ನವಲಗುಂದ: ಮಕರ ಸಂಕ್ರಾಂತಿ ನಿಮಿತ್ತವಾಗಿ ತಾಲ್ಲೂಕಿನ ಶಿರೂರ ಗ್ರಾಮದಲ್ಲಿ ಮಂಗಳವಾರ ಬಾಲಲೀಲ ಸಂಗಮೇಶ್ವರ ತೆಪ್ಪೋತ್ಸವವು ಅಪಾರ ಸಂಖ್ಯೆಯ ಭಕ್ತರ ಹರ್ಷೊದ್ಘಾರಗಳ ಮಧ್ಯ ಸಂಭ್ರಮದಿಂದ ಜರುಗಿತು.
ತೆಪ್ಪೋತ್ಸವದ ಅಂಗವಾಗಿ ಸಂಗಮೇಶ್ವರ ದೇವನಿಗೆ ವಿಶೇಷ ಅಲಂಕಾರ ಹಾಗೂ ಪೂಜೆ ಮಾಡಲಾಗಿತ್ತು. ಬೆಳಿಗ್ಗೆ ಮಲಪ್ರಭಾ ಬಲದಂಡೆಯ ಕಾಲುವೆಯಲ್ಲಿ ಪವಿತ್ರ ಸ್ನಾನ ಮಾಡಿದರು.
ಸಂಜೆ ನಡೆದ ಬಾಲಲೀಲಾ ಸಂಗಮೇಶ್ವರ ತೆಪೋತ್ಸವದಲ್ಲಿ ಪಾಲ್ಗೊಂಡರು. ತಾವು ತಂದಿದ್ದ ಜೋಳದ ರೊಟ್ಟಿ, ಪಲ್ಯ ಸೇರಿದಂತೆ ವಿವಿಧ ಭೋಜನಗಳನ್ನು ಸವಿದರು.
ಗ್ರಾಮದ ಸುತ್ತಮುತ್ತಲಿನ ಆಯಟ್ಟಿ, ಗುಮ್ಮಗೋಳ, ಬ್ಯಾಲ್ಯಾಳ, ಮೊರಬ, ಗರಗ, ಲೋಕೂರು, ಬೆಟಗೇರಿ, ಹಾರೋಬೇಳವಡಿ, ಇನಾಮಹೊಂಗಲ್, ಅಮ್ಮಿನಭಾವಿ ಸೇರಿದಂತೆ ವಿವಿಧ ಊರುಗಳಿಂದ ಆಗಮಿಸಿದ್ದ ಜನರು ತೆಪ್ಪೋತ್ಸವದಲ್ಲಿ ಭಾಗವಹಿಸಿ, ರಾತ್ರಿ ನಡೆದ ನಾಟಕವನ್ನು ವೀಕ್ಷಿಸಿದರು.
ಜಾತ್ರಾಮಹೋತ್ಸವ ಅಂಗವಾಗಿ ಸೋಮವಾರ ಶಾಲಾ ಮಕ್ಕಳಿಂದ ರಂಗೋಲಿ ಸ್ಪರ್ಧೆ ನಡೆಯಿತು. ಬುಧವಾರ ಟಗರಿನ ಕಾಳಗ, ಕಲ್ಲು ಎತ್ತುವ ಸ್ಪರ್ಧೆಗಳು ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.