ಹುಬ್ಬಳ್ಳಿ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ, ಅಧಿಕ ಲಾಭ ನೀಡುವುದಾಗಿ ನಂಬಿಸಿ ಗದಗ ಜಿಲ್ಲೆಯ ನಾಗರಾಜ ಅವರಿಂದ ₹14 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯೂಟ್ಯೂಬ್ನಲ್ಲಿ ರೋಹನಕುಮಾರ ಎಂಬಾತ ಷೇರು ಮಾರುಕಟ್ಟೆ ಬಗ್ಗೆ ಮಾಹಿತಿ ನೀಡಿದ ವಿಡಿಯೊ ವೀಕ್ಷಿಸಿದ ನಾಗರಾಜ, ಅದರಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದಾರೆ. ನಂತರ ಅವರಿಂದ ವರ್ಗಾಯಿಸಿಕೊಂಡು ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
₹8 ಲಕ್ಷ ವಂಚನೆ: ಲಾಭದ ಆಮಿಷವೊಡ್ಡಿ ವಿದ್ಯಾನಗರದ ಅಡಿವೆಪ್ಪ ಎಚ್., ಅವರಿಗೆ ₹8 ಲಕ್ಷ ವಂಚಿಸಲಾಗಿದೆ.
ಫೇಸ್ಬುಕ್ನಲ್ಲಿ ಪ್ರಸಾರವಾದ ಹೂಡಿಕೆ ಕುರಿತ ಜಾಹೀರಾತು ನೋಡಿ, ಅದರಲ್ಲಿದ್ದ ಸಂಖೆಯನ್ನು ಸಂಪರ್ಕಿಸಿದಾಗ ವಂಚಕರು ಅಡಿವೆಪ್ಪ ಅವರಿಗೆ ಜಿಎಸ್ಐಎನ್ ಆ್ಯಪ್ ಲಿಂಕ್ ಕಳುಹಿಸಿದ್ದಾರೆ. ನಂತರ ಆಧಾರ್, ಪ್ಯಾನ್ ಕಾರ್ಡ್ ಸಂಖ್ಯೆ ಪಡೆದು, ಐಡಿ ಸೃಜಿಸಿ ಹಂತ ಹಂತವಾಗಿ ₹23 ಲಕ್ಷ ವರ್ಗಾಯಿಸಿಕೊಂಡಿದ್ದಾರೆ. ಲಾಭಾಂಶವೆಂದು ₹15 ಲಕ್ಷ ಮರಳಿಸಿ, ₹8 ಲಕ್ಷ ನೀಡದೆ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
₹7.93 ಲಕ್ಷ ವಂಚನೆ: ಕಳವಾಗಿದ್ದ ಮೊಬೈಲ್ ಪೋನ್ ಹಾಗೂ ಲ್ಯಾಪ್ಟಾಪ್ ಬಳಸಿ ₹7,93,084 ವರ್ಗಾಯಿಸಿಕೊಂಡು ವಂಚಿಸಿದ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋಕುಲ್ ರಸ್ತೆಯ ಶರಣಬಸಪ್ಪ ಬಿ., ಅವರು ಈಚೆಗೆ ಬೆಂಗಳೂರಿಗೆ ಹೋಗುತ್ತಿದ್ದ ವೇಳೆ ಸಂಪರ್ಕ ಕ್ರಾಂತಿ ರೈಲಿನಲ್ಲಿ ಅವರ ವಸ್ತುಗಳು ಕಳವಾಗಿದ್ದವು. ಅವುಗಳನ್ನು ಬಳಸಿ ಸಾಮಗ್ರಿಗಳನ್ನು ಖರೀದಿಸಿ, ಹಣ ವರ್ಗಾಯಿಸಿಕೊಳ್ಳಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.