ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರಿಗಿಂತಲೂ ಪ್ರಹ್ಲಾದ ಜೋಶಿ ಹೆಚ್ಚು ಅಪಾಯಕಾರಿ. ಆದ್ದರಿಂದ ಅವರನ್ನು ಎಲ್ಲರೂ ಸೇರಿ ಸೋಲಿಸಬೇಕು ಎಂದು ಮೈತ್ರಿ ಪಕ್ಷದ ಅಭ್ಯರ್ಥಿ ವಿನಯ ಕುಲಕರ್ಣಿ ಹೇಳಿದರು.
ನಗರದ ಜೆಡಿಯು ಕಚೇರಿಯಲ್ಲಿ (ಎಂ.ಪಿ. ನಾಡಗೌಡರ ಬಣ) ಗುರುವಾರ ನಡೆದ ಸಭೆಯಲ್ಲಿ ಮಾತನಾಡಿ ‘ಯೋಧರ ಹೆಸರಿನಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಮೂರು ಬಾರಿ ಆರಿಸಿ ಬಂದರೂ ಜೋಶಿ ಏನೂ ಕೆಲಸ ಮಾಡಿಲ್ಲ. ಈ ಬಾರಿ ಆಯ್ಕೆಯಾದರೂ ಏನೂ ಕೆಲಸವಾಗುವುದಿಲ್ಲ’ ಎಂದರು.
ಪಕ್ಷದ ಜಿಲ್ಲಾ ವಕ್ತಾರ ಶೇಖರ ಹೈಬತ್ತಿ ಮಾತನಾಡಿ ‘ಭಾರತದ ಪ್ರತಿಯೊಬ್ಬರಿಗೂ ದೇಶಾಭಿಮಾನಿ ಇರುತ್ತದೆ. ಆದರೆ, ನರೇಂದ್ರ ಮೋದಿ ದೇಶಾಭಿಮಾನದ ನೆಪದಲ್ಲಿ ವೋಟು ಕೇಳುತ್ತಿದ್ದಾರೆ. ಅವರಿಗೆ ಅಧಿಕಾರ ಬೇಕಿರುವುದು ಎಂಜಾಯ್ ಮಾಡಲು’ ಎಂದು ಟೀಕಿಸಿದರು.
‘ಮೂರೂ ಅವಧಿಯಲ್ಲಿ ಏನೂ ಕೆಲಸ ಮಾಡಿದ ಪ್ರಹ್ಲಾದ ಜೋಶಿ ತಾವು ಏನು ಮಾಡಿದ್ದಾರೆ ಎನ್ನುವುದನ್ನು ಹೇಳುವ ಬದಲು ಮೋದಿ ಹೆಸರಲ್ಲಿ ಮತ ಕೇಳುತ್ತಿದ್ದಾರೆ. ಆದ್ದರಿಂದ ಈ ಬಾರಿ ಜೆಡಿಯು ವಿನಯ ಕುಲಕರ್ಣಿಗೆ ಬೆಂಬಲ ನೀಡಲಿದೆ. ಅವರ ಗೆಲುವಿಗೆ ನಾವೆಲ್ಲರೂ ಶ್ರಮಿಸುತ್ತೇವೆ’ ಎಂದರು.
ಕಾಂಗ್ರೆಸ್ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಜೆಡಿಯು ರಾಜ್ಯ ಉಪಾಧ್ಯಕ್ಷೆ ಸಾವಿತ್ರಿ ಗುಂಡಿ, ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಶೈಲಗೌಡರ ಕಮತರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಿರೋಜ್ಖಾನ್ ಹವಾಲ್ದಾರ್, ತಾರಿಕಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.