ಹುಬ್ಬಳ್ಳಿ: ‘ಪ್ರಧಾನಮಂತ್ರಿ ಕೌಶಲ ಕೇಂದ್ರ ಧಾರವಾಡ ಜಿಲ್ಲಾ ಶಾಖೆಯು ಯುವಕ ಮತ್ತು ಯುವತಿಯರಿಗೆ ಕೈಗಾರಿಕೆ ಮತ್ತು ಸ್ವಯಂ ಉದ್ಯೋಗಕ್ಕೆ ಸಂಬಂಧಿಸಿದ ವೃತ್ತಿಪರ ಕೋರ್ಸ್ಗಳ ಉಚಿತ ತರಬೇತಿ ಹಾಗೂ ಉದ್ಯೋಗಾವಕಾಶ ಕಲ್ಪಿಸುತ್ತಿದೆ.
ಪ್ರಸಕ್ತ ಸಾಲಿನಲ್ಲಿ ತರಬೇತಿಗೆ ಆಸಕ್ತರಿಂದ ನೋಂದಣಿ ಮಾಡಿಕೊಳ್ಳಲಾಗುತ್ತಿದೆ’ ಎಂದು ಕೇಂದ್ರದ ಜಿಲ್ಲಾ ವ್ಯವಸ್ಥಾಪಕ ಮಾರುತಿ ಪದ್ಮನಾಭ ಶೆಟ್ಟಿ ಹೇಳಿದರು.
‘ಕನಿಷ್ಠ ಎಂಟನೇ ತರಗತಿಯಿಂದ ಪದವಿವರೆಗೆ ಓದಿರುವವರು ಹಾಗೂ ಐಟಿಐ ಮಾಡಿಕೊಂಡಿರುವ 18ರಿಂದ 35 ವರ್ಷದೊಳಗಿನವರು ತರಬೇತಿಗೆ ಅರ್ಹರಾಗಿರುತ್ತಾರೆ. 3ರಿಂದ 4 ತಿಂಗಳ ಅವಧಿಯ ಕೋರ್ಸ್ಗಳಾದ ಫಿಟ್ಟರ್ ಎಲೆಕ್ಟ್ರಾನಿಕ್ ಅಸೆಂಬ್ಲಿ, ಮೊಬೈಲ್ ಮತ್ತು ಗೃಹೋಪಯೋಗಿ ವಸ್ತುಗಳ ರಿಪೇರಿ, ಮಾಹಿತಿ ತಂತ್ರಜ್ಞಾನದ ಹೆಲ್ಪ್ ಡೆಸ್ಕ್, ಸಿಆರ್ಎಂ ಡೊಮೆಸ್ಟಿಕ್ ನಾನ್ ವಾಯ್ಸ್ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳ ಬಗ್ಗೆ ತರಬೇತಿ ನೀಡಲಾಗುತ್ತದೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಉದ್ಯೋಗ ನೇಮಕಾತಿ ವಿಭಾಗದ ಅಧಿಕಾರಿ ನಿಶಿಕಾಂತ್ ಪವಾರ ಮಾತನಾಡಿ, ‘ತರಬೇತಿ ಬಳಿಕ ಕ್ಯಾಂಪಸ್ ಆಯ್ಕೆ ನಡೆಯಲಿದೆ. ರಿಲಾಯನ್ಸ್, ಜೊಮಾಟೊ, ಸ್ವಿಗ್ಗಿ, ಯುರೇಕಾ ಫೋರ್ಬ್ಸ್, ಪೈ ಇಂಟರ್ನ್ಯಾಷನಲ್ ಸೇರಿದಂತೆ ಸ್ಥಳೀಯ ಹಾಗೂ ವಿವಿಧ ಭಾಗದ ಕಂಪನಿಗಳು ಪಾಲ್ಗೊಳ್ಳಲಿವೆ. ಸದ್ಯ ಒಂದು ಸಾವಿರ ಹುದ್ದೆಗಳು ಖಾಲಿ ಇವೆ. 2018ರಲ್ಲಿ ತರಬೇತಿ ಪಡೆದ 560 ಮಂದಿ ವಿವಿಧ ಕಂಪನಿಗಳಲ್ಲಿ ಈಗಾಗಲೇ ಕೆಲಸ ಮಾಡುತ್ತಿದ್ದಾರೆ’ ಎಂದರು.
ನೋಂದಣಿ ನಡೆಯುವ ಸ್ಥಳ: 4ನೇ ಮಹಡಿ, ಶ್ರೀನಾಥ ಕಾಂಪ್ಲೆಕ್ಸ್, ನ್ಯೂ ಕಾಟನ್ ಮಾರ್ಕೆಟ್, ಹುಬ್ಬಳ್ಳಿ. ಸಂಪರ್ಕ ಸಂಖ್ಯೆ: 99868 80868, 91483 49255.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.