕ್ಷಕ ಎಸ್.ಆರ್. ಬೆಂಗಳೂರಕರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.