ಹುಬ್ಬಳ್ಳಿ: ದೆಹಲಿಯಲ್ಲಿ ಇದೇ 26ರಂದು ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಹುಬ್ಬಳ್ಳಿಯ ಮಯೂರ ನೃತ್ಯ ಅಕಾಡೆಮಿಯ ನೃತ್ಯಪಟುಗಳು ಹೆಜ್ಜೆ ಹಾಕಲಿದ್ದಾರೆ.
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ, ಈ ವರ್ಷ ವಿವಿಧ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಅದರಲ್ಲಿ ಭರತನಾಟ್ಯಂ ಕೂಡ ಒಂದಾಗಿದೆ. ಪರೇಡ್ನಲ್ಲೂ ಭಾಗವಹಿಸಲಿರುವ ಅಕಾಡೆಮಿಯ ಈ ಹತ್ತು ನೃತ್ಯಪಟುಗಳ ತಂಡವು, ಬೆಳಿಗ್ಗೆ 11.30ರ ಸುಮಾರಿಗೆ ಅರ್ಧ ತಾಸು ಕಾರ್ಯಕ್ರಮ ನೀಡಲಿದೆ.
ನಾಲ್ಕು ಹಂತದ ಸ್ಪರ್ಧೆ:‘ಗಣರಾಜ್ಯೋತ್ಸವಕ್ಕೆ ನೃತ್ಯ ತಂಡಗಳನ್ನು ಆಯ್ಕೆ ಮಾಡುವುದಕ್ಕಾಗಿ ಕೇಂದ್ರ ಸಂಸ್ಕೃತಿ ಸಚಿವಾಲಯವು ರಾಷ್ಟ್ರಮಟ್ಟದಲ್ಲಿ ‘ವಂದೇ ಭಾರತಂ’ ಹೆಸರಿನಲ್ಲಿ ನವೆಂಬರ್ ತಿಂಗಳಲ್ಲಿ ಶಾಸ್ತ್ರೀಯ ನೃತ್ಯ ಸ್ಪರ್ಧೆ ಆಯೋಜಿಸಿತ್ತು. ಮೊದಲ ಎರಡು ಸ್ಪರ್ಧೆಗಳು ವರ್ಚುವಲ್ ಆಗಿ ನಡೆದಿದ್ದವು. ಅದಕ್ಕಾಗಿ ನಮ್ಮ ಅಕಾಡೆಮಿಯ ನೃತ್ಯಪಟುಗಳ ನೃತ್ಯದ ವಿಡಿಯೊ ಕಳಿಸಿ ಕೊಟ್ಟಿದ್ದೆವು’ ಎಂದು ಅಕಾಡೆಮಿಯ ಅಧ್ಯಕ್ಷೆ ವಿದುಷಿ ಹೇಮಾ ವಾಘಮೋಡೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘3ನೇ ಹಂತದ ವಲಯ ಮಟ್ಟದಸ್ಪರ್ಧೆಯು ಡಿ. 11ರಂದು ಬೆಂಗಳೂರಿನಲ್ಲಿ ನಡೆದಿತ್ತು. ಅಲ್ಲಿ ಆಯ್ಕೆಯಾದವರಿಗೆ ದೆಹಲಿಯಲ್ಲಿ 4ನೇ ಹಂತದ ಸ್ಪರ್ಧೆಯನ್ನುಡಿ.19ರಂದು ಆಯೋಜಿಸಲಾಗಿತ್ತು. ದೇಶದಾದ್ಯಂತ 65 ನೃತ್ಯ ತಂಡಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ನಮ್ಮ ವಿದ್ಯಾರ್ಥಿಗಳು ಪ್ರದರ್ಶಿಸಿದ ಝಾನ್ಸಿ ರಾಣಿ ಲಕ್ಷ್ಮಿಬಾಯಿ ಜೀವನ ಕುರಿತ ನೃತ್ಯ ರೂಪಕವು ತೀರ್ಪುಗಾರರ ಮೆಚ್ಚುಗೆ ಪಾತ್ರವಾಗಿ, ಗಣರಾಜ್ಯೋತ್ಸವಕ್ಕೆ ಆಯ್ಕೆಯಾಯಿತು. ದೇಶದ ಗಣರಾಜ್ಯೋತ್ಸವದಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ನೀಡಲು ಅವಕಾಶ ಸಿಕ್ಕಿರುವುದು ಹೆಮ್ಮೆಯ ಸಂಗತಿ’ ಎಂದರು.
ನಿತ್ಯ 6 ತಾಸು ತರಬೇತಿ:‘ನೃತ್ಯ ಕಾರ್ಯಕ್ರಮಕ್ಕೆ ಆಯ್ಕೆಯಾದ ನಾವು ಜ. 7ರಂದು ದೆಹಲಿಗೆ ಹೋದೆವು. ಅಲ್ಲಿ ನುರಿತ ನೃತ್ಯಪಟುಗಳು ನಿತ್ಯ ಆರು ತಾಸು ತರಬೇತಿ ನೀಡಿದರು. ಪರೇಡ್ ನಡೆಯಲಿರುವ ರಾಜಪಥ್ನಲ್ಲಿರುವ ಮೈದಾನದಲ್ಲಿ ಬೆಳಿಗ್ಗೆ ತರಬೇತಿಗಾಗಿ ಕರೆದೊಯ್ಯುತ್ತಿದ್ದರು. ನೃತ್ಯಕ್ಕೆ ಬೇಕಾದ ಉಡುಪನ್ನು ಆಯೋಜಕರೇ ಒದಗಿಸಿದ್ದಾರೆ’ ಎಂದು ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲಿರುವ ನೃತ್ಯಪಟು ಯುಕ್ತಾ ಕದಂಬ ಹೇಳಿದರು.
‘ವಂದೇ ಭಾರತಂ ಪರಿಕಲ್ಪನೆಯಡಿ ನಮ್ಮ ತಂಡದ ಹತ್ತು ಮಂದಿ ಸೇರಿದಂತೆ, ಒಟ್ಟು 80 ಮಂದಿ ಭರತನಾಟ್ಯಂ ಕಾರ್ಯಕ್ರಮ ನೀಡಲಿದ್ದೇವೆ. ದೇಶದ ವಿವಿಧ ಭಾಗದ ನೃತ್ಯಪಟುಗಳೆಲ್ಲರೂ ಸೇರಿ ಗಣರಾಜ್ಯೋತ್ಸವದಂದು ನೃತ್ಯ ಪ್ರದರ್ಶಿಸುತ್ತಿರುವುದು ಹೆಮ್ಮೆಯ ಭಾವ ಮೂಡಿಸಿದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.