ADVERTISEMENT

ಶ್ರೀಮಂತರ ಬೊಕ್ಕಸ ಸೇರಿದ ಜನರ ತೆರಿಗೆ: ಮಹಾಂತೇಶ್ ಟೀಕೆ

ಧಾರವಾಡ ಜಿಲ್ಲಾ ಸಿಐಟಿಯು ಸಮ್ಮೇಳನ: ಮಹಾಂತೇಶ್ ಟೀಕೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 4:38 IST
Last Updated 6 ಅಕ್ಟೋಬರ್ 2025, 4:38 IST
ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಧಾರವಾಡ ಜಿಲ್ಲಾ ಸಿಐಟಿಯು ಸಮ್ಮೇಳನದಲ್ಲಿ ಕೆ.ಮಹಾಂತೇಶ್ ಮಾತನಾಡಿದರು
ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಧಾರವಾಡ ಜಿಲ್ಲಾ ಸಿಐಟಿಯು ಸಮ್ಮೇಳನದಲ್ಲಿ ಕೆ.ಮಹಾಂತೇಶ್ ಮಾತನಾಡಿದರು   

ಹುಬ್ಬಳ್ಳಿ: ‘ಕಳೆದ ಎಂಟು ವರ್ಷಗಳಿಂದ ಜಿಎಸ್‌ಟಿ ಹೆಸರಿನಲ್ಲಿ ಜನರಿಂದ ತೆರಿಗೆ ರೂಪದಲ್ಲಿ ₹127 ಲಕ್ಷ ಕೋಟಿ ವಸೂಲಿ ಮಾಡಿದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜನಸಾಮಾನ್ಯರಿಗೆ ಮೋಸ ಮಾಡಿ, ಶ್ರೀಮಂತರ ಖಜಾನೆ ತುಂಬಿಸಿದೆ’ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ್ ಟೀಕಿಸಿದರು.

ಇಲ್ಲಿನ ಎಪಿಎಂಸಿ ಆವರಣದಲ್ಲಿರುವ ಶ್ರಮಿಕಭವನದಲ್ಲಿ ಭಾನುವಾರ ಧಾರವಾಡ ಜಿಲ್ಲಾ ಸಿಐಟಿಯು 6ನೇ ಸಮ್ಮೇಳನ ಉದ್ಘಾಟಿಸಿದ ಅವರು, ‘ಈಚೆಗೆ ಜಿಎಸ್‌ಟಿ ಸುಧಾರಣೆ ತಂದು ದೇಶದಾದ್ಯಂತ ಬಿಜೆಪಿ ವಿಜಯೋತ್ಸವ ಆಚರಿಸಿತು. ಇದು ಲೂಟಿಯೋತ್ಸವ ಎಂದು ಆಗಬೇಕಿತ್ತು’ ಎಂದು ವ್ಯಂಗ್ಯವಾಡಿದರು.

ಸಿಐಟಿಯು ರಾಜ್ಯ ಕಾರ್ಯದರ್ಶಿ ಮಾಲಿನಿ ಮೇಸ್ತಾ ಮಾತನಾಡಿ, ‘ಜುಲೈ 9ರಂದು ದೇಶಾದ್ಯಂತ 25 ಕೋಟಿ ಶ್ರಮಜೀವಿಗಳು ಅಖಿಲ ಭಾರತ ಮುಷ್ಕರ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೀತಿಗಳ ವಿರುದ್ಧ ತಮ್ಮ ಪ್ರತಿರೋಧ ವ್ಯಕ್ತಪಡಿಸಿದರು. ಇದರಿಂದಾಗಿ ಕೆಲಸದ ಅವಧಿ ಹೆಚ್ಚಳ, ಮಹಿಳೆಯರಿಗೆ ಕಡ್ಡಾಯ ರಾತ್ರಿ ಪಾಳಿಯಂತಹ ನೀತಿಗಳು ಹಿಂದಕ್ಕೆ ಸರಿದವಲ್ಲದೆ, ಕಾರ್ಮಿಕರಿಗೆ ಕೆಲವು ವೇತನ ಸೌಲಭ್ಯಗಳೂ ಹೆಚ್ಚಳವಾಗಿವೆ’ ಎಂದರು.

ADVERTISEMENT

ಜಿಲ್ಲಾ ಅಧ್ಯಕ್ಷ ಬಿ.ಐ. ಈಳಗೇರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬಿ.ಎನ್. ಪೂಜಾರಿ, ರೈತ ಮುಖಂಡ ಬಿ.ಎಸ್. ಸೊಪ್ಪಿನ, ಅಖಿಲ ಭಾರತ ವಕೀಲರ ಒಕ್ಕೂಟದ ರಾಜ್ಯ ಜಂಟಿ ಕಾರ್ಯದರ್ಶಿ ಬಸವರಾಜ್ ಕೋರಿಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ, ಗುರುಸಿದ್ದಪ್ಪ ಅಂಬಿಗೇರ, ಚನ್ನಮ್ಮ ಡೊಳ್ಳಿನ ಇದ್ದರು.

ಇದಕ್ಕೂ ಮೊದಲು, ಹಿರಿಯ ಮುಖಂಡ ಬಸವಣ್ಣೆಪ್ಪ ನೀರಲಗಿ ಧ್ವಜಾರೋಹಣ ನೆರವೇರಿಸಿದರು. ಅಗಲಿದ ನಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಂಜುನಾಥ ಹುಜರಾತಿ, ನಾರಾಯಣ ಆರೇರ, ಸುನಂದಾ ಚಿಗರಿ, ಎ.ಎಂ. ಖಾನ್, ಜ್ಯೋತಿ ವಡ್ಡರ, ನೀಲಮ್ಮ ಕುರುಬರ ಭಾಗವಹಿಸಿದ್ದರು.

ಕಾರ್ಮಿಕರ ಬದುಕಿನ ಮೇಲೆ ತೀವ್ರ ದಾಳಿ ನಡೆಯುತ್ತಿದೆ. ಕೆಂದ್ರ ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿಯಾಗಿ ವರ್ತಿಸುತ್ತಿವೆ. ಸಮಸ್ಯೆ ಪರಿಹಾರಕ್ಕಾಗಿ ಸಂಘಟಿತ ಹೋರಾಟ ತೀವ್ರಗೊಳಿಸಬೇಕಿದೆ
ಕೆ.ಮಹಾಂತೇಶ್ ಸಿಐಟಿಯು ರಾಜ್ಯ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.