ADVERTISEMENT

ಮೇಲ್ಸೇತುವೆ: ಒಂದು ಮೀಟರ್‌ ಎತ್ತರ ಹೆಚ್ಚಳ

ಕಾಮಗಾರಿ ಪರಿಶೀಲಿಸಿದ ಶಾಸಕ ಮಹೇಶ ಟೆಂಗಿನಕಾಯಿ,

​ಪ್ರಜಾವಾಣಿ ವಾರ್ತೆ
Published 30 ಮೇ 2025, 15:43 IST
Last Updated 30 ಮೇ 2025, 15:43 IST
ಹುಬ್ಬಳ್ಳಿ ಚನ್ನಮ್ಮ ವೃತ್ತದ ಬಳಿ ಶುಕ್ರವಾರ ಶಾಸಕ ಮಹೇಶ ಟೆಂಗಿನಕಾಯಿ ಮೇಲ್ಸೇತುವೆ ಕಾಮಗಾರಿಯ ನೀಲನಕ್ಷೆ ವೀಕ್ಷಿಸಿದರು. ಡಿಸಿಪಿ ರವೀಶ ಸಿ.ಆರ್‌. ಉಪಸ್ಥಿತರಿದ್ದರು
ಹುಬ್ಬಳ್ಳಿ ಚನ್ನಮ್ಮ ವೃತ್ತದ ಬಳಿ ಶುಕ್ರವಾರ ಶಾಸಕ ಮಹೇಶ ಟೆಂಗಿನಕಾಯಿ ಮೇಲ್ಸೇತುವೆ ಕಾಮಗಾರಿಯ ನೀಲನಕ್ಷೆ ವೀಕ್ಷಿಸಿದರು. ಡಿಸಿಪಿ ರವೀಶ ಸಿ.ಆರ್‌. ಉಪಸ್ಥಿತರಿದ್ದರು   

ಹುಬ್ಬಳ್ಳಿ: ‘ವ್ಯಾಪಾರಸ್ಥರ ಅನುಕೂಲಕ್ಕಾಗಿ ಹಾಗೂ ವಾಣಿಜ್ಯ ಕಟ್ಟಡಗಳು ಮರೆಯಾಗಬಾರದೆಂದು ಚನ್ನಮ್ಮ ವೃತ್ತದ ಸುತ್ತಮುತ್ತ ಮೇಲ್ಸೇತುವೆಯ ಎತ್ತರವನ್ನು ಒಂದು ಮೀಟರ್‌ ಎತ್ತರ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ, ಮಹಾನಗರ ಪಾಲಿಕೆ ಹಾಗೂ ಮೇಲ್ಸೇತುವೆ ಗುತ್ತಿಗೆ ಪಡೆದ ಕಂಪನಿ ಅಧಿಕಾರಿಗಳೊಂದಿಗೆ ಶುಕ್ರವಾರ ಚನ್ನಮ್ಮ ವೃತ್ತದ ಸುತ್ತಮುತ್ತ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ನಡೆಸಿ, ಅವರು ಮಾಧ್ಯದವರೊಂದಿಗೆ ಮಾತನಾಡಿದರು.

‘ಹೊಸೂರು ವೃತ್ತದಿಂದ ಚನ್ನಮ್ಮ ವೃತ್ತ ಹಾಗೂ ಚನ್ನಮ್ಮ ವೃತ್ತದಿಂದ ವಿಜಯಪುರ ರಸ್ತೆಯ ಹಳೇ ಕೋರ್ಟ್‌ ವೃತ್ತದವರೆಗಿನ 650 ಮೀಟರ್‌ ಮೇಲ್ಸೇತುವೆ ಕಾಮಗಾರಿ ಭರದಿಂದ ಸಾಗುತ್ತಿದೆ. ಈ ಭಾಗದಲ್ಲಿ ವಾಣಿಜ್ಯ ಕಟ್ಟಡಗಳು ಹೆಚ್ಚು ಇರುವುದರಿಂದ, ಈಗಿರುವ ಮೇಲ್ಸೇತುವೆ ವಿನ್ಯಾಸದಿಂದ ಕಟ್ಟಡಗಳು ಮರೆಯಾಗುತ್ತಿದ್ದವು. ಅದಕ್ಕೆ ಪರಿಹಾರವಾಗಿ, ಮೇಲ್ಸೇತುವೆಯ ವಿನ್ಯಾಸ ಬದಲಾಯಿಸಿ ಒಂದು ಮೀಟರ್‌ ಎತ್ತರ ಹೆಚ್ಚಿಸಿ ಕಾಮಗಾರಿ ಆರಂಭಿಸಲಾಗಿದೆ’ ಎಂದು ಹೇಳಿದರು.

