ADVERTISEMENT

ಬನಶಂಕರಿ ರಥೋತ್ಸವದಲ್ಲಿ ಜನ ಜಾತ್ರೆ

ಹೂಗಳಿಂದ ಅಲಂಕೃತಗೊಂಡಿದ್ದ ದೇವಿ, ಭಕ್ತಾದಿಗಳ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2020, 15:50 IST
Last Updated 9 ಫೆಬ್ರುವರಿ 2020, 15:50 IST
ಹುಬ್ಬಳ್ಳಿಯ ಬನಶಂಕರಿ ಬಡಾವಣೆಯಲ್ಲಿ ಭಾನುವಾರ ನಡೆದ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರು
ಹುಬ್ಬಳ್ಳಿಯ ಬನಶಂಕರಿ ಬಡಾವಣೆಯಲ್ಲಿ ಭಾನುವಾರ ನಡೆದ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರು   

ಹುಬ್ಬಳ್ಳಿ: ವಿದ್ಯಾನಗರದ ಬನಶಂಕರಿ ಬಡಾವಣೆಯಲ್ಲಿರುವ ಬನಶಂಕರಿ ದೇವಸ್ಥಾನದಲ್ಲಿ ಭಾನುವಾರ ಸಂಜೆ ಸಂಭ್ರಮದಿಂದ ರಥೋತ್ಸವ ನಡೆಯಿತು. ಸಾವಿರಾರು ಜನ ಈ ಸಡಗರದಲ್ಲಿ ಭಾಗಿಯಾದರು.

ಈ ದೇವಸ್ಥಾನದಲ್ಲಿ ಎರಡು ದಿನಗಳಿಂದ ನಿರಂತರವಾಗಿ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದವು. ಭಾನುವಾರ ಭಾರತ ಹುಣ್ಣಿಮೆಯಾದ ಕಾರಣ ಸಾಮೂಹಿಕ ಸತ್ಯನಾರಾಯಣ ಪೂಜೆ, ನವಗ್ರಹ ಸಹಿತ ಚಂಡಿ ಹೋಮ, ಕುಂಕುಮಾರ್ಚನೆ, ಪೂರ್ಣಾಹುತಿ, ದೇವಿಯ ಬೆಳ್ಳಿ ಪಲ್ಲಕ್ಕಿ ಮೆರವಣಿಗೆ ನಡೆದವು.

ಬೆಳಿಗ್ಗೆನಿಂದಲೇ ತಂಡೋಪತಂಡವಾಗಿ ದೇವಸ್ಥಾನಕ್ಕೆ ಬಂದ ಭಕ್ತರು ಹೂವಿನಿಂದ ಸುಂದರವಾಗಿ ಅಲಂಕೃತಗೊಂಡಿದ್ದ ದೇವಿಯ ದರ್ಶನ ಪಡೆದರು. ತರಹೇವಾರು ಹೂವು, ಲಿಂಬೆಹಣ್ಣಿನಿಂದ ಅಲಂಕರಿಸಲಾಗಿದ್ದ ತೇರಿನಲ್ಲಿ ಬನಶಂಕರಿ ದೇವಿಯನ್ನು ಕೂಡಿಸಿದ ಬಳಿಕ ರಥೋತ್ಸವ ಜರುಗಿತು. ದೇವಸ್ಥಾನದಿಂದ ಪಾದಗಟ್ಟೆಯ ತನಕ ಮೊದಲು ಪುರುಷರು ತೇರು ಎಳೆದರೆ, ಬರುವಾಗ ಮಹಿಳೆಯರು ತೇರು ಎಳೆದು ಸಂಭ್ರಮಿಸಿದರು. ಭಕ್ತರು ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಅರ್ಪಿಸಿದರು.

ADVERTISEMENT

ದೇವಸ್ಥಾನವನ್ನು ಬಣ್ಣಬಣ್ಣದ ದೀಪಗಳಿಂದ ಅಲಂಕರಿಸಿದ್ದರಿಂದ ದೇವಾಲಯ, ಪ್ರಾಂಗಣ ಮತ್ತು ಸುತ್ತಮುತ್ತಲಿನ ವಾತಾವರಣದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ವಿವಿಧ ತಿನಿಸುಗಳ ಅಂಗಡಿಗಳು ಮತ್ತು ಆಟಿಕೆಗಳು ಬಂದಿದ್ದರಿಂದ ಮಕ್ಕಳ ಹುಮ್ಮಸ್ಸು ಜೋರಾಗಿತ್ತು. ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ಶಾಟ್‌ ಸರ್ಕಿಟ್‌

ರಥೋತ್ಸವ ವೇಳೆ ದೇವಸ್ಥಾನದ ಕಾಂಪೌಂಡ್‌ಗೆ ಸಮೀಪದಲ್ಲಿ ಹಾಕಿರುವ ವಿದ್ಯುತ್‌ ಪರಿವರ್ತಕದಲ್ಲಿ ಶಾಟ್‌ ಸರ್ಕಿಟ್‌ ಕಂಡುಬಂದು ಬೆಂಕಿ ಹೊತ್ತಿಕೊಂಡ ಕಾರಣ ಭಕ್ತರಲ್ಲಿ ಕೆಲ ಹೊತ್ತು ಆತಂಕ ಮನೆ ಮಾಡಿತ್ತು. ಕೆಲ ಹೊತ್ತಿನಲ್ಲಿಯೇ ಹೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಬಂದು ವಿದ್ಯುತ್‌ ಸಂಪರ್ಕ ಕಲ್ಪಿಸಿದರು.

ಸೋಮವಾರ ಸಂಜೆ ಐದು ಗಂಟೆಗೆ ಕಡುಬಿನ ಕಾಳಗ ನಡೆಯಲಿದ್ದು, ಇದರ ಮೂಲಕ ಜಾತ್ರೆಯ ಸಡಗರಕ್ಕೆ ತೆರೆ ಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.