ADVERTISEMENT

ರಸ್ತೆ ಸುರಕ್ಷತಾ ಸಪ್ತಾಹ: ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2023, 4:43 IST
Last Updated 5 ಫೆಬ್ರುವರಿ 2023, 4:43 IST
   

ಹುಬ್ಬಳ್ಳಿ: ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ನಗರದ ಯಂಗ್ ಇಂಡಿಯನ್ ಸಂಸ್ಥೆಯು ವಿವಿಧ ಸಂಘಟನೆ ಸಹಯೋಗದಲ್ಲಿ ಭಾನುವಾರ ನಗರದ ತೋಳನಕೆರೆ ವೃತ್ತದಿಂದ-ಗೋಕುಲ ರಸ್ತೆಯ‌ ಡೆಕ್ಲಥಾನ್'ವರೆಗೆ ರಸ್ತೆ ಸುರಕ್ಷತಾ ಜಾಗೃತಿ ಜಾಥಾ ಹಮ್ಮಿಕೊಂಡಿತ್ತು.

ಹು-ಧಾ ಪೊಲೀಸ್ ಕಮಿಷನರೇಟ್ ಘಟಕ, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ ಟೌನ್, ಡೆಕ್ಲಥಾನ್ ಮತ್ತು ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಸದಸ್ಯರು ಸೈಕಲ್, ಬೈಕ್ ಮತ್ತು ಕಾರ್ ಮೂಲಕ ಜಾಥಾ ನಡೆಸಿದರು. ತೋಳನಕರೆಯಿಂದ‌ ಆರಂಭವಾದ ಜಾಥಾ ವಿದ್ಯಾನಗರ ಶಿರೂರ್‌ ಪಾರ್ಕ್ ಕ್ರಾಸ್, ಹೊಸೂರು ವೃತ್ತ, ಚನ್ನಮ್ಮ‌ವೃತ್ತ, ವಾಣಿವಿಲಾಸ ವೃತ್ತ, ಅಕ್ಷಯಪಾರ್ಕ್ ವೃತ್ತದ ಮೂಲಕ ಸಾಗಿ ಡೆಕ್ಲಥಾನ್ ಎದುರು ಮುಕ್ತಾಯವಾಯಿತು. ರಸ್ತೆ ಸುರಕ್ಷತೆ ಪಾಲಿಸುವ ಕುರಿತು ಫಲಕಗಳನ್ನು ಪ್ರದರ್ಶಿಸಿದರು.

ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಕಮಿಷನರ್ ರಮನ್ ಗುಪ್ತಾ, 'ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲಿಸದೆ ಇರುವುದು ರಸ್ತೆ ಅಪಘಾತಗಳಿಗೆ ಕಾರಣವಾಗುತ್ತಿವೆ. ಇತ್ತೀಚೆಗೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ರಸ್ತೆ ನಿಯಮಗಳನ್ನು ಪಾಲಿಸಲು ನಾವೆಲ್ಲರೂ ಪಣತೊಡಬೇಕಿದೆ. ಹೆಲ್ಮೆಟ್, ಸೀಟ್ ಬೆಲ್ಟ್ ಕಡ್ಡಾಯವಾಗಿ ಧರಿಸಬೇಕು. ವಾಹನ ಚಲಾಯಿಸುವ ಸಂದರ್ಭ ನಮ್ಮ ಜೀವದ ಜೊತೆಗೆ, ಪಾದಚಾರಿ ಮತ್ತು ಎದುರುಗಡೆಯಿಂದ ಬರುವ ಸವಾರರ ಬಗ್ಗೆಯೂ ಜಾಗೃತಿ ಮತ್ತು‌ ಕಾಳಜಿವಹಿಸಬೇಕು' ಎಂದರು.

ADVERTISEMENT

'ಸಂಚಾರ ನಿಯಮ ಉಲ್ಲಂಘಿಸಿರುವ ವಾಹನ ಸವಾರರು ಶೇ 50ರಷ್ಟು ರಿಯಾಯ್ತಿಯಲ್ಲಿ‌ ದಂಡ ಪಾವತಿಸಲು ಫೆ.‌11ರವರೆಗೆ ಅವಕಾಶದವಿದೆ. ಸದುಪಯೋಗ ಪಡೆಸಿಕೊಳ್ಳಬಹುದು' ಎಂದರು.

ಯಂಗ್ ಇಂಡಿಯನ್ ಸಂಸ್ಥಾಪಕ‌ ಡಾ. ಶ್ರೀನಿವಾಸ ಜೋಶಿ, 'ಎಲ್ಲರ‌ ಸಹಕಾರ ಇದ್ದರೆ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು‌ ಸಾಧ್ಯ. ಸಮಾಜ ಬದಲಾಗಬೇಕೆಂದರೆ ಮೊದಲು ನಾವು ಬದಲಾಗಬೇಕು. ಈ ನಿಟ್ಟಿನಲ್ಲಿ ಯಂಗ್ ಇಂಡಿಯನ್ ವಿವಿಧ ಸಂಘಟನೆ ಜೊತೆಗೂಡಿ ರಸ್ತೆ ಸುರಕ್ಷತಾ ಜಾಗೃತಿ ರ್ಯಾಲಿ ಹಮ್ಮಿಕೊಂಡಿದೆ. ಸಂಚಾರ ನಿಯಮ‌ ಪಾಲಿಸಿ ಸಾವು, ನೋವುಗಳನ್ನು ತಪ್ಪಿಸಬೇಕಿದೆ' ಎಂದು ಹೇಳಿದರು.

ಇನ್'ಸ್ಪೆಕ್ಟರ್'ಗಳಾದ ರಮೇಶ ಗೋಕಾಕ್, ಜೆ.ಎಂ. ಕಾಲಿಮಿರ್ಚಿ, ಸಂಘಟನೆ ಪದಾಧಿಕಾರಿಗಳಾದ ಕಿರಣ್ ಅಗರವಾಲ, ಐಶ್ವರ್ಯಾ, ಡಾ. ಪ್ರಕಾಶ ವಾರಿ, ಪ್ರಸನ್ನ ಜೋಶಿ, ಸೂರಜ್, ಇಮಾಮ್ ಕೊಲ್ಲೂರು, ಸಾರೂಕ್ ಇನ್ನಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.