ಹುಬ್ಬಳ್ಳಿ: ಪ್ರತಿಷ್ಠಿತ ಕಂಪನಿಯೊಂದರ ಪ್ರಾಂಚೈಸಿ ಎಂದು ನಗರದ ನಿವಾಸಿ ಡಾ.ಶೈಲಾ ಅವರಿಗೆ ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ, ಅವರಿಂದ ₹50 ಲಕ್ಷ ಪಡೆದು ವಂಚಿಸಿದ್ದಾನೆ.
ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಡಾ.ಶೈಲಾ ಅವರಿಗೆ ನಿವೃತ್ತಿ ನಂತರ ₹38 ಲಕ್ಷ ದೊರಕಿತ್ತು. ಅಂಗವಿಕಲ ಮಗನಿಗೆ ಹಾಗೂ ಇಳಿವಯಸ್ಸಲ್ಲಿ ತಮಗೆ ಸಹಾಯವಾಗಬಹುದೆಂದು ಪರಿಚಯಯದ ಮಣಿಕಂಠನ್ ಕುಟ್ಟುತ್ ಅವರು ಪ್ರಾಂಚೈಸಿ ಪಡೆದಿದ್ದ ಎನ್ನಲಾದ ಕಂಪನಿಯಲ್ಲಿ ಹೂಡಿಕೆ ಮಾಡಲು ₹50 ಲಕ್ಷ ನೀಡಿದ್ದರು. ಹಣ ಹೂಡಿಕೆ ಮಾಡಿರುವ ಬಗ್ಗೆ ಮಣಿಕಂಠನ್ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ನೀಡಿದ್ದನು. ಕಾಗದ ಪತ್ರಗಳನ್ನು ಪರಿಶೀಲಿಸಿದಾಗ ವಂಚನೆಗೊಳಗಾಗಿದ್ದು ತಿಳಿದು ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
₹4 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಕೇಶ್ವಾಪುರ ಶಾಂತಿನಗರದ ಹನುಮಂತಪ್ಪ ಬುಲಗಣ್ಣವರ ಅವರ ಮನೆ ಬಾಗಿಲು ಮುರಿದು, ₹4.07 ಲಕ್ಷ ಮೌಲ್ಯದ ಬೆಳ್ಳಿ ಮತ್ತು ಚಿನ್ನಾಭರಣ ಕಳವು ಮಾಡಲಾಗಿದೆ. 135 ಗ್ರಾಂ ಚಿನ್ನಾಭರಣ ಹಾಗೂ 55 ಗ್ರಾಂ ಬೆಳ್ಳಿ ಸಾಮಗ್ರಿ ಕಳವು ಆಗಿದೆ ಎಂದು ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
₹82 ಸಾವಿರ ವಂಚನೆ: ಸಾಲ ಮಂಜೂರು ಆಗಿದೆ ಎಂದು ಗೋಪನಕೊಪ್ಪದ ಪ್ರವೀಣ ಕರೊಗಲ್ಲರ ಅವರಿಗೆ ಕರೆ ಮಾಡಿದ ವಂಚಕ, ಅವರಿಂದ ಬ್ಯಾಂಕ್ ಮಾಹಿತಿ ಪಡೆದು ₹82 ಸಾವಿರ ಆನ್ಲೈನ್ನಲ್ಲಿ ವರ್ಗಾಯಿಸಿಕೊಂಡಿದ್ದಾನೆ.
ಧನಿ ಲೋನ್ ಆ್ಯಪ್ನಲ್ಲಿ ಶೇ 2.5 ಬಡ್ಡಿ ದರದಲ್ಲಿ ₹3 ಲಕ್ಷ ಸಾಲ ಮಂಜೂರಾಗಿದೆ ಎಂದು ಕರೆ ಮಾಡಿ ನಂಬಿಸಿದ್ದಾರೆ. ಬಳಿಕ ವಿಮೆ, ಜಿಎಸ್ಟಿ ಹಾಗೂ ಇತ್ಯಾದಿ ಶುಲ್ಕ ಎಂದು ಹಣ ವರ್ಗಾಯಿಸಿಕೊಂಡಿದ್ದಾನೆ. ಹುಬ್ಬಳ್ಳಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.