ADVERTISEMENT

‘ಐ ಲವ್‌ ಹುಬ್ಬಳ್ಳಿ–ಧಾರವಾಡ’ ಪಾದಯಾತ್ರೆ 14ಕ್ಕೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 11:31 IST
Last Updated 11 ಫೆಬ್ರುವರಿ 2021, 11:31 IST

ಹುಬ್ಬಳ್ಳಿ: ಅವಳಿ ನಗರಗಳನ್ನು ವಿಶ್ವದರ್ಜೆಯ ಮಟ್ಟಕ್ಕೆ ಅಭಿವೃದ್ಧಿಪಡಿಸುವ ಸಂಕಲ್ಪ ಮಾಡಿದ್ದು, ಇದರ ಭಾಗವಾಗಿ ಪ್ರೇಮಿಗಳ ದಿನವಾದ ಫೆ. 14ರಂದು ‘ಐ ಲವ್‌ ಹುಬ್ಬಳ್ಳಿ–ಧಾರವಾಡ’ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಅಮ್‌ ಆದ್ಮಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ ನರಗುಂದ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಹುಬ್ಬಳ್ಳಿ–ಧಾರವಾಡದ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಮಾಹಿತಿ ಕಲೆಹಾಕುವಂತೆ ಮಾಜಿ ಕುಲಪತಿ ವೀರಣ್ಣ ಮಾಗನೂರು ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಇದಕ್ಕೂ ಮೊದಲು ಜನರಲ್ಲಿ ಜಾಗೃತಿ ಮೂಡಿಸಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದರು.

‌‘ಅಂದು ಬೆಳಿಗ್ಗೆ 10 ಗಂಟೆಗೆ ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಆರಂಭವಾಗಲಿರುವ ಯಾತ್ರೆ ಲ್ಯಾಮಿಂಗ್ಟನ್‌ ರಸ್ತೆ, ದುರ್ಗದ ಬೈಲ್‌, ಮರಾಠಗಲ್ಲಿ, ಹಳೇ ಹುಬ್ಬಳ್ಳಿ ಮಾರ್ಗವಾಗಿ ಸಿದ್ಧಾರೂಢ ಮಠಕ್ಕೆ ತಲುಪಿದ ಬಳಿಕ ಯಾತ್ರೆ ಪೂರ್ಣಗೊಳ್ಳಲಿದೆ. ಈ ಯಾತ್ರೆಯ ನಡುವೆ ಅಲ್ಲಲ್ಲಿ ಸಭೆಗಳನ್ನು ನಡೆಸಿ ಜನರಿಗೆ ಅಭಿವೃದ್ಧಿಯ ದೂರದೃಷ್ಟಿ ಯೋಜನೆ ಬಿತ್ತುವ ಗುರಿ ಹಾಕಿಕೊಳ್ಳಲಾಗಿದೆ’ ಎಂದು ಹೇಳಿದರು.

ADVERTISEMENT

‘ಮುಂಬರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಲ್ಲ ವಾರ್ಡ್‌ಗಳಿಂದಲೂ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಇದಕ್ಕಾಗಿ ಈಗಾಗಲೇ ಅಭ್ಯರ್ಥಿಗಳ ಹುಡುಕಾಟ ಆರಂಭವಾಗಿದೆ. ಆಸಕ್ತಿ ಇರುವ ಸಾಮಾನ್ಯ ಜನ ಕೂಡ ಸ್ಪರ್ಧಿಸಬಹುದು. ಈ ಸಲದ ಪಾಲಿಕೆ ಚುನಾವಣೆಯಲ್ಲಿ ನಾವು ಖಾತೆ ಆರಂಭಿಸುತ್ತೇವೆ’ ಎಂದು ಭರವಸೆ ವ್ಯಕ್ತಪಡಿಸಿದರು.

ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯ ಶಶಿಕುಮಾರ ಸುಳ್ಳದ ಮಾತನಾಡಿ ‘ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳ ಅಪ್‌ ಮುಖಂಡರಿಗೆ ಪಾದಯಾತ್ರೆಗೆ ಆಹ್ವಾನ ನೀಡಲಾಗಿದೆ. ಸ್ಥಳೀಯ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ’ ಎಂದರು. ಪಾದಯಾತ್ರೆಯಲ್ಲಿ ಪಾಳ್ಗೊಳ್ಳುವ ಸಾರ್ವಜನಿಕರು ಮೊಬೈಲ್‌ ಫೋನ್‌: 9513319638 ಸಂಪರ್ಕಿಸಿ ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.

ಪಕ್ಷದ ಕಾರ್ಯದರ್ಶಿ ಪ್ರತಿಭಾ ದಿವಾಕರ, ಕಾರ್ಯಕಾರಿ ಸಮಿತಿ ಸದಸ್ಯರಾದ ಅನಂತಕುಮಾರ ಭಾರತೀಯ, ಶಿವಕಿರಣ ಅಗಡಿ, ಮುಖಂಡರಾದವ ವಿಜಯಲಕ್ಷ್ಮಿ ಹೊಳ್ಳೆನ್ನವರ್ ಮತ್ತು ವಿದ್ಯಾ ನಾಡಿಗೇರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.