ADVERTISEMENT

ಹುಬ್ಬಳ್ಳಿ ಧಾರವಾಡದ 9 ಇಂದಿರಾ ಕ್ಯಾಂಟೀನ್‌ಗಳಿಗೆ ಬರಬೇಕಿದೆ ₹4 ಕೋಟಿ ಬಾಕಿ!

ಬಿಲ್ ಪಾವತಿಗೆ ಕಾರ್ಮಿಕ ಇಲಾಖೆ, ಮಹಾನಗರ ಪಾಲಿಕೆ ಮೀನಮೇಷ

​ಪ್ರಜಾವಾಣಿ ವಾರ್ತೆ
Published 17 ಮೇ 2022, 13:50 IST
Last Updated 17 ಮೇ 2022, 13:50 IST
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್ ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್ ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ಬಡವರಿಗೆ ಅತ್ಯಂತ ಕಡಿಮೆ ದರದಲ್ಲಿ ಆಹಾರ ಒದಗಿಸಿ ಹಸಿವು ನೀಗಿಸುವ ಅವಳಿನಗರದ 9 ಇಂದಿರಾ ಕ್ಯಾಂಟೀನ್‌ಗಳು ಇದೀಗ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿವೆ. ಕ್ಯಾಂಟೀನ್‌ಗಳ ನಿರ್ವಹಣೆಯ ಗುತ್ತಿಗೆ ಪಡೆದಿರುವಮಯೂರ ಆದಿತ್ಯ ರೆಸಾರ್ಟ್‌ಗೆ ಮಹಾನಗರ ಪಾಲಿಕೆ ಮತ್ತು ಕಾರ್ಮಿಕ ಇಲಾಖೆ ಸುಮಾರು ₹4 ಕೋಟಿಯಷ್ಟು ಬಿಲ್ ಬಾಕಿ ಉಳಿಸಿಕೊಂಡಿವೆ.

ಕ್ಯಾಂಟೀನ್‌ಗಳಲ್ಲಿ ಬೆಳಿಗ್ಗೆ ಉಪಾಹಾರಕ್ಕೆ ₹5 ಹಾಗೂ ಮಧ್ಯಾಹ್ನ, ರಾತ್ರಿ ಊಟಕ್ಕೆ ₹10 ನಿಗದಿಪಡಿಸಲಾಗಿದೆ. ಸಕಾಲಕ್ಕೆ ಬಿಲ್ ಬಿಡುಗಡೆ ಮಾಡದಿರುವುದರಿಂದ ಕ್ಯಾಂಟೀನ್‌ಗಳಿಗೆ ಆಹಾರ ತಯಾರಿಕೆ, ಸಾಗಣೆ, ಸಿಬ್ಬಂದಿ ಸಂಬಳ ಸೇರಿದಂತೆ ವಿವಿಧ ಖರ್ಚುಗಳನ್ನು ನಿಭಾಯಿಸುವುದು ಗುತ್ತಿಗೆದಾರರಿಗೆ ಸವಾಲಾಗಿದೆ.

ಮೂರು ವರ್ಷದಿಂದ ಬಾಕಿ

ADVERTISEMENT

‘ಕಾರ್ಮಿಕ ಇಲಾಖೆಯು ಕ್ಯಾಂಟೀನ್‌ಗೆ ಮೂರು ವರ್ಷಗಳಿಂದ ಸುಮಾರು ₹2.5 ಕೋಟಿಯಷ್ಟು ಬಿಲ್ ಪಾವತಿಸದೆ ಬಾಕಿ ಉಳಿಸಿಕೊಂಡಿದೆ. ಮಹಾನಗರ ಪಾಲಿಕೆಯು ಒಂದು ವರ್ಷವಾದರೂ ಬಾಕಿ ₹1.5 ಕೋಟಿ ಬಿಲ್ ಪಾವತಿಸಿಲ್ಲ. ಬಿಲ್ ಪಾವತಿಸದಿದ್ದರೆ ಕ್ಯಾಂಟೀನ್ ನಿರ್ವಹಣೆ ಮಾಡುವುದಾದರೂ ಹೇಗೆ’ ಎಂದು ಗುತ್ತಿಗೆದಾರ ಮಯೂರ ಆದಿತ್ಯ ರೆಸಾರ್ಟ್‌ ಮಾಲೀಕ ಮಯೂರ ಮೋರೆ ‘ಪ್ರಜಾವಾಣಿ’ಯೊಂದಿಗೆ ಅಸಮಾಧಾನ ವ್ಯಕ್ತಪಡಿಸಿದರು.

‘ಕ್ಯಾಂಟೀನ್‌ಗಳಿಗೆ ಮೂರೂ ಹೊತ್ತು ನಿತ್ಯ ತಲಾ 500 ಪ್ಲೇಟ್ ಆಹಾರ ಪೂರೈಕೆ ಮಾಡಬೇಕು. ಇದಕ್ಕಾಗಿ 50ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಾರೆ. ಆಹಾರ ತಯಾರಿಕೆಗೆ ಅಗತ್ಯ ಸಾಮಗ್ರಿ ಸೇರಿದಂತೆ ಹಲವು ವೆಚ್ಚಗಳು ದಿನೇ ದಿನೇ ಹೊರೆಯಾಗುತ್ತಿವೆ’ ಎಂದು ರೆಸಾರ್ಟ್ ಸಿಇಒಹೇಮಲ್ ದೇಸಾಯಿ ಹೇಳಿದರು.

ನಿರ್ವಹಣೆಗೆ ಹೊಸ ಟೆಂಡರ್

ಇಂದಿರಾ ಕ್ಯಾಂಟೀನ್‌ ಗುತ್ತಿಗೆ ಪಡೆದಿರುವ ಮಯೂರ ಆದಿತ್ಯ ರೆಸಾರ್ಟ್ ಅವಧಿ ಮುಗಿದಿರುವುದರಿಂದ, ಕ್ಯಾಂಟೀನ್‌ ನಿರ್ವಹಣೆಗೆ 3 ವರ್ಷಗಳ ಅವಧಿಗೆಹೊಸದಾಗಿ ಟೆಂಡರ್ ಕರೆಯಲಾಗಿದೆ. ಆ ಪ್ರಕ್ರಿಯೆ ಮುಗಿಯುವವರೆಗೆ, ಮಯೂರದವರೇ ನಿರ್ವಹಣೆ ಮಾಡಲು 9 ತಿಂಗಳು ಅನುಮತಿ ನೀಡಲಾಗಿದೆ.

‘ನಾಲ್ಕು ಕ್ಯಾಂಟೀನ್‌ಗಳ ಒಂದು ಪ್ಯಾಕೇಜ್‌ನ ಟೆಂಡರ್ ಅಂತಿಮಗೊಂಡಿದೆ. ಮತ್ತೊಂದು ಪ್ಯಾಕೇಜ್‌ಗೆ ಟೆಂಡರ್ ಕರೆಯಲಾಗಿದೆ. ಮೊದಲ ಪ್ಯಾಕೇಜ್‌ನಲ್ಲಿ ಒಂದು ಊಟಕ್ಕೆ ₹42.5 ನಿಗದಿಪಡಿಸಲಾಗಿದೆ. ದಿನಕ್ಕೆ ಒಂದು ಕ್ಯಾಂಟೀನ್‌ಗೆ 500 ಪ್ಲೇಟ್‌ನಂತೆ ಗುತ್ತಿಗೆದಾರರ ಆಹಾರ ಪೂರೈಕೆ ಮಾಡಲಿದ್ದಾರೆ’ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ (ಡಿಯುಡಿಸಿ) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯಕುಮಾರ ಜೋಶಿ ತಿಳಿಸಿದರು.

ಜಾಗ ಗುರುತಿಸದ ಪಾಲಿಕೆ: ಮೂರು ಕ್ಯಾಂಟೀನ್ ರದ್ದು

ಮಹಾನಗರಕ್ಕೆ ಮಂಜೂರಾಗಿದ್ದ ಒಟ್ಟು 12 ಕ್ಯಾಂಟೀನ್‌ಗಳ ಪೈಕಿ, ಸದ್ಯ 9 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಉಳಿದಂತೆ ಧಾರವಾಡದಲ್ಲಿ ಎರಡು ಮತ್ತು ಹುಬ್ಬಳ್ಳಿಯ ನಿರ್ಮಾಣಗೊಳ್ಳಬೇಕಿದ್ದ ಒಂದು ಕ್ಯಾಂಟೀನ್‌ಗೆ ಪಾಲಿಕೆ ಜಾಗ ಗುರುತಿಸಿ ಕೊಡದಿದ್ದರಿಂದ, 3 ಕ್ಯಾಂಟೀನ್‌ಗಳು ರದ್ದಾಗಿವೆ.

‘ಕ್ಯಾಂಟೀನ್‌ಗಳು ರದ್ದಾಗಿರುವುದು, ಬಡವರು ಮತ್ತು ನಿರ್ಗತಿಕರ ಹಸಿವಿನ ಬಗ್ಗೆ ಪಾಲಿಕೆ ಹೊಂದಿರುವ ಕಾಳಜಿ ಎಂತಹದ್ದು ಎಂಬುದಕ್ಕೆ ಸಾಕ್ಷಿಯಾಗಿದೆ. ಸರ್ಕಾರದ ಸೌಲಭ್ಯವನ್ನು ಬಡವರಿಗೆ ತಲುಪಿಸುವಲ್ಲಿ ಪಾಲಿಕೆ ತೋರಿರುವ ನಿರ್ಲಕ್ಷ್ಯ ಅಕ್ಷಮ್ಯ’ ಎಂದು ಸಮತಾ ಸೇನೆ ರಾಜ್ಯ ಘಟಕದ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ ಆಕ್ರೋಶ ವ್ಯಕ್ತಪಡಿಸಿದರು.

‘ಮಹಾನಗರ ಪಾಲಿಕೆಯಿಂದ ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರಿಗೆ ಬಾಕಿ ಉಳಿಸಿಕೊಂಡಿರುವ ಮೊತ್ತದ ಪೈಕಿ ₹50 ಲಕ್ಷವನ್ನು ಶೀಘ್ರ ಪಾವತಿಸಲಾಗುವುದು’ ಎಂದು ಪಾಲಿಕೆಯ ಹೆಚ್ಚುವರಿ ಆಯುಕ್ತ ಶಂಕರಾನಂದ ಬನಶಂಕರಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.