ಹುಬ್ಬಳ್ಳಿ: ’ನನಗೆ ಕೋವಿಡ್ ದೃಢವಾಗುವುದಕ್ಕಿಂತ ಮೊದಲು ನನ್ನ ಸಂಬಂಧಿಯೊಬ್ಬರಿಗೆ ಸೋಂಕು ತಗುಲಿತ್ತು. ಆದ್ದರಿಂದ ಎದುರಿಸುವುದು ಹೇಗೆ ಎನ್ನುವುದರ ಬಗ್ಗೆ ಸ್ವಲ್ಪ ಅರಿವಿತ್ತು. ಆದರೂ, ನಾನು ಆಸ್ಪತ್ರೆಗೆ ಹೋಗುವಾಗ ಸಾಕಷ್ಟು ಅತ್ತಿದ್ದೆ. ಎರಡೇ ತಾಸಿನಲ್ಲಿ ಈ ಸೋಂಕಿಗೆ ಭಯ ಪಡುವ ಅಗತ್ಯವೇ ಇಲ್ಲ ಎನ್ನುವುದು ಮನವರಿಕೆಯಾಯಿತು...’
ಸೋಂಕಿನಿಂದ ಗುಣಮುಖರಾದ ಸದಾಶಿವನಗರದ 14 ವರ್ಷದ ಕಿಶನ್ ಬುಗಡಿ ಹೀಗೆ ಹೇಳುವಾಗ ಅವರ ಧ್ವನಿಯಲ್ಲಿ ಆತ್ಮವಿಶ್ವಾಸವಿತ್ತು. ಎಚ್ಚರಿಕೆಯಿಂದ ನಮ್ಮನ್ನು ನಾವು ನೋಡಿಕೊಂಡರೆ ಸೋಂಕು ಬಂದರೂ ಧೈರ್ಯವಾಗಿ ಎದುರಿಸಬಹುದು ಎನ್ನುವುದು ಗೊತ್ತಾಯಿತು ಎಂದರು.
ಕಿಶನ್ ಅವರ ತಾಯಿ ಹಾಗೂ ತಂದೆಗೂ ಸೋಂಕು ತಗುಲಿತ್ತು. ತಾಯಿ ಮನೆಯಲ್ಲಿಯೇ ಚಿಕಿತ್ಸೆ ಪಡೆದರೆ, ತಂದೆ ಕಿಮ್ಸ್ನಲ್ಲಿದ್ದರು. ಆದ್ದರಿಂದ ಮಗನಿಗೂ ಕಿಮ್ಸ್ನಲ್ಲಿಯೇ ದಾಖಲಿಸುವಂತೆ ಮನವಿ ಮಾಡಿದರೂ, ಆರೋಗ್ಯ ಸಿಬ್ಬಂದಿ ಗೋಕುಲ ರಸ್ತೆಯ ಕೋವಿಡ್ ಆರೈಕೆ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದರು. ಹೊಸ ಜಾಗ, ಕುಟುಂಬದವರಿಂದ ದೂರ ಇರಬೇಕು ಎನ್ನುವ ಭಯವೇ ಹೆಚ್ಚು ಕಾಡುತ್ತಿತ್ತು. ಅಲ್ಲಿಗೆ ಹೋದ ಮೇಲೆ ಧೈರ್ಯ ಬಂತು. ಆರೈಕೆ ಕೇಂದ್ರದಲ್ಲಿ ಆರಾಮವಾಗಿ ಹತ್ತು ದಿನಗಳನ್ನು ಕಳೆದು ಬಂದೆ ಎಂದು ಕಿಶನ್ ಕೋವಿಡ್ ಎದುರಿಸಿದ ಅನುಭವ ಹಂಚಿಕೊಂಡರು.
ಕೋವಿಡ್ ಬಂದವರು ಸಾಯುತ್ತಾರೆ ಎನ್ನುವಂತೆ ಮಾಧ್ಯಮಗಳಲ್ಲಿ ತೋರಿಸಲಾಗುತ್ತಿದೆ. ಇದರಿಂದ ಸಾಕಷ್ಟು ಜನ ಭಯಗೊಂಡಿದ್ದಾರೆ. ಸ್ವಯಂ ಧೈರ್ಯ ತಂದುಕೊಂಡು ಆರೈಕೆ ಕೇಂದ್ರದಲ್ಲಿ ನೀಡುವ ಮಾತ್ರೆ ಮತ್ತು ವಿಟಮಿನ್ ಸಿ ಮಾತ್ರೆಗಳನ್ನು ತೆಗೆದುಕೊಂಡರೆ ಸಾಕು. ನನ್ನಂತೆಯೇ ಅನೇಕ ಮಕ್ಕಳಿಗೆ ಕೋವಿಡ್ ಬಂದಿದೆ. ಬಳಹಷ್ಟು ಜನ ಚೇತರಿಸಿಕೊಂಡಿದ್ದಾರೆ. ಧೈರ್ಯವಿದ್ದರೆ ಎಲ್ಲವನ್ನೂ ಗಟ್ಟಿಯಾಗಿ ಎದುರಿಸಬಹುದು ಎನ್ನುವುದಕ್ಕೆ ನಾನೇ ಸಾಕ್ಷಿ ಎಂದು ಕಿಶನ್ ಆತ್ಮವಿಶ್ವಾಸದಿಂದ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.