ADVERTISEMENT

‘ಏಪ್ರಿಲ್‌ 20ರಿಂದ ಈ ಭಾಗದಲ್ಲಿ ವಾಹನಗಳ ಸಂಚಾರ ಸ್ಥಗಿತಗೊಳಿಸಿ, ಕಾಮಗಾರಿಗೆ ವೇಗ ಹೆಚ್ಚಿಸಲಾಗಿದೆ. ಒಂದೂವರೆ ತಿಂಗಳ ಅವಧಿಯಲ್ಲಿ 17 ಗರ್ಡರ್‌ ಅಳವಡಿಸಲಾಗಿದ್ದು, ಇನ್ನು 63 ಗರ್ಡರ್‌ ಅಳವಡಿಸಬೇಕಿದೆ. ಒಳಚರಂಡಿ ಮತ್ತು ಕುಡಿಯುವ ನೀರಿನ ಪೈಪ್‌ ಲೈನ್‌ ಕಾಮಗಾರಿ ಮುಕ್ತಾಯವಾಗಿದೆ. ಬೃಹತ್‌ ಗಾತ್ರದ ಯಂತ್ರಗಳು ಬಂದಿದ್ದು, ರಾತ್ರಿವೇಳೆ ಕಾಮಗಾರಿ ಜೋರಾಗಿ ನಡೆಯುತ್ತದೆ. ಗಡುವು ನೀಡಿದ (ಆಗಸ್ಟ್ 19) ದಿನದ ಒಳಗೆ ನಿಗದಿಪಡಿಸಿದ ಕಾಮಗಾರಿ ಪೂರ್ಣಗೊಳಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ’ ಎಂದು ತಿಳಿಸಿದರು.

‘ಹೊಸೂರು ವೃತ್ತದಿಂದ ಸಿಬಿಟಿ ಕಡೆಗೆ ತೆರಳಲು ಹಳೇ ಬಸ್‌ ನಿಲ್ದಾಣದ ಎದುರು ಬಿಆರ್‌ಟಿಎಸ್‌ ಬಸ್‌ ನಿಲ್ದಾಣ ನಿರ್ಮಾಣವಾಗುತ್ತಿದೆ. ಚನ್ನಮ್ಮ ವೃತ್ತದಲ್ಲಿ ರೂಟರ್‌ ನಿರ್ಮಾಣವಾಗಲಿದ್ದು, ಹದಿನೈದು ದಿನಗಳಲ್ಲಿ ಅದರ ಕಾಮಗಾರಿ ಆರಂಭವಾಗಲಿದೆ. ಮೊದಲ ಹಂತದ ಕಾಮಗಾರಿ ಮುಕ್ತಾಯವಾದ ನಂತರ, ಗದಗ ರಸ್ತೆಯ ಕಾಮಗಾರಿ ಆರಂಭಿಸಲಾಗುವುದು. ಭೂಸ್ವಾಧೀನ ಪ್ರಕ್ರಿಯೆ ಮುಕ್ತಾಯವಾಗಿದ್ದು, ಕೋರ್ಟ್‌ ತಡೆಯಾಜ್ಞೆಯೂ ತೆರವಾಗಿದೆ. ಡಿಸೆಂಬರ್‌ ಅಂತ್ಯದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಭರವಸೆಯಿದೆ’ ಎಂದು ಶಾಸಕ ಟೆಂಗಿನಕಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಡಿಸಿಪಿ ರವೀಶ ಸಿ.ಆರ್‌, ಸಾರಿಗೆ ಅಧಿಕಾರಿ ಸಿದ್ದೇಶ್ವರ, ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ಪ್ರದೀಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಜಂಟಿ ಕಾರ್ಯಾಚರಣೆ: ಡಿಸಿಪಿ ‘ಸಾರಿಗೆ ಸಂಸ್ಥೆ ಬಸ್‌ಗಳು ನಿಗದಿತ ಸ್ಥಳದಲ್ಲಿ ನಿಲ್ಲುವುದು ಬಿಟ್ಟು ಕಂಡಕಂಡಲ್ಲಿ ನಿಲುಗಡೆಯಾಗುತ್ತಿದೆ. ಸುವ್ಯವಸ್ಥಿತ ಸಂಚಾರಕ್ಕೆ ಇದು ಸಮಸ್ಯೆಯಾಗುತ್ತಿದ್ದು ಸಾರಿಗೆ ಸಂಸ್ಥೆ ಅಧಿಕಾರಿಗಳನ್ನೊಳಗೊಂಡ ಪೊಲೀಸರ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗುವುದು’ ಎಂದು ಡಿಸಿಪಿ ರವೀಶ್‌ ಸಿ.ಆರ್‌. ಹೇಳಿದರು. ‘ಬಸ್‌ ನಿಲುಗಡೆ ಸ್ಥಳ ಬಿಟ್ಟು ಪ್ರಯಾಣಿಕರು ಕೈ ತೋರಿಸಿದ ಜಾಗದಲ್ಲಿ ಸಾರಿಗೆ ಸಂಸ್ಥೆ ಬಸ್‌ಗಳನ್ನು ನಿಲ್ಲಿಸಲಾಗುತ್ತಿದೆ. ಮೇಲ್ಸೇತುವೆ ಕಾಮಗಾರಿಯಿಂದ ಈಗಾಗಲೇ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಬಸ್‌ಗಳನ್ನು ಕಂಡಕಂಡಲ್ಲಿ ನಿಲ್ಲಿಸುವುದರಿಂದ ಮತ್ತಷ್ಟು ಸಂಚಾರ ದಟ್ಟಣೆ ಎದುರಾಗುತ್ತಿದೆ. ಬಸ್‌ ಚಾಲಕರಿಗೂ ನೋಟಿಸ್‌ ನೀಡುವ ಪ್ರಕ್ರಿಯೆಗೆ ಸಂಸ್ಥೆ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.