ಹುಬ್ಬಳ್ಳಿ: ಕರ್ನಾಟಕ ಕುರಿ ಅಭಿವೃದ್ಧಿ ನಿಗಮದಿಂದ ಎಸ್ಸಿ, ಎಸ್ಟಿ ಫಲಾನುಭವಿಗಳಿಗೆ ನೀಡಲಾಗುವ ಮಾಂಸ ಮತ್ತು ಮಾಂಸದಿಂದ ತಯಾರಿಸಿದ ವಿವಿಧ ಖಾದ್ಯ ಪದಾರ್ಥಗಳ ಸಂಚಾರಿ ಮಾರಾಟ ಮಳಿಗೆಯನ್ನು ಸಚಿವ ಜಗದೀಶ ಶೆಟ್ಟರ್ ಫಲಾನುಭವಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಸಸ್ಯಾಹಾರಿಗಳು ಇಂದು ಹೆಚ್ಚಿನ ಪ್ರಮಾಣದಲ್ಲಿ ಮಾಂಸಾಹಾರಿಗಳಾಗಿ ಬದಲಾಗುತ್ತಿದ್ದಾರೆ. ಪರಿಣಾಮ ಮಾಂಸಾಹಾರಕ್ಕೆ ಬೇಡಿಕೆ ಮತ್ತು ದರ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟರು.
ಎಸ್ಸಿ, ಎಸ್ಟಿ ಫಲಾನುಭವಿಗಳು ಸರ್ಕಾರದಿಂದ ನೀಡುವ ಸವಲತ್ತುಗಳನ್ನು ಬಳಸಿಕೊಂಡು ಸ್ವಯಂ ಉದ್ಯೋಗ ಮಾಡುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಕುರಿ ಅಭಿವೃದ್ಧಿ ನಿಗಮದ ಧಾರವಾಡ ಜಿಲ್ಲಾ ಸಹಾಯಕ ನಿರ್ದೇಶಕ ಡಾ.ಸುನೀಲ್ ಕುಮಾರ್ ಶೀಲವಂತಮಠ ಮಾತನಾಡಿ, ಮಾಂಸ ಮತ್ತು ಮಾಂಸೋತ್ಪನ್ನಗಳ ಮಾರಾಟಕ್ಕೆ ಉತ್ತೇಜನ ನೀಡುವ ಸಲುವಾಗಿ ಪ್ರತಿ ಜಿಲ್ಲೆಗೆ ಇಬ್ಬರು ಎಸ್ಸಿ, ಎಸ್ಟಿ ಫಲಾನುಭವಿಗಳಿಗೆ ₹11 ಲಕ್ಷ ಮೊತ್ತದಲ್ಲಿ ಸಂಚಾರಿ ಮಾಂಸ ಮಾರಾಟ ಮಳಿಗೆಗಳನ್ನು ಪ್ರಾಯೋಗಿಕವಾಗಿ ನೀಡಲಾಗುತ್ತಿದೆ. ಇದರಲ್ಲಿ ₹ 8.25 ಲಕ್ಷ ಸಹಾಯಧನ ಮತ್ತು ₹2.75 ಲಕ್ಷ ಬ್ಯಾಂಕ್ ಸಾಲ ಸೌಲಭ್ಯವಿದೆ ಎಂದು ಹೇಳಿದರು.
ಆಯ್ಕೆಯಾದ ಫಲಾನುಭವಿಗಳಿಗೆ ಹೈದರಾಬಾದ್ನಲ್ಲಿರುವ ಅಖಿಲ ಭಾರತ ಮಾಂಸ ಸಂಶೋಧನಾ ಸಂಸ್ಥೆಯಲ್ಲಿ ಮಾಂಸ ಖಾದ್ಯ ತಯಾರಿಕೆ ತರಬೇತಿ ನೀಡಲಾಗಿದೆ. ಫಲಾನುಭವಿಗಳು ಪಾಲಿಕೆ ನಿಗದಿ ಪಡಿಸಿದ ಸ್ಥಳಗಳಲ್ಲಿ ವಾಹನವನ್ನು ನಿಲ್ಲಿಸಿ, ವ್ಯಾಪಾರ ಮಾಡಬಹುದು ಎಂದರು.
ಜಿಲ್ಲಾ ಪಶುಪಾಲನ ಮತ್ತು ಪಶುವೈದ್ಯ ಇಲಾಖೆ ಉಪನಿರ್ದೇಶಕ ಡಾ.ಪರಮೇಶ್ವರ ನಾಯಕ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.