ADVERTISEMENT

ಈದ್ಗಾ ಮೈದಾನದಲ್ಲಿ ಗಣೇಶೋತ್ಸವ: ಅವಕಾಶಕ್ಕೆ ಕೋರಿಕೆ

ಮೇಯರ್‌ ಈರೇಶ ಅಂಚಟಗೇರಿ ಅವರಿಗೆ ಗಣೇಶ ಮೂರ್ತಿ ನೀಡಿ ಮನವಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 16:33 IST
Last Updated 18 ಆಗಸ್ಟ್ 2022, 16:33 IST
ಹುಬ್ಬಳ್ಳಿಯ ಪಾಲಿಕೆ ಕೇಂದ್ರ ಕಚೇರಿಯ ಆವರಣದಲ್ಲಿ ಮೇಯರ್‌ ಈರೇಶ ಅಂಚಟಗೇರಿ ಅವರಿಗೆ ಗಜಾನನ ಮಂಡಳ ವತಿಯಿಂದ ಗುರುವಾರ ಸಾಂಕೇತಿಕವಾಗಿ ಗಣೇಶಮೂರ್ತಿ ನೀಡಲಾಯಿತು 
ಹುಬ್ಬಳ್ಳಿಯ ಪಾಲಿಕೆ ಕೇಂದ್ರ ಕಚೇರಿಯ ಆವರಣದಲ್ಲಿ ಮೇಯರ್‌ ಈರೇಶ ಅಂಚಟಗೇರಿ ಅವರಿಗೆ ಗಜಾನನ ಮಂಡಳ ವತಿಯಿಂದ ಗುರುವಾರ ಸಾಂಕೇತಿಕವಾಗಿ ಗಣೇಶಮೂರ್ತಿ ನೀಡಲಾಯಿತು    

ಹುಬ್ಬಳ್ಳಿ: ಇಲ್ಲಿನ ಚನ್ನಮ್ಮ ವೃತ್ತದ ಸಮೀಪದಲ್ಲಿರುವ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ ಗಜಾನನ ಮಂಡಳ ವತಿಯಿಂದ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಮೇಯರ್‌ ಈರೇಶ ಅಂಚಟಗೇರಿ ಅವರಿಗೆ ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಗುರುವಾರ ಮನವಿ ಸಲ್ಲಿಸಲಾಯಿತು.

ಮೇಯರ್ ಈರೇಶ ಅಂಚಟಗೇರಿ ಮಾತನಾಡಿ, ‘ಈ ಸಂಬಂಧ ಪಾಲಿಕೆ ಆಯುಕ್ತರೊಂದಿಗೆ ಚರ್ಚೆ ಮಾಡಿ ತೀರ್ಮಾನಿಸಲಾಗುವುದು’ ಎಂದರು.

ಮಂಡಳದ ಅಧ್ಯಕ್ಷ ಡಿ.ಗೋವಿಂದರಾವ್‌ ಮಾತನಾಡಿ, ‘ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿಪ್ರತಿಷ್ಠಾಪಿಸಬೇಕು ಎಂದು ಪ್ರತಿವರ್ಷ ಮನವಿ ಸಲ್ಲಿಸಲಾಗುತ್ತಿದೆ. ಆದರೆ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಈ ವರ್ಷವಾದರೂ, ಪಾಲಿಕೆ ವತಿಯಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಮೂರು ದಿನ ಹಬ್ಬ ಆಚರಿಸಬೇಕು. ಇಲ್ಲದಿದ್ದರೆ ನಮಗೆ ಅವಕಾಶ ಕೊಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಹಿಂದೂ–ಮುಸ್ಲಿಂ ಸಮುದಾಯದವರು ಹಬ್ಬದಲ್ಲಿ ಭಾಗವಹಿಸಿ, ಸೌಹಾರ್ದತೆ ಕಾಪಾಡಬೇಕು.‌ ಪಾಲಿಕೆ‌ ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಮುಂದುವರಿಸಲಾಗುವುದು’ ಎಂದು ಎಚ್ಚರಿಸಿದರು.

ಮಂಡಳದ ಸುಮಾ ಹಿರೇಮಠ, ಶಿವಯೋಗಿ ವನಹಳ್ಳಿಮಠ, ಶಕುಂತಲಾ ಶೆಟ್ಟಿ ಇದ್ದರು.

‘ಪಿಒಪಿ ಮೂರ್ತಿ ತಗೊಳ್ಳಲ್ಲ’

‘ಇದು ಪಿಒಪಿ ಗಣೇಶ ಮೂರ್ತಿ, ಈ ಮೂರ್ತಿಯನ್ನು ನಾನು ಸ್ವೀಕರಿಸುವುದಿಲ್ಲ. ನೀವೂ ಬಳಸಬೇಡಿ’ ಎಂದು ಹೇಳಿದ ಮೇಯರ್‌ ಈರೇಶ ಅಂಚಟಗೇರಿ ಅವರು, ಗಜಾನನ ಮಹಾಮಂಡಳದ ಸದಸ್ಯರು ನೀಡಿದ ಮೂರ್ತಿಯನ್ನು ವಾಪಸ್‌ ನೀಡಿದರು.

ಮಹಾಮಂಡಳದ ಅಧ್ಯಕ್ಷ ಡಿ.ಗೋವಿಂದರಾವ್‌ ಮಾತನಾಡಿ, ‘ಮೇಯರ್‌ ಅವರಿಗೆ ಮಣ್ಣಿನ ಗಣಪತಿಯನ್ನು ಸಾಂಕೇತಿಕವಾಗಿ ನೀಡಲು ತರಲಾಗಿತ್ತು. ಅದು ಪಿಒಪಿ ಗಣೇಶ ಮೂರ್ತಿ ಅಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.