ADVERTISEMENT

‘ಮಾನಸಿಕ ಕಾಯಿಲೆಗೆ ದೇವಾಲಯವೇ ಆಸ್ಪತ್ರೆ’

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 16:22 IST
Last Updated 9 ಡಿಸೆಂಬರ್ 2018, 16:22 IST
ಹರಿದಾಸ ಹಬ್ಬ ಸಮಾರೋಪ ಸಮಾರಂಭದಲ್ಲಿ ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ಮಾತನಾಡಿದರು– ಪ್ರಜಾವಾಣಿ ಚಿತ್ರ
ಹರಿದಾಸ ಹಬ್ಬ ಸಮಾರೋಪ ಸಮಾರಂಭದಲ್ಲಿ ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ಮಾತನಾಡಿದರು– ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಮಾನಸಿಕ ಕಾಯಿಲೆ ನಿವಾರಣೆಗೆ ದೇವಾಲಯವೇ ಆಸ್ಪತ್ರೆ, ಅಲ್ಲಿರುವ ವೈದ್ಯ ಹರಿ’ ಎಂದು ಉಡುಪಿ ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ಹೇಳಿದರು.

ಹರಿದಾಸ ಸೇವಾ ಪ್ರತಿಷ್ಠಾನ ನಗರದಲ್ಲಿ ಆಯೋಜಿಸಿದ್ದ ಹರಿದಾಸ ಹಬ್ಬ ಸಮಾರೋಪ ಸಮಾರಂಭದಲ್ಲಿ ಭಾನುವಾರ ಮಾತನಾಡಿದ ಅವರು, ‘ದೈಹಿಕ ಕಾಯಿಲೆ ಕೆಲವರನ್ನಷ್ಟೇ ಕಾಡಿದರೆ, ಮಾನಸಿಕ ಕಾಯಿಲೆಗೆ ಬಹುತೇಕರು ತುತ್ತಾಗುತ್ತಾರೆ. ಮಾನಸಿಕ ಕಾಯಿಲೆಯಿಂದ ಮುಕ್ತರಾದರೆ ದೈಹಿಕ ಕಾಯಿಲೆ ಪೀಡಿಸದು. ಎಷ್ಟೊಂದು ದೇವಾಲಯಗಳಿವೆ ಎಂದು ಕೆಲವೊಮ್ಮೆ ಅನಿಸುತ್ತದೆ. ಮಾನಸಿಕ ಕಾಯಿಲೆಗಳು ಭಾದಿಸಿದಾಗ ಇನ್ನಷ್ಟು ದೇವಾಲಯಗಳು ಬೇಕು ಎಂಬ ಭಾವನೆ ಬರುತ್ತದೆ. ಋಷಿಗಳು ತಪಸ್ಸಿನ ಶಕ್ತಿಯನ್ನು ದೇವರ ಮೂರ್ತಿಯಲ್ಲಿ ತುಂಬಿಸಿದ್ದಾರೆ’ ಎಂದರು.

‘ದೇವರು ವೈದ್ಯನಾದರೆ ಆತನನ್ನು ತಲುಪುವುದು ಹೇಗೆ ಎಂದು ಹೇಳಿಕೊಡುವ ಮಧ್ವರು ಕಾಂಪೌಂಡರ್ ಇದ್ದಹಾಗೆ. ಆದರೆ, ಕೆಲವೊಮ್ಮೆ ಅವರು ಹೇಳಿದ್ದು ನಮಗೆ ಅರ್ಥ ಆಗುವುದಿಲ್ಲ. ಆದ್ದರಿಂದ ಜನ ಸಾಮಾನ್ಯರಿಗೆ ತಿಳಿಯುವ ಭಾಷೆಯಲ್ಲಿ ಹೇಳಿದ ದಾಸರು ಮಧ್ವರ ಸಹಾಯಕರು. ನಮ್ಮ ಮಟ್ಟಕ್ಕೆ ಇಳಿದು ಅವರು ಹಾಡುಗಳನ್ನು ಹೇಳಿದ್ದಾರೆ. ದಾಸರ ಹಾಡುಗಳನ್ನು ಬದಲಿಸುವ ಅಧಿಕಾರ ನಮಗಿಲ್ಲ. ಹರಿದಾಸರ ಹಾದಿಯಲ್ಲಿ ನಡೆಯಬೇಕು ಎಂಬ ಕಾರಣಕ್ಕೆ ಹರಿದಾಸ ಹಬ್ಬವನ್ನು ಆಯೋಜಿಸಲಾಗುತ್ತಿದೆ’ ಎಂದರು.

ADVERTISEMENT

ಶೇಷಗಿರಿದಾಸ ರಾಯಚೂರು ಮಾತನಾಡಿ, ದಾಸರು ಹೇಳಿದ ಪದಗಳ ಚಿಂತನ ಮಂಥನ ಆಗಬೇಕು ಹಾಗೂ ಅದರ ಸಾರ ಜನರಿಗೆ ಮುಟ್ಟಬೇಕು ಎಂಬ ಕಾರಣಕ್ಕೆ ಹರಿದಾಸ ಹಬ್ಬ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ವಿ.ಜಿ. ನಾಡಗೌಡ ಅವರನ್ನು ಸ್ವಾಮೀಜಿ ಸನ್ಮಾನಿಸಿದರು. ರಮೇಶ ಚವಟೆ, ಡಾ. ಕೃಷ್ಣ ನಾಡಗೌಡ, ಅಂಬೇಕರ, ವ್ಯಾಸಸಮುದ್ರ, ಮುರಳಿ ರಾಯಚೂರು ಇದ್ದರು. ಆ ನಂತರ ನಡೆದ ದಾಸ ಗಾಯನ ಕುಂಚ ಕೋಲಾಟ ಕಾರ್ಯಕ್ರಮ ಜನಮನ ಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.