ಹುಬ್ಬಳ್ಳಿ: ಧಾರವಾಡ ತಾಲ್ಲೂಕಿನ ಗೋವನಕೊಪ್ಪ ಗ್ರಾಮದ ದೂಳಪ್ಪ ಚನ್ನಬಸಪ್ಪ ಡೊಳ್ಳಿನ ಸರ್ಕಾರಿ ನೌಕರಿ ಬಿಟ್ಟು, ಪುಷ್ಪಕೃಷಿಯಲ್ಲಿ ತೊಡಗಿದ್ದು, ಅದರಲ್ಲಿ ಯಶಸ್ಸು ಕಂಡಿದ್ದಾರೆ.
ಎಸ್ಎಸ್ಎಲ್ಸಿ ಓದಿರುವ ದೂಳಪ್ಪ, ಕೆಎಸ್ಆರ್ಟಿಸಿ ಚಾಲಕನಾಗಿ, ಧಾರವಾಡ ತಾಲ್ಲೂಕಿನ ಮಾರಡಿ ಗ್ರಾಮ ಪಂಚಾಯಿತಿ ಸದಸ್ಯನಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ ತಮ್ಮ ಆರು ಎಕರೆ ಜಮೀನಿನಲ್ಲಿ ಪುಷ್ಪ ಕೃಷಿ ಮಾಡುತ್ತಿದ್ದಾರೆ.
‘ತಮಿಳುನಾಡಿನಿಂದ ‘ಬ್ಲ್ಯಾಕ್ ಮ್ಯಾಜಿಕ್’ ತಳಿಯ 4 ಸಾವಿರ ಗುಲಾಬಿ ಸಸಿಗಳನ್ನು ₹18 ರಿಂದ ₹25ಗೆ ಖರೀದಿಸಿ, ಒಂದು ಎಕರೆಯಲ್ಲಿ ನಾಟಿ ಮಾಡಿರುವೆ. ದಿನಕ್ಕೆ 70 ರಿಂದ 80 ಕಟ್ಟು (ಒಂದು ಕಟ್ಟಿನಲ್ಲಿ 20 ರಿಂದ 18 ಹೂವು ಇರುತ್ತವೆ) ಹೂವು ಸಿಗುತ್ತಿವೆ. ಆರೇಳು ವರ್ಷ ಇಳುವರಿ ಬರುತ್ತದೆ’ ಎಂದು ರೈತ ದೂಳಪ್ಪ ಚನ್ನಬಸಪ್ಪ ಡೊಳ್ಳಿನ ‘ಪ್ರಜಾವಾಣಿ’ಗೆ ತಿಳಿಸಿದರು.
ಸ್ಥಳೀಯ ಮಾರುಕಟ್ಟೆಯಲ್ಲಿ ಒಂದು ಕಟ್ಟಿಗೆ ₹50 ರಿಂದ ₹180 ರವರೆಗೂ ದರ ಸಿಗುತ್ತಿದೆ. ಹಬ್ಬಗಳ ಸಂದರ್ಭದಲ್ಲಿ ಹೆಚ್ಚಿನ ದರ ಸಿಗುತ್ತದೆ. ಐದಾರು ವರ್ಷಗಳಿಂದ ಗುಲಾಬಿ ಹೂಗಳನ್ನು ಬೆಳೆಯುತ್ತಿದ್ದು, ತಿಂಗಳಿಗೆ ₹1 ಲಕ್ಷ ಆದಾಯ ಬರುತ್ತಿದೆ’ ಎಂದರು.
ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ ನರ್ಸರಿಗಳಿಂದ ₹1.20 ರಿಂದ ₹2 ಕೊಟ್ಟು ‘ರಾಣಿ’ ತಳಿಯ 30 ಸಾವಿರ ಸೇವಂತಿಗೆ ಸಸಿಗಳನ್ನು ಖರೀದಿಸಿದ್ದು, ಎಕರೆಗೆ 10 ಸಾವಿರದಂತೆ ಮೂರು ಎಕರೆಯಲ್ಲಿ ನಾಟಿ ಮಾಡಿರುವೆ. ದಿನಕ್ಕೆ 2 ರಿಂದ 3 ಕ್ವಿಂಟಲ್ ಹೂಗಳು ಸಿಗುತ್ತಿವೆ. ಸ್ಥಳೀಯ ಮಾರುಕಟ್ಟೆಯಲ್ಲಿ ಕೆ.ಜಿಗೆ ₹70 ರಿಂದ ₹250ರ ವರೆಗೂ ದರ ಸಿಗುತ್ತಿದೆ. ಈ ಬಾರಿಯ ದೀಪಾವಳಿ ಹಬ್ಬದ ವೇಳೆ ₹10 ಲಕ್ಷ ಆದಾಯದ ನಿರೀಕ್ಷೆ ಇದೆ’ ಎಂದು ಹೇಳಿದರು.
‘ಧಾರವಾಡ ಕೃಷಿ ವಿಶ್ವವಿದ್ಯಾಲಯದ ತಜ್ಞರ ಸಲಹೆ ಮೇರೆಗೆ ‘ಅರ್ಕ’ ತಳಿಯ ಹಿರೇಕಾಯಿ ಬಳ್ಳಿಯನ್ನು 1 ಎಕರೆಯಲ್ಲಿ, ಹಾಗಲಕಾಯಿ ಬಳ್ಳಿಯನ್ನು 1 ಎಕರೆಯಲ್ಲಿ ಬೆಳೆಸಿದ್ದೇನೆ. ಉತ್ತಮ ಇಳುವರಿ ಬರುವ ನಿರೀಕ್ಷೆ ಇದೆ’ ಎಂದು ಮಾಹಿತಿ ನೀಡಿದರು.
‘ಬೆಣ್ಣಿ ಹಳ್ಳದಿಂದ ಹೊಲಕ್ಕೆ ಪೈಪ್ಲೈನ್ ಮಾಡಲಾಗಿದೆ. 20 ಸ್ಪ್ರಿಂಕ್ಲರ್ಗಳಿದ್ದು, ಒಂದು ಕೊಳವೆಬಾವಿ ಕೊರೆಸಲಾಗಿದೆ. ಕೃಷಿ ವಿಶ್ವವಿದ್ಯಾಲಯದ ತಜ್ಞರ ಸಲಹೆ ಮೇರೆಗೆ ಸಕಾಲಕ್ಕೆ ಕಸ, ಕಳೆ ನಿರ್ವಹಣೆಗೂ ಔಷಧ ಸಿಂಪಡಣೆ ಮಾಡಲಾಗುತ್ತಿದೆ’ ಎಂದರು.
ಗುಲಾಬಿ ಕೃಷಿ: ತಿಂಗಳಿಗೆ ಕನಿಷ್ಠ ₹1 ಲಕ್ಷ ಆದಾಯ
ಎಕರೆಗೆ 10 ಸಾವಿರದಂತೆ ಮೂರು ಎಕರೆಯಲ್ಲಿ ಸೇವಂತಿಗೆ ಸಸಿ ನಾಟಿ
ಕೃಷಿ ವಿಶ್ವವಿದ್ಯಾಲಯದ ತಜ್ಞರ ಸಲಹೆ
ಸರ್ಕಾರಿ ನೌಕರಿಯಲ್ಲಿ ಕಾಣದ ನೆಮ್ಮದಿ ಉತ್ತಮ ಆದಾಯವನ್ನು ಕೃಷಿಯಲ್ಲಿ ಕಾಣುತ್ತಿರುವೆ. ಆರೋಗ್ಯಯುತ ಬದುಕಿನೊಂದಿಗೆ ವರ್ಷಕ್ಕೆ ಕನಿಷ್ಠ ₹20 ಲಕ್ಷ ಆದಾಯ ಪಡೆಯುತ್ತಿರುವೆದೂಳಪ್ಪ ಚನ್ನಬಸಪ್ಪ ಡೊಳ್ಳಿನ ಗೋವನಕೊಪ್ಪದ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.