ಹುಬ್ಬಳ್ಳಿ:ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಶುಕ್ರವಾರ ಬೆಳಿಗ್ಗೆ ತರಕಾರಿ ವ್ಯಾಪಾರಸ್ಥರು, ರೈತರು ಮತ್ತು ಗ್ರಾಹಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಕೊರೊನಾ ಸೋಂಕು ಭೀತಿಯನ್ನು ಮರೆತು ನೂಕುನುಗ್ಗಲಿನಲ್ಲಿ ಖರೀದಿ ಮತ್ತು ಮಾರಾಟದಲ್ಲಿ ತೊಡಗಿದ್ದರಿಂದ ಪೊಲೀಸರು ಲಾಠಿಜಾರ್ಜ್ ಮಾಡುವ ಮೂಲಕ ಜನರನ್ನು ಚದುರಿಸಿದರು.
ಲಾಠಿ ಜಾರ್ಜ್ ಬಳಿಕ ರಾಶಿಗಟ್ಟಲೆ ತರಕಾರಿ ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿತು. ಬಿಡಾಡಿ ದನಕರುಗಳು ತಿಂದವು, ಜನರು ಸಹ ಆಯ್ದುಕೊಂಡು ಹೋದರು.
ಹುಬ್ಬಳ್ಳಿ ಎಪಿಎಂಸಿಯಲ್ಲಿ ರೈತರಿಗೆ, ವ್ಯಾಪಾರಸ್ಥರಿಗೆ ತರಕಾರಿ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಆದರೆ, ಧಾರವಾಡದಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಮಾರುಕಟ್ಟೆಗೆ ಬಂದ ಕಾರಣ ಜನಜಾತ್ರೆಯಂತಾಯಿತು. ಈ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಜನರು ಮುಗಿಬಿದ್ದು ಖರೀದಿಯಲ್ಲಿ ತೊಡಗಿದ್ದರಿಂದ ಪೊಲೀಸರು ಬೆತ್ತದ ರುಚಿ ತೋರಿಸಿದರು. ಲಕ್ಷಾಂತರ ರೂಪಾಯಿ ಮೌಲ್ಯದ ತರಕಾರಿ ಬೀದಿ ಮೇಲೆ ರಾಶಿ ಬಿದ್ದು ನಷ್ಟವಾಯಿತು. ಪೊಲೀಸರು ಲಾಠಿ ಜಾರ್ಜ್ ಮಾಡಿರುವುದಕ್ಕೆ ರೈತರು ಮತ್ತು ವ್ಯಾಪಾರಸ್ಥರು ವಿರೋಧ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.