ಹುಬ್ಬಳ್ಳಿ: ನಗರದ ರಾಜೇಂದ್ರ ಕಾಲೊನಿಯಲ್ಲಿ ಪಟ್ಟಸಾಲಿ ಸಮಾಜದ ಸಮುದಾಯ ಭವನದ ಆವರಣದಲ್ಲಿ ಈಶ್ವರ ಹಾಗೂ ಗಣೇಶ ದೇವಸ್ಥಾನ ನಿರ್ಮಾಣಕ್ಕೆ ಫೆ.13ರಂದು ಅಡಿಗಲ್ಲು ಸಮಾರಂಭ ಏರ್ಪಡಿಸಲಾಗಿದೆ ಎಂದು ಹುಬ್ಬಳ್ಳಿ–ಧಾರವಾಡ ಪಟ್ಟಸಾಲಿ (ನೇಕಾರ) ಸಮಾಜದ ಅಧ್ಯಕ್ಷ ವಿಶ್ವನಾಥ ಗಿಣಿಮಾವ ಹೇಳಿದರು.
‘ಸಮಾಜದ ಕುಲಗುರುಗಳಾದ ಬಸವರಾಜ ಪಟ್ಟದಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಉದ್ಘಾಟಿಸುವರು. ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ ಭಾಗವಹಿಸುವರು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ರಾಜೇಂದ್ರ ಕಾಲೊನಿಯ ಸಿಎ ನಿವೇಶನದಲ್ಲಿ ಶಾಸಕರ ಅನುದಾನದಡಿ ಸಮುದಾಯ ಭವನ ನಿರ್ಮಿಸಲಾಗಿದೆ. ಕಲ್ಯಾಣ ಮಂಟಪ ನಿರ್ಮಿಸುವ ಉದ್ದೇಶವಿದೆ. ಭಮ್ಮಾಪುರ ಚಿಂದಿ ಓಣಿಯಲ್ಲಿದ್ದ ಸಾಲೇಶ್ವರ ದೇವಸ್ಥಾನವು ಮಳೆಯಿಂದ ಶಿಥಿಲಗೊಂಡಿದ್ದು, ನೆಲಸಮ ಮಾಡಲು ಪಾಲಿಕೆ ನೋಟಿಸ್ ನೀಡಿದೆ. ಹಾಗಾಗಿ ರಾಜೆಂದ್ರ ಕಾಲೊನಿಯ ಸಮುದಾಯ ಭವನದ ಆವರಣದಲ್ಲಿ ₹40 ಲಕ್ಷ ವೆಚ್ಚದಲ್ಲಿ ದೇವಸ್ಥಾನ ನಿರ್ಮಿಸಲಾಗುವುದು’ ಎಂದರು. ಸಮಾಜದ ಕಾರ್ಯದರ್ಶಿ ಅಮರೇಶ ನೂಲ್ವಿ, ವೀರಸಂಗಪ್ಪ ಭಾವಿ, ಬಸವರಾಜ ಚಟ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.