ಹುಬ್ಬಳ್ಳಿ: ಕಡಿಮೆ ದರದಲ್ಲಿ ನಿವೇಶನ ನೀಡವುದು ಹಾಗೂ ಹಣ ದ್ವಿಗುಣಗೊಳಿಸಿ ಕೊಡುವುದಾಗಿ ನಂಬಿಸಿ, ಜನರಿಂದ ಕೋಟ್ಯಂತರ ರೂಪಾಯಿ ಹಣ ವಸೂಲಿ ಮಾಡಿ ವಂಚಿಸಿದ ಆರೋಪದ ಮೇಲೆ, ಗರೀಮಾ ಹೋಮ್ಸ್ ಅಂಡ್ ಫಾರ್ಮ್ ಹೌಸ್ ಲಿಮಿಟೆಡ್ನ ವಿಶೇಷ ಆಯೋಜಕನನ್ನು ಉಪನಗರ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಸಾತಿಹಾಳ ಗ್ರಾಮದ ರಾಮಯ್ಯ ಗಂಗಯ್ಯ ಹಿರೇಮಠ ಬಂಧಿತ. ಇಂಟರ್ನೆಟ್ ಸೆಂಟರ್ ನಡೆಸುತ್ತಿದ್ದ ಈತ, ಕಂಪನಿಗೆ2011ರಿಂದ ಕೋಟ್ಯಂತರ ರೂಪಾಯಿ ಹಣ ಹೂಡಿಕೆ ಮಾಡಿಸಿದ್ದಾನೆ.
ದೇಶಪಾಂಡೆ ನಗರದಲ್ಲಿ ಗರೀಮಾ ಕಚೇರಿ ಮಾಡಿಕೊಂಡಿದ್ದ ರಾಮಯ್ಯ ಸೇರಿದಂತೆ ನಾಲ್ವರು, 2018ರಲ್ಲಿ ಕಚೇರಿಯನ್ನು ಮುಚ್ಚಿಕೊಂಡು ತಲೆ ಮರೆಸಿಕೊಂಡಿದ್ದರು. ಚನ್ನಬಸಯ್ಯ ಹಿರೇಮಠ ಎಂಬುವರು ನೀಡಿದ ದೂರಿನ ಮೇರೆಗೆ, ನಾಲ್ವರ ವಿರುದ್ಧ ಎಫ್ಐಆರ್ ಆಗಿತ್ತು. ಆರೋಪಿ ಊರಿನಲ್ಲಿರುವ ಮಾಹಿತಿ ಮೇರೆಗೆ, ಬಂಧಿಸಿ ಹುಬ್ಬಳ್ಳಿಗೆ ಕರೆ ತರಲಾಗಿದೆ. ಉಳಿದವರ ಬಂಧನಕ್ಕೆ ಬಲೆ ಬೀಸಲಾಗಿದೆ.
ಗರೀಮಾ ಕಂಪನಿಗೆ ರಾಜಸ್ತಾನದ ದೋಲ್ಪುರ್ ಕ್ಷೇತ್ರದ ಬಿಜೆಪಿ ಶಾಸಕಿ ಶೋಭಾರಾಣಿ ಕುಶ್ವಾಹ ಹಾಗೂ ಅವರ ಪತಿ ಬನ್ವರ್ಲಾಲ್ ಕುಶ್ವಾಹ ಇಬ್ಬರೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರಿಗೆ ನೋಟಿಸ್ ಕೊಟ್ಟು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಉಪನಗರ ಠಾಣೆ ಪೊಲೀಸರು ತಿಳಿಸಿದರು.
ಕಮಿಷನ್ಗಾಗಿ ಕೆಲಸ ಮಾಡುತ್ತಿದ್ದ
₹1 ಲಕ್ಷ ಹೂಡಿಕೆ ಮಾಡಿದರೆ ಆರು ವರ್ಷದಲ್ಲಿ ಹಣ ದ್ವಿಗುಣವಾಗುತ್ತದೆ ಎಂಬ ಆಮೀಷವನ್ನು ಕಂಪನಿ ಒಡ್ಡಿತ್ತು. ವಿಶೇಷ ಆಯೋಜಕನಾಗಿದ್ದ ರಾಮಯ್ಯಧಾರವಾಡ ದಾಂಡೇಲಿ, ಯಾದಗಿರಿ, ರಾಯಚೂರು ಸೇರಿದಂತೆ ಇತರ ಜಿಲ್ಲೆಗಳ ಜನರಿಂದ ಕೋಟ್ಯಂತರ ರೂಪಾಯಿ ಹಣ ಮಾಡಿಕೆ ಮಾಡಿಸಿದ್ದ. ಇದಕ್ಕಾಗಿ ಆತನಿಗೆ ₹1 ಲಕ್ಷಕ್ಕೆ ₹15 ಸಾವಿರ ಕಮಿಷನ್ ಸಿಗುತ್ತಿತ್ತು. ಈ ರೀತಿ ಕಂಪನಿಯು ಅಂದಾಜು ₹120 ಕೋಟಿ ವಂಚಿಸಿದೆ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.