ಕುಂದಗೋಳ: ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿರುವುದು ರೈತರಲ್ಲಿ ಒಂದಡೆ ಹರ್ಷ ಮೂಡಿಸಿದರೆ, ಇನ್ನೊಂದೆಡೆ ಕಷ್ಟವನ್ನೂ ಹೆಚ್ಚಿಸಿದೆ. ಬಿತ್ತನೆ ಮಾಡಿದವರಿಗೆ ಒಂದು ಸಮಸ್ಯೆಯಾದರೆ, ಮಾಡದೇ ಇರುವವರಿಗೆ ಮತ್ತೊಂದು ಸಮಸ್ಯೆ.
ಜೂನ್ ಮೊದಲ ವಾರದಲ್ಲಿ ತಾಲ್ಲೂಕಿನಲ್ಲಿ ವಾಡಿಕೆಯಂತೆ 4.2 ಮಿ.ಮೀ. ಮಳೆ ಆಗಬೇಕು. ಆದರೆ ಈ ಬಾರಿ 6.32 ಸೆಂ.ಮೀ. ಮಳೆಯಾಗಿದ ಪರಿಣಾಮ, ತೇವಾಂಶ ಹೆಚ್ಚಾಗಿದೆ. ಮಳೆಯಾಶ್ರಿತ ಒಣಬೇಸಾಯದ ಭೂಮಿ ಈಗ ಮಲೆನಾಡಿನ ಕೆಸರು ಗದ್ದೆಗಳಂತಾಗಿವೆ. ಇದರಿಂದಾಗಿ ಬಿತ್ತನೆ ಮಾಡಿದ ರೈತರಿಗೆ ಚಿಂತೆ ಎದುರಾಗಿದೆ.
ಈ ಮಳೆಗೂ ಮುನ್ನ ಬಿತ್ತನೆ ಮಾಡಿದ್ದ ಜಮೀನುಗಳಲ್ಲಿ ನೀರು ಹರಿದಿದ್ದರಿಂದ ಬೀಜ ಮೊಳಕೆಯೊಡೆಯದೆ, ಸಮಸ್ಯೆ ತಂದೊಡ್ಡಿದೆ. ಅರ್ದಂಬರ್ಧ ಮೊಳಕೆ ಒಡೆದ ಹೊಲಗಳಲ್ಲಿ ರೈತರು ಮರುಬಿತ್ತನೆ ಮಾಡಲೂ ಆಗುತ್ತಿಲ್ಲ.
ಇನ್ನೊಂದಡೆ, ಬಿತ್ತನೆ ಮಾಡದೆ ಇರುವ ರೈತರು, ಭೂಮಿಯಲ್ಲಿ ತೇವಾಂಶ ಹೆಚ್ಚಾದ ಕಾರಣ ಭೂಮಿ ಒಂದು ಹಂತಕ್ಕೆ ಒಣಗುವ ವರೆಗೂ ಬಿತ್ತನೆ ಮಾಡುವುದು ಸಾಧ್ಯವಿಲ್ಲ. 10–12 ದಿನದಲ್ಲಿ ಬಿತ್ತನೆ ಮಾಡಲು ಸಾಧ್ಯವಾದರೆ ತೊಂದರೆ ಇಲ್ಲ. ಆದರೆ ತಿಂಗಳು ಗಟ್ಟಲೆ ತಡವಾದರೆ, ಇಳುವರಿ ಕಡೆಮೆಯಾಗುವ ಆತಂಕ ಇದೆ.
‘ಮರು ಬಿತ್ತನೆಗೆ ಮುಂದಾದರೆ ಬೀಜ, ಗೊಬ್ಬರಕ್ಕೆ ಮತ್ತೆ ಹಣ ಖರ್ಚು ಮಾಡಬೇಕು. ಹಣ ಖರ್ಚು ಮಾಡಿದರೂ ಬೀಜ, ಗೊಬ್ಬರ ಸರಿಯಾದ ಸಮಯಕ್ಕೆ ಸಿಗಬಹುದೇ ಎಂಬ ಗೊಂದಲ ಎದುರಾಗಿದೆ. ಸರ್ಕಾರಗಳು ರೈತರ ನೆರವಿಗೆ ಬರಬೇಕು’ ಎಂದು ರೈತ ಬಸವರಾಜ ಯೋಗಪ್ಪನವರ ಒತ್ತಾಯಿಸಿದ್ದಾರೆ.
ಅಂಕಿ–ಅಂಶ 52,000 ಹೆಕ್ಟೇರ್– ತಾಲ್ಲೂಕಿನ ಒಟ್ಟು ಕೃಷಿ ಭೂಮಿ 32,915 ಹೆಕ್ಟೇರ್– ಮಳೆಗೂ ಮುನ್ನ ಬಿತ್ತನೆಯಾದ ಪ್ರದೇಶ *** ಪಟ್ಟಿ ತಾಲ್ಲೂಕಿನಲ್ಲಿ ಈಗಾಗಲೇ ಬಿತ್ತನೆ ಆದ ಪ್ರದೇಶ ಬೆಳೆ;ವ್ಯಾಪ್ತಿ (ಹೆಕ್ಟೇರ್)ಗೋವಿನಜೋಳ;10,000ಹೆಸರು;9,300ಉದ್ದು;2,700ಶೇಂಗಾ;1,900ಸೋಯಾಬೀನ್;6,000ಹತ್ತಿ;3,000
ತೇವಾಂಶ ನೋಡಿ ಬಿತ್ತನೆ ಮಾಡಿ ‘ಈಗಾಗಲೇ ಗೋವಿನಜೋಳ ಬಿತ್ತಿದ ಹೊಲಗಳಲ್ಲಿ ನೀರು ನಿಂತಿದ್ದರೆ ರೈತರು ಊರಕಾಳು ಹಾಕಿಕೊಳ್ಳಬಹುದು. ಹೆಸರು ಬಿತ್ತಿದರೆ ರೋಗ ಬಾಧೆ ಉಂಟಾಗಬಹುದು. ರೈತರು ತೇವಾಂಶ ನೊಡಿಕೊಂಡು ಮರು ಬಿತ್ತನೆ ಮಾಡಿದರೆ ತೊಂದರೆ ಇಲ್ಲ. ನಾವು ಈಗಾಗಲೇ ಹೆಚ್ಚುವರಿ ಬೀಜಕ್ಕಾಗಿ ಬೇಡಿಕೆ ಕಳುವಿಸಿದ್ದೆವೆ. ಬೀಜ ಕೊರತೆ ಉಂಟಾಗುವುದಿಲ್ಲ. ಜೂನ್ 30ರ ವರೆಗೂ ಬಿತ್ತನೆಗೆ ಅವಕಾಶವಿದೆ’ ಎಂದು ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕಿ ಭಾರತಿ ಮೆಣಸಿನಕಾಯಿ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.