ಹುಬ್ಬಳ್ಳಿ: ಕಟ್ಟಡ ಕಾರ್ಮಿಕರ ವಿವಿಧ ಸೌಲಭ್ಯಗಳ ಧನಸಹಾಯದ ಅರ್ಜಿಗಳಿಗೆ ಮಂಜೂರಾತಿ ನೀಡಬೇಕು ಎಂದು ಎರಡ್ಮೂರು ವರ್ಷಗಳಿಂದ ಅಲೆದಾಡುತ್ತಿದ್ದರೂ, ಪ್ರಯೋಜನವಾಗಿಲ್ಲ. ಆದ್ದರಿಂದ ಕೂಡಲೇ ಈ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಧಾರವಾಡ ವಿಭಾಗದ ಕಟ್ಟಡ ಕಾರ್ಮಿಕ ಹೋರಾಟ ಸಮಿತಿ ಪದಾಧಿಕಾರಿಗಳು ಗುರುವಾರ ನಗರದಲ್ಲಿ ಪ್ರತಿಭಟನೆ ಮಾಡಿದರು.
ಕಾರ್ಮಿಕ ಕಚೇರಿ ಎದುರು ಪ್ರತಿಭಟನೆ ಮಾಡಿದ ಕಾರ್ಮಿಕರು ‘ವಿವಿಧ ಸೌಲಭ್ಯಗಳ ಪರಿಹಾರವನ್ನು ಕಾಲಮಿತಿಯಲ್ಲಿ ಮಂಜೂರು ಮಾಡಬೇಕು. ಕಲ್ಯಾಣಮಂಡಳಿಯಿಂದ ಕಾಲಕಾಲಕ್ಕೆ ಬರುವ ಸುತ್ತೋಲೆಗಳನ್ನು ಸಂಘಟನೆಗಳಿಗೆ ತಿಳಿಸಬೇಕು. ಕಲ್ಯಾಣ ಮಂಡಳಿಯ ಸೌಲಭ್ಯಗಳು ಎಲ್ಲ ಕಾರ್ಮಿಕರಿಗೆ ಸಿಗುವಂತಾಗಬೇಕು. ಹುಬ್ಬಳ್ಳಿ ಕಾರ್ಮಿಕ ಕಚೇರಿಯಲ್ಲಿ ಒಟ್ಟು ನಾಲ್ಕು ವೃತ್ತಗಳು ಇದ್ದು, ಎಲ್ಲ ವೃತ್ತಗಳಿಗೂ ಒಂದೇ ನಿಯಮಗಳನ್ನು ಪಾಲಿಸಲು ಆದೇಶ ಮಾಡಬೇಕು’ ಎಂದು ಕಾರ್ಮಿಕರು ಆಗ್ರಹಿಸಿದರು.
ಸಮಿತಿಯ ಅಧ್ಯಕ್ಷ ದುರಗಪ್ಪ ಚಿಕ್ಕತುಂಬಳ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಬಂಡಿವಡ್ಡರ, ಪದಾಧಿಕಾರಿಗಳಾದ ರಫೀಕ್ ಬಡೇಮಿಯಾ, ಮಕ್ಬುಲ್ಸಾಬ್ ಶಿರಹಟ್ಟಿ, ವೆಂಕಟಸ್ವಾಮಿ, ಅಬ್ದುಲ್ ಶೇಖ್, ವಾಸು ಲಮಾಣಿ, ರಸೂಲ್ ನದಾಫ್, ಪರಶುರಾಮ ಹೊನಕೇರಿ, ಎಸ್. ಕುಮಾರ, ಮುಸ್ತಫ್ ನದಾಫ್, ನಿಸಾರ ಅಹ್ಮದ್ ಕೊಪ್ಪಳ, ಸುಶೀಲಾ ವಡ್ಡರ, ಸಮೀರ ಮುಲ್ಲಾ ಮತ್ತು ಮೆಹಬೂಬಸಾಬ್ ಸುಂಕದ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.