ಹುಬ್ಬಳ್ಳಿ: ಕೃಷಿ ಉತ್ಪನ್ನಗಳ ಇಳುವರಿ ಹೆಚ್ಚಳ, ಕೃಷಿ ವಲಯದಲ್ಲಿ ಹೊಸ ತಂತ್ರಜ್ಞಾನ ಸೇರಿದಂತೆ ಹಲವು ಬಗೆಯ ಯೋಜನೆಗಳನ್ನು ಆವಿಷ್ಕರಿಸಿದ ಕೃಷಿ ನವೋದ್ಯಮಿಗಳ ಕಾರ್ಯಾಗಾರ ಮತ್ತು ಪದವಿ ಪ್ರದಾನ ಕಾರ್ಯಕ್ರಮವು ಬಿಯಾಂಡ್ ಬೆಂಗಳೂರು ಯೋಜನೆ ಅಡಿ ಕರ್ನಾಟಕ ಎಕ್ಸ್ಲರೇಶನ್ ನೆಟ್ವರ್ಕ್ (ಕೆಎಎನ್) ಹಾಗೂ ಐಟಿ–ಇಟಿ ಇಲಾಖೆ ಸಹಯೋಗದಲ್ಲಿ ಇಲ್ಲಿನ ಡೆನಿಸನ್ಸ್ ಹೊಟೇಲ್ನಲ್ಲಿ ಶುಕ್ರವಾರ ನಡೆಯಿತು.
ಕಾರ್ಯಕ್ರಮದಲ್ಲಿ 19 ನವೋದ್ಯಮಿಗಳು, ಬಂಡವಾಳ ಹೂಡಿಕೆದಾರರು, ಇನ್ಕ್ಯುಬೇಟರ್ಸ್ ಪಾಲ್ಗೊಂಡಿದ್ದರು. ಪ್ರಾಜೆಕ್ಟ್ಗಳ ಅನುಷ್ಠಾನವು ಕೃಷಿ ಕ್ಷೇತ್ರಕ್ಕೆ ಯಾವ ರೀತಿ ಕೊಡುಗೆಯಾಗಿ ಪರಿಣಮಿಸಬಹುದು. ಬಂಡವಾಳ ಹೂಡಿಕೆಯಿಂದ ಆಗುವ ಲಾಭ, ನಷ್ಟದ ಬಗ್ಗೆ ನವೋದ್ಯಮಿಗಳು ಮಾಹಿತಿ ನೀಡಿದರು.
‘ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ಇದೇ ಮೊದಲ ಬಾರಿಗೆ ಸ್ಟಾರ್ಟ್ಅಪ್ಗಳ ಪ್ರೋತ್ಸಾಹ ಕಾರ್ಯಕ್ರಮ ನಡೆದಿದೆ. ನವೋದ್ಯಮಿಗಳು ಸ್ಟಾರ್ಟ್ಅಪ್ ಅಡಿಯಲ್ಲಿ ಮೊದಲ ಹಂತದಲ್ಲಿ ಅರ್ಜಿ ಸಲ್ಲಿಸಿದ್ದ 21 ಜನರಲ್ಲಿ 19 ಮಂದಿ ಆಯ್ಕೆ ಮಾಡಲಾಗಿದೆ. ಇವರಿಗೆ ಬೆಂಗಳೂರಿನಲ್ಲಿ ಆರು ತಿಂಗಳ ಅವಧಿಯಲ್ಲಿ ಪ್ರಾಜೆಕ್ಟ್ ರೂಪಿಸಲು ಅವಕಾಶ ನೀಡಲಾಗಿತ್ತು. ಅಗ್ರಿಟೆಕ್, ಅಗ್ರಿಪಿನ್ಟೆಕ್, ಫಿನ್ಟೆಕ್, ಎಜ್ಯುಟೆಕ್ ವಿಷಯಗಳ ಕುರಿತು ಮಾಹಿತಿ ನೀಡಲಾಗಿದೆ’ ಎಂದು ಸ್ಟಾರ್ಟ್ಅಪ್ ಇನ್ಕ್ಯುಬೇಟರ್ ಜೆನಸರ್ವ್ ಸಂಸ್ಥೆ ಸಿಇಒ ಗಿರೀಶ ಹಿರೇಮಠ ವಿವರಿಸಿದರು.
‘19 ನವೋದ್ಯಮಿಗಳ ಪ್ರಾಜೆಕ್ಟ್ನಿಂದ ₹2.3 ಕೋಟಿ ಆದಾಯ ಬಂದಿದೆ. ಪ್ರಾಜೆಕ್ಟ್ಗೆ ₹2.32 ಕೋಟಿ ಫಂಡಿಂಗ್ ಮಾಡಲಾಗಿತ್ತು. 20 ಉದ್ಯೋಗ ಸೃಷ್ಟಿಯಾಗಲಿವೆ. ಅಲ್ಲದೆ, ತಂತ್ರಜ್ಞಾನ ಆಧಾರಿತ ಪ್ರಾಜೆಕ್ಟ್ ಮೂಲಕ 800ಕ್ಕೂ ಹೆಚ್ಚು ರೈತರಿಗೆ ಪ್ರಯೋಜನ ದೊರೆತಂತಾಗಿದೆ’ ಎಂದು ಕೆಎಎನ್ ನಿರ್ದೇಶಕ ಸುನಿಲ್ ಕುಮಾರ ತಿಳಿಸಿದರು.
‘19 ಸ್ಟಾರ್ಟ್ಅಪ್ಗಳಲ್ಲಿ ಮೂರು ಪ್ರಾಜೆಕ್ಟ್ಗಳು ಪೇಟೆಂಟ್ ಪಡೆಯಲು ಹೂಡಿಕೆದಾರರು ಮುಂದಾಗಿದ್ದಾರೆ. ಅಲ್ಲದೆ, 10 ಸ್ಟಾರ್ಟ್ಅಪ್ಗಳಲ್ಲಿ ಪಾಲುದಾರರಾಗಲು ಉದ್ಯಮಿಗಳು ಉತ್ಸುಕತೆ ಹೊಂದಿದ್ದಾರೆ’ ಎಂದರು.
ಕೃಷಿ ವಿಶ್ವವಿದ್ಯಾಲಯದ ಇನ್ಕ್ಯುಬೇಟರ್ ಅಸ್ತ್ರ ಸಂಸ್ಥೆ ಸಿಇಒ ಡಾ.ಎಸ್.ಎಸ್.ಡೊಳ್ಳಿ, ಅಮೃತ ಪಾಟೀಲ, ವೆಂಕಟೇಶ ದೇಶಪಾಂಡೆ ಇದ್ದರು.
- ನವೋದ್ಯಮಿಗಳು, ಬಂಡವಾಳ ಹೂಡಿಕೆದಾರರು ಭಾಗಿ ನವೋದ್ಯಮಗಳೊಂದಿಗೆ ಸಂವಾದ ಬಂಡವಾಳ ಹೂಡಿಕೆಯಿಂದ ಆಗುವ ಲಾಭ, ನಷ್ಟ ಕುರಿತು ಮಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.