ADVERTISEMENT

ರಂಗಭೂಮಿ ಕಲಾವಿದರಿಗೆ ಆರೋಗ್ಯ ಕಾರ್ಡ್‌: ಸುಷ್ಮಾ ವೀರ್‌

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 14:52 IST
Last Updated 20 ಅಕ್ಟೋಬರ್ 2020, 14:52 IST
ಸುಷ್ಮಾ ವೀರ್‌
ಸುಷ್ಮಾ ವೀರ್‌   

ಹುಬ್ಬಳ್ಳಿ: ಕೋವಿಡ್‌ ಮತ್ತು ಆರ್ಥಿಕ ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕಿರುರುವ ರಂಗಭೂಮಿ ಕಲಾವಿದರಿಗೆ ನೆರವಾಗಲು ರಂಗಕರ್ಮಿ ಹಾಗೂ ಗುಬ್ಬಿ ವೀರಣ್ಣ ಅವರ ಮೊಮ್ಮಗಳು ಸುಷ್ಮಾ ವೀರ್‌ ಮುಂದೆ ಬಂದಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕೋವಿಡ್‌ನಿಂದಾಗಿ ರಂಗಭೂಮಿ ಕಲಾವಿದರ ಬದುಕು ಬೀದಿಗೆ ಬಂದಿದೆ. ಅನೇಕರಿಗೆ ಸರ್ಕಾರ ನೆರವಾಗಿದೆ. ಎಲ್ಲರಿಗೂ ಸರ್ಕಾರವೇ ನೆರವಾಗಬೇಕು ಎಂದು ಕಾಯುತ್ತಿದ್ದರೆ ಆಗುವುದಿಲ್ಲ. ಆದ್ದರಿಂದ ಸ್ವಂತ ಖರ್ಚಿನಿಂದ ಕಲಾವಿದರಿಗೆ ನೆರವಾಗುತ್ತಿದ್ದೇನೆ. ರಾಜ್ಯದಲ್ಲಿ 600ರಿಂದ 700 ಕಲಾವಿದರನ್ನು ಈಗಾಗಲೇ ಗುರುತಿಸಲಾಗಿದ್ದು, ಅವರಿಗೆ ಅರೋಗ್ಯದ ಸಂಪೂರ್ಣ ಖರ್ಚು ನಾನು ನೋಡಿಕೊಳ್ಳುತ್ತಿದ್ದೇನೆ. ಅವರಿಗೆ ಆರೋಗ್ಯ ಕಾರ್ಡ್‌ ನೀಡುತ್ತೇವೆ’ ಎಂದರು.

‘ಎಲ್ಲರಿಗೂ ನೆರವು ನೀಡಲು ನಾನು ಕೋಟ್ಯಧಿಪತಿಯಲ್ಲ. ಆದರೆ, ನನ್ನ ಮನೆ (ರಂಗಭೂಮಿ) ಸಂಕಷ್ಟಕ್ಕೆ ಸಿಲುಕಿರುವ ಕಾರಣ ಸಾಧ್ಯವಾದಷ್ಟು ನೆರವಾಗಿ ಮೊದಲು ನನ್ನ ಮನೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಕೋವಿಡ್‌ ವಿರುದ್ಧ ಹೋರಾಟ ಪೂರ್ಣಗೊಳ್ಳುವ ತನಕವಾದರೂ ಬದುಕಿರಲು ಕಲಾವಿದರಿಗೆ ತುರ್ತು ನೆರವು ಅಗತ್ಯವಿದೆಯಲ್ಲವೇ’ ಎಂದು ಪ್ರಶ್ನಿಸಿದರು.

ADVERTISEMENT

‘ಹೊಸ ತಂತ್ರಜ್ಞಾನಕ್ಕೆ ತಕ್ಕಂತೆ ಬದಲಾಗಿ ಸ್ಪರ್ಧೆಗೆ ಅಣಿಯಾಗದೆ ಹೋದರೆ ಈಗಿನ ಸ್ಪರ್ಧೆಯಲ್ಲಿ ಉಳಿಯಲು ಸಾಧ್ಯವಿಲ್ಲ. ಈಗಿನ ಸಂಕಷ್ಟದ ಪರಿಸ್ಥಿತಿಯಿಂದ ಹೊರಬರುವ ತನಕ ದುಡಿಯುತ್ತಿದ್ದೇನೆ. ಇದಕ್ಕೆ ಷುಷ್ಮಾವೀರ್ ವೀರ ಕಥಾಕೌರ ಥಿಯೇಟರ್ ಕಂಪನಿ ಗುಬ್ಬಿ ಮತ್ತು ದಾವಣಗೆರೆಯ ಕೆಬಿಆರ್ ನಾಟ್ಯ ಸಂಘ ಕೈ ನೆರವಾಗಿವೆ’ ಎಂದರು.

ರಾಜ್ಯ ವೃತ್ತಿ ರಂಗಭೂಮಿ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಚಿಂದೋಡಿ ಶಂಭುಲಿಂಗಪ್ಪ, ಅಧ್ಯಕ್ಷ ಚಿಂದೋಡಿ ಶ್ರೀಕಂಠೇಶ ಮತ್ತು ಕಲಾವಿದೆ ಹೆಲನ್‌ ಮೈಸೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.