ADVERTISEMENT

ಸ್ಪರ್ಧೆಗೆ ತಕ್ಕಂತೆ ಬದಲಾಗಿ: ಜೋಶಿ

ಎಪಿಎಂಸಿ ವ್ಯಾಪಾರಸ್ಥರ ಸಂಘದ ನೂತನ ಆಡಳಿತ ಕಚೇರಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2019, 14:22 IST
Last Updated 7 ಸೆಪ್ಟೆಂಬರ್ 2019, 14:22 IST
ಹುಬ್ಬಳ್ಳಿ ಎಪಿಎಂಸಿಯ ವ್ಯಾಪಾರಸ್ಥರ ಸಂಘದ ನೂತನ ಆಡಳಿತ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿದರು
ಹುಬ್ಬಳ್ಳಿ ಎಪಿಎಂಸಿಯ ವ್ಯಾಪಾರಸ್ಥರ ಸಂಘದ ನೂತನ ಆಡಳಿತ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿದರು   

ಹುಬ್ಬಳ್ಳಿ: ತಂತ್ರಜ್ಞಾನದ ಪ್ರಭಾವದಿಂದ ಜಗತ್ತು ಬಹಳ ಚಿಕ್ಕದಾಗಿದೆ. ಎಲ್ಲವನ್ನೂ ಅಂಗೈಯಲ್ಲಿಯೇ ನೋಡುವ ಕಾಲ ಬಂದಿದೆ. ಆದ್ದರಿಂದ ವ್ಯಾಪಾರಸ್ಥರು ಕೂಡ ತಂತ್ರಜ್ಞಾನ ಬಳಸಿಕೊಂಡು ಸ್ಪರ್ಧೆಗೆ ತಕ್ಕಂತೆ ಬದಲಾಗಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಅಮರಗೋಳದಲ್ಲಿರುವ ಎಪಿಎಂಸಿಯ ವ್ಯಾಪಾರಸ್ಥರ ಸಂಘದ ನೂತನ ಆಡಳಿತ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ‘ಪರಂಪರಾಗತವಾಗಿ ನಡೆದುಕೊಂಡು ಬಂದ ವ್ಯಾಪಾರದ ಸ್ವರೂಪ ಬದಲಾಗಿದೆ. ಆದ್ದರಿಂದ ನಿಮ್ಮ ಉತ್ಪನ್ನಗಳನ್ನು ಚೆನ್ನಾಗಿ ಪ್ಯಾಕಿಂಗ್‌ ಮಾಡಿ, ಗ್ರಾಹಕರನ್ನು ಆಕರ್ಷಿಸುವಂತೆ ಮಾಡಬೇಕು’ ಎಂದರು.

ಸಚಿವ ಜಗದೀಶ ಶೆಟ್ಟರ್‌ ‘ಎಲ್ಲ ರಂಗಗಳಲ್ಲಿ ವೃತ್ತಿಪರತೆ ಬರುತ್ತಿದೆ. ಇದರಿಂದ ಸ್ಪರ್ಧೆಯೂ ಅನಿವಾರ್ಯವಾಗಿದೆ. ವ್ಯಾಪಾರಸ್ಥರು ತಮ್ಮ ಲಾಭದ ಲೆಕ್ಕಾಚಾರದ ಜೊತೆಗೆ ರೈತರ ಹಿತ ಕಾಯುವ ಬಗ್ಗೆಯೂ ಯೋಚಿಸಬೇಕು’ ಎಂದರು.

ADVERTISEMENT

‘ಅಕ್ಕಿಹೊಂಡ ಸೇರಿದಂತೆ ವಿವಿಧೆಡೆ ಇನ್ನೂ ಕೆಲ ವ್ಯಾಪಾರಸ್ಥರು ಇದ್ದಾರೆ. ಅವರೆಲ್ಲ ಎಪಿಎಂಸಿ ಆವರಣಕ್ಕೆ ಸ್ಥಳಾಂತರಗೊಂಡರೆ ಇನ್ನಷ್ಟು ಹೆಚ್ಚಿನ ಸೌಲಭ್ಯ ಕಲ್ಪಿಸಲಾಗುವುದು‘ ಎಂದರು.

ನೆರೆ ಸಂತ್ರಸ್ತರಿಗಾಗಿ ಸಂಘದ ವತಿಯಿಂದ ₹ 2 ಲಕ್ಷದ 11 ಸಾವಿರ ಮೊತ್ತದ ಚೆಕ್‌ ಅನ್ನು ವ್ಯಾಪಾರಸ್ಥರು ಶೆಟ್ಟರ್ ಅವರಿಗೆ ಹಸ್ತಾಂತರಿಸಿದರು.

ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಗಂಗನಗೌಡ ಪಾಟೀಲ, ಜೆಡಿಎಸ್‌ ಮುಖಂಡ ರಾಜಣ್ಣ ಕೊರವಿ, ಕಾಂಗ್ರೆಸ್‌ ಮುಖಂಡ ಸದಾನಂದ ಡಂಗನವರ, ಪಾಲಿಕೆ ಮಾಜಿ ಸದಸ್ಯ ಮಲ್ಲಿಕಾರ್ಜುನ ಹೊರಕೇರಿ, ಹುಬ್ಬಳ್ಳಿ ಎಪಿಎಂಸಿ ಕಾರ್ಯದರ್ಶಿ ಎಂ. ಮಂಜುನಾಥ ಇದ್ದರು. ಗಾಯಕ ರಾಮು ಮೂಲಗಿ ಜಾನಪದ ಹಾಡುಗಳ ರಸದೌತಣ ಉಣಬಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.