ADVERTISEMENT

ಮಳೆ: ನೂರಾರು ಎಕರೆ ಬಾಳೆ ಜಲಾವೃತ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 19:33 IST
Last Updated 6 ಸೆಪ್ಟೆಂಬರ್ 2021, 19:33 IST
ಹೊಸಪೇಟೆ ತಾಲ್ಲೂಕಿನ ಕಡ್ಡಿರಾಂಪುರ ಬಳಿ ಬಾಳೆ ತೋಟ ಜಲಾವೃತವಾಗಿದೆ
ಹೊಸಪೇಟೆ ತಾಲ್ಲೂಕಿನ ಕಡ್ಡಿರಾಂಪುರ ಬಳಿ ಬಾಳೆ ತೋಟ ಜಲಾವೃತವಾಗಿದೆ   

ಹುಬ್ಬಳ್ಳಿ: ಉತ್ತರ ಕನ್ನಡ ಜಿಲ್ಲೆ, ವಿಜಯಪುರ, ಹೊಸಪೇಟೆ ನಗರ, ಗ್ರಾಮೀಣ ಭಾಗಗಳಲ್ಲಿ ಮಳೆಯ ಆರ್ಭಟ ಸೋಮವಾರವೂ ಮುಂದುವರೆದಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನಾದ್ಯಂತ ಭಾನುವಾರ ಸುರಿದ ಧಾರಾಕಾರ ಮಳೆಗೆ 18 ಮನೆಗಳು ಭಾಗಶಃ ಕುಸಿದಿವೆ.

ವಿಜಯನಗರ ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ತಾಲ್ಲೂಕಿನ ಹಂಪಿ, ಕಡ್ಡಿರಾಂಪುರದಲ್ಲಿ ನೂರಾರು ಎಕರೆ ಬಾಳೆತೋಟ ಜಲಾವೃತವಾಗಿದೆ. ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಹೋಗಬೇಕಿದ್ದ ಯಾಲಕ್ಕಿ, ಸುಗಂಧಿ ಬಾಳೆ ಹಾನಿಯಾಗಿದ್ದು, ರೈತರು ನಷ್ಟದ ಭೀತಿ ಎದುರಿಸುತ್ತಿದ್ದಾರೆ. ಬಾಳೆ ಹಾನಿಯ ಮೌಲ್ಯದ ಬಗ್ಗೆ ತೋಟಗಾರಿಕೆ ಇಲಾಖೆ ಇನ್ನಷ್ಟೇ ಸಮೀಕ್ಷೆ ನಡೆಸಬೇಕಿದೆ. ಸತತ ಮಳೆಗೆ ಕೆರೆ, ಕಟ್ಟೆಗಳು ತುಂಬಿ ಹರಿಯುತ್ತಿವೆ. ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ.

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ, ಕುಮಟಾ ಭಾಗದಲ್ಲಿ ಮಳೆ ಜೋರಾಗಿತ್ತು. ಶಿರಸಿ, ಸಿದ್ದಾಪುರ, ಮುಂಡಗೋಡ, ಯಲ್ಲಾಪುರ ತಾಲ್ಲೂಕುಗಳಲ್ಲೂ ಮಳೆಯಾಯಿತು.

ADVERTISEMENT

ಗದಗಜಿಲ್ಲೆಯವಿವಿಧೆಡೆ, ಲಕ್ಷ್ಮೇಶ್ವರ ತಾಲ್ಲೂಕಿನ ವಿವಿಧೆಡೆ ಧಾರಾಕಾರಮಳೆಯಾಗಿದೆ.

ವಿಜಯಪುರ ನಗರ, ಬಸವನ ಬಾಗೇವಾಡಿ, ತಾಳಿಕೋಟೆ, ದೇವರ ಹಿಪ್ಪರಗಿ, ತಿಕೋಟಾ, ಬಬಲೇಶ್ವರ, ಹೊರ್ತಿ, ಕೊಲ್ಹಾರ, ಇಂಡಿ ಸೇರಿದಂತೆ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದೆ. ಜಿಲ್ಲೆಯಲ್ಲಿ ಇನ್ನೂ ಎರಡರಿಂದ ಮೂರು ದಿನ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕೋಣಿಯಲ್ಲಿ 10.3 ಸೆಂ.ಮೀ ಮಳೆ ( ಉಡುಪಿ ವರದಿ): ಕರಾವಳಿಯಾದ್ಯಂತ ಸೋಮವಾರ ಬೆಳಿಗ್ಗೆ ಬಿರುಸಿನ ಮಳೆಯಾಗಿದೆ. ಕುಂದಾಪುರ ತಾಲ್ಲೂಕಿನ ಕೋಣಿ
ಯಲ್ಲಿ 10.3 ಸೆಂ.ಮೀ ಮಳೆ
ಯಾಗಿದೆ. ಬ್ರಹ್ಮಾವರ ತಾಲ್ಲೂಕಿನ ಕುಮ್ರಗೋಡು, ವಡ್ಡರ್ಸೆ ಗ್ರಾಮ
ದಲ್ಲಿ ಗಾಳಿ ಮಳೆಗೆ ಮನೆ ಕುಸಿದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